Home ಅಂಕಣ ಕರಾವಳಿ ಕರ್ನಾಟಕದ ಅಭಿವೃದ್ಧಿಯ ರೂವಾರಿ ಉಳ್ಳಾಲ ಶ್ರೀನಿವಾಸ ಮಲ್ಯ

ಕರಾವಳಿ ಕರ್ನಾಟಕದ ಅಭಿವೃದ್ಧಿಯ ರೂವಾರಿ ಉಳ್ಳಾಲ ಶ್ರೀನಿವಾಸ ಮಲ್ಯ

549
0

ವರ ಬಗ್ಗೆ ಒಂದು ವಿಸ್ತಾರವಾದ ಪುಸ್ತಕ ಬರೆಯುವಷ್ಟು ಮಾಹಿತಿ ಹರಡಿ ಇಟ್ಟುಕೊಂಡು ಇಂದಿನ ಅಂಕಣವನ್ನು ಬರೆಯಲು ಆರಂಭಿಸಿರುವೆ!

1946ರ ಹೊತ್ತಿಗೆ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುಭಾಗ ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 1946ರಿಂದ 1965ರವರೆಗಿನ ಸುದೀರ್ಘವಾದ ಅವಧಿಯಲ್ಲಿ (ಒಟ್ಟು 18 ವರ್ಷ) ಮಂಗಳೂರು ಲೋಕಸಭಾ ಕ್ಷೇತ್ರದ ಎಂಪಿ ಆಗಿದ್ದು ಅವರು ಮಾಡಿದ ಅಭಿವೃದ್ಧಿಯ ಕಾರ್ಯಗಳು, ವಿಧಾಯಕ ಕಾಮಗಾರಿಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ.

ಲೋಕಸಭೆಯಲ್ಲಿ ಅತ್ಯಂತ ಪ್ರಭಾವಿಯಾದ ಸಂಸದರು ಆಗಿದ್ದರೂ, ಪ್ರಧಾನಿ ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಚಕ್ರವರ್ತಿ ರಾಜಗೋಪಾಲಾಚಾರಿ, ಶಾಸ್ತ್ರೀಜಿ, ರಾಜೇಂದ್ರ ಪ್ರಸಾದ್ ಮೊದಲಾದ ನಾಯಕರ ಆಪ್ತ ವಲಯದಲ್ಲಿಯೇ ಇದ್ದರೂ ಯಾವುದೇ ಮಂತ್ರಿ ಪದವಿಯ ಅಪೇಕ್ಷೆ ಮಾಡದೆ ತನ್ನ ಲೋಕಸಭಾ ಕ್ಷೇತ್ರಕ್ಕೆ ಅತ್ಯಂತ ಗಣನೀಯ ಕೊಡುಗೆ ನೀಡಿದ ಶ್ರೀನಿವಾಸ ಮಲ್ಯರನ್ನು ನಾವು ಮರೆಯುವುದು ಹೇಗೆ?

ಆಗರ್ಭ ಶ್ರೀಮಂತ ಕುಟುಂಬದ ಹಿನ್ನೆಲೆ: ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಜನಿಸಿದ್ದು 1902ರ ನವಂಬರ್ 21ರಂದು. ಅವರದ್ದು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬ. ಕೊಂಕಣಿ ಅವರ ಮಾತೃಭಾಷೆ. ಮಂಗಳೂರಿನ ರಥಬೀದಿಯ ಸಮೀಪ ಇರುವ ಬಜೀಲಕೇರಿಯಲ್ಲಿ ಅವರು ಹುಟ್ಟಿದ ಮನೆ ಇದೆ. ಅವರ ತಂದೆ ಬಂಡಸಾಲೆ ಹೊಂದಿದ್ದು ಬಹುದೊಡ್ಡ ವ್ಯಾಪಾರಿ ಆಗಿದ್ದರು.

ಅವರ ಶ್ರೀಮಂತ ಕುಟುಂಬವು ಶತಮಾನಗಳಷ್ಟು ಹಿಂದೆ ಉಳ್ಳಾಲದಿಂದ ಮಂಗಳೂರಿಗೆ ವಲಸೆ ಬಂದಿತ್ತು. ಮಲ್ಯರು ಮೊದಲು ಮಂಗಳೂರಿನ ಪ್ರತಿಷ್ಠಿತವಾದ ಕೆನರಾ ಹೈಸ್ಕೂಲಿನಲ್ಲಿ ಮೆಟ್ರಿಕ್ ಮುಗಿಸಿ ನಂತರ ಪದವಿಯನ್ನು ಪಡೆಯಲು ಮಂಗಳೂರಿನ ಸರಕಾರಿ ಕಾಲೇಜಿಗೆ ಸೇರಿದರು.

ಗಾಂಧೀಜಿಯ ಪ್ರಭಾವದಿಂದ ಡಿಗ್ರೀ ತೊರೆದರು:ಆಗ 1920 ಆಗಸ್ಟ್ 19ರಂದು ಮಂಗಳೂರಿಗೆ ಗಾಂಧೀಜಿ ಬಂದು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ್ದರು. ಆಗ ಸ್ವಾತಂತ್ರ್ಯ ಹೋರಾಟಗಾರರ ಲೀಡರ್ ಆಗಿದ್ದ ಕಾರ್ನಾಡು ಸದಾಶಿವರಾಯರು ಯುವಕರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಸ್ವಾತಂತ್ರ್ಯದ ಹೋರಾಟಕ್ಕೆ ಇಳಿಯಲು ಪ್ರೇರಣೆ ನೀಡಿದರು.

ತಮ್ಮ ಪದವಿ ಶಿಕ್ಷಣದ ಆಸೆಯನ್ನು ತೊರೆದು ಮಲ್ಯರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಖಾದಿ ಬಟ್ಟೆ ಧರಿಸಿದರು. ತಲೆಗೆ ಗಾಂಧಿ ಟೋಪಿ ಬಂದಿತು.

1930ರ ಉಪ್ಪಿನ ಸತ್ಯಾಗ್ರಹ, 1942ರ ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕ್ವಿಟ್ ಇಂಡಿಯಾ ಚಳುವಳಿ ಹೊತ್ತಿನಲ್ಲಿ ಸೆರೆಮನೆಯ ವಾಸವನ್ನು ಅನುಭವಿಸಿದರು. ಅದರ ನಂತರ ಸುದೀರ್ಘ ಅವಧಿಗೆ ಮುಂಬೈಯಲ್ಲಿ ಅವರು ಭೂಗತರಾದರು.

ಮಂಗಳೂರಿನ ಮೊದಲ ಎಂ. ಪಿ. ಆದರು ಮಲ್ಯರು: 1946ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯದ ಸಾಧ್ಯತೆಯು ಗೋಚರ ಆಗತೊಡಗಿತು. ಆಗ ಕಾಂಗ್ರೆಸ್ ಪಕ್ಷವು ದೇಶದ ನಡುಗಾಲದ ಸರಕಾರವನ್ನು ರಚಿಸಿತು. ಆಗ ಮೊದಲ ಬಾರಿ ಮಲ್ಯರು ಸಂಸದರಾಗಿ ನವದೆಹಲಿಯ ಪಾರ್ಲಿಮೆಂಟ್ ಭವನವನ್ನು ಪ್ರವೇಶ ಮಾಡಿದರು.

ಹೃದಯದಲ್ಲಿ ಹೆಪ್ಪುಗಟ್ಟಿದ ಉಜ್ವಲವಾದ ರಾಷ್ಟ್ರಪ್ರೇಮ, ಕಾಂಗ್ರೆಸ್ ಪಕ್ಷದ ಮೇಲೆ ಇದ್ದ ಅಚಲವಾದ ನಂಬಿಕೆ ಅವರನ್ನು ಮುಂದೆ ಗೆಲ್ಲಿಸುತ್ತಾ ಹೋಯಿತು.

1952, 1957 ಮತ್ತು 1962 ಹೀಗೆ ಪ್ರತೀ ಚುನಾವಣೆಯಲ್ಲಿ ಶ್ರೀನಿವಾಸ ಮಲ್ಯರು ಸುಲಭವಾಗಿ ಗೆದ್ದು ಬಂದರು. ನಾನು ಆಗಲೇ ಹೇಳಿದ ಹಾಗೆ ಅವರ ಲೋಕಸಭಾ ಕ್ಷೇತ್ರವು ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುಭಾಗಗಳನ್ನು ಒಳಗೊಂಡಿತ್ತು!

1951ರಲ್ಲಿ ಲಾಲಬಹಾದ್ದೂರ ಶಾಸ್ತ್ರಿ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆದಾಗ ಮಲ್ಯರು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದರು.

ಮುಂದೆ ಕೇಂದ್ರ ಸರ್ಕಾರದ ಮುಖ್ಯ ಸಚೇತಕ ಆದರು. ಆದರೆ ಯಾವುದೇ ಮಂತ್ರಿ ಪದವಿಯು ಅವರ ಕಾಲಬುಡಕ್ಕೆ ಬಂದಾಗಲೂ ಸ್ವೀಕರಿಸಲು ಅವರು ಹಿಂದೇಟು ಹಾಕಿದರು. ಅಧಿಕಾರದ ಸ್ಥಾನಗಳಿಗೆ ಆಸೆ ಪಡಲಿಲ್ಲ. ಅಂದು ಕಾಂಗ್ರೆಸ್ ಪಕ್ಷದ ನೀತಿ ನಿರೂಪಣೆಯ ನೇತೃತ್ವ ವಹಿಸಿದ್ದ ‘ಕಾಂಗ್ರೆಸ್ ಸಿಂಡಿಕೇಟ್’ ಸದಸ್ಯರಾಗಿ ಕಿಂಗ್ ಮೇಕರ್ ಆದರು.

ನೆಹರೂ ನಂತರ ಶಾಸ್ತ್ರೀಜಿ ಪ್ರಧಾನಿಯಾಗಿ ಆಯ್ಕೆ ಆಗಲು, ಇಂದಿರಾ ಗಾಂಧಿ ಸಂಸ್ಕೃತಿ ಮಂತ್ರಿ ಆಗಿ ಮೊದಲ ಬಾರಿಗೆ ಆಯ್ಕೆ ಆಗಲು ಮಲ್ಯರ ಅಭಿಪ್ರಾಯವು ನಿರ್ಣಾಯಕ ಆಗಿತ್ತು ಎಂದರೆ ನಿಮಗೆ ನಂಬಲು ಕಷ್ಟ ಆಗಬಹುದು.

ಕರಾವಳಿಗೆ ಹರಿದು ಬಂತು ಭಾರೀ ಕೊಡುಗೆಗಳು: ಆದರೆ ಇಂದು ನಾವು ಅವರನ್ನು ನೆನಪಿಸಲು ಮುಖ್ಯವಾದ ಕಾರಣ ಅವರ ಅಭಿವೃದ್ದಿಯ ಕೆಲಸಗಳು. ತನ್ನ ಸಂಸದ ಕ್ಷೇತ್ರಕ್ಕೆ ಅವರು ದೊಡ್ಡದಾದ ಕೊಡುಗೆಗಳನ್ನು ಅವರು ತೆಗೆದುಕೊಂಡು ಬಂದರು. ಕೇಂದ್ರ ಸರಕಾರದ ವಿವಿಧ ಮಂತ್ರಾಲಯಗಳನ್ನು ಸುತ್ತಿ ಅನುದಾನ ತರುವುದರಲ್ಲಿ ಅವರಿಗೆ ಅವರೇ ಸಮ.

ಅವರ ವಿಶೇಷ ಮುತುವರ್ಜಿಯಿಂದ ನವ ಮಂಗಳೂರು ಬಂದರು, ಮಂಗಳೂರು ಆಕಾಶವಾಣಿ, ಸರ್ಕ್ಯುಟ್ ಹೌಸ್, ಬಜಪೆ ವಿಮಾನ ನಿಲ್ದಾಣ, ಮಂಗಳೂರು ರಸಗೊಬ್ಬರ ಕಾರ್ಖಾನೆ(ಎಂಸಿಎಫ್), ಮಂಗಳೂರು ಬೆಂಗಳೂರು ರೈಲು ಮಾರ್ಗ, ವೆನ್ಲಾಕ್ ಆಸ್ಪತ್ರೆಯ ನವೀಕರಣ, ಎರಡು ಮುಖ್ಯ ರಾಷ್ಟ್ರೀಯ ಹೆದ್ದಾರಿಗಳು, ಹತ್ತಾರು ಪ್ರಮುಖವಾದ ಸೇತುವೆಗಳು, ಸುರತ್ಕಲ್ ಎನ್.ಐ.ಟಿ.ಕೆ., ಹೀಗೆ ದೊಡ್ಡ ದೊಡ್ಡ ಕೊಡುಗೆಗಳು ಕರಾವಳಿಗೆ ಹರಿದು ಬಂದವು.

ಸುರತ್ಕಲ್ ಎನ್.ಐ.ಟಿ.ಕೆ ಒಲಿದದ್ದು ಹೇಗೆ? ಸುರತ್ಕಲ್ಲಿನ ಎನ್.ಐ.ಟಿ.ಕೆ ಅವರು ಕರಾವಳಿ ಕರ್ನಾಟಕಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಆಗ ಶಾಸ್ತ್ರೀಜಿ ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ ಆಗಿದ್ದರು. ದಕ್ಷಿಣ ಭಾರತಕ್ಕೆ ಒಂದೇ ಒಂದು ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜು ಮಂಜೂರು ಆದ ಸುದ್ದಿ ಮಲ್ಯರಿಗೆ ಅದು ಹೇಗೋ ತಿಳಿಯಿತು.

ಅವರು ಶಾಸ್ತ್ರೀ ಅವರ ಮುಂದೆ ಹೋಗಿ ಅದನ್ನು ಮಂಗಳೂರಿಗೆ ಕೊಡಬೇಕು ಎಂದು ಧರಣಿ ಕೂತರು. ಶಾಸ್ತ್ರೀಜಿ ಅವರು ತುಂಬಾನೇ ನಯವಾಗಿ “ಇಲ್ಲ ಇಲ್ಲ, ಅದನ್ನು ಹೈದರಾಬಾದ್ ಅಥವಾ ಚೆನ್ನೈಯಲ್ಲಿ ಮಾಡೋಣ, ನಿಮ್ಮಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ನೀವು ಹಟ ಮಾಡಬೇಡಿ ಸರ್” ಅಂದರು. ಆದರೆ ಮಲ್ಯರು ಘಂಟೆಗಟ್ಟಲೆ ಕುಳಿತಲ್ಲಿಂದ ಏಳಲೇ ಇಲ್ಲ! ಶಾಸ್ತ್ರಿಗಳಿಗೆ ಉಭಯ ಸಂಕಟವೇ ಆರಂಭವಾಯಿತು.

ಒಂದಿಷ್ಟು ಶರ್ತಗಳನ್ನು ಅವರ ಮುಂದಿಟ್ಟು ತಾನು ಒಂದು ವಾರದಲ್ಲಿ ಸಮೀಕ್ಷೆ ಮಾಡಲು ಬರುತ್ತೇನೆ, ನಿಮಗೆ ಈಗ ಭರವಸೆ ಕೊಡುವುದಿಲ್ಲ ಎಂದರು ಶಾಸ್ತ್ರೀಜಿ.

ಮಲ್ಯರು ಅಲ್ಲಿಂದ ತಮ್ಮ ಮಂಗಳೂರಿನ ಗೆಳೆಯರಾದ ಕುಡ್ವ ಮೊದಲಾದವರನ್ನು ಫೋನ್ ಮೂಲಕ ಸಂಪರ್ಕ ಮಾಡಿ ಮಾರ್ಗದರ್ಶನ ಮಾಡಿದರು. ಶಾಸ್ತ್ರಿಯವರು ಸಮೀಕ್ಷೆ ಮಾಡಲು ಸುರತ್ಕಲ್ಲಿಗೆ ಬಂದಾಗ ಮಲ್ಯರು ಮಾಡಿದ ಭಾರೀ ವ್ಯವಸ್ಥೆಯನ್ನು ನೋಡಿ ಬೆರಗಾದರು. ಮುಂದೆ ಲಾಲ್ ಬಹಾದ್ದೂರ ಶಾಸ್ತ್ರಿಯವರ ಕೈಯ್ಯಿಂದ ಎನ್.ಐ.ಟಿ.ಕೆ ಸಂಸ್ಥೆಯ ಶಂಕುಸ್ಥಾಪನೆಯು ಆಯಿತು.

ಎಲ್ಲಿಗೋ ಮಂಜೂರು ಆಗಿದ್ದ ಎನ್.ಐ.ಟಿ.ಕೆ ನಮ್ಮ ಸುರತ್ಕಲ್ಲಿಗೆ ಬಂದ ಕಥೆ ಇದು! ಇಂದು ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಟ್ಟ ಸಂಸ್ಥೆ ಅದು. ಈಗಲೂ ಮಂಗಳೂರು ಕಡೆಗೆ ಪ್ರಯಾಣಿಸುವಾಗ ಹೆದ್ದಾರಿಯ ಪಕ್ಕದಲ್ಲಿರುವ ಭವ್ಯವಾದ ಎನ್.ಐ.ಟಿ.ಕೆ ಕ್ಯಾಂಪಸ್ ನೋಡುವಾಗ ರೋಮಾಂಚನವೇ ಆಗುತ್ತದೆ. ಮಲ್ಯರ ಬಗ್ಗೆ ಅಭಿಮಾನ ಮೂಡುತ್ತದೆ.

ಮಂಗಳೂರಿನಿಂದ ಕುಂದಾಪುರಕ್ಕೆ ಹೋಗಲು ಬೇಕಿತ್ತು 10 ಘಂಟೆ: ಆಗ ಮಂಗಳೂರಿನಿಂದ ಕಾರವಾರಕ್ಕೆ ಹೋಗುವ ಪ್ರಮುಖ ದಾರಿಯಲ್ಲಿ 16 ದೊಡ್ಡ ಹೊಳೆಗಳು ಅಡ್ದ ಹರಿಯುತ್ತಿದ್ದವು. ಮಂಗಳೂರಿನಿಂದ ಕುಂದಾಪುರಕ್ಕೆ ನಡುವೆ ಒಟ್ಟು ಆರು ಹೊಳೆಗಳು. ದಾಟಿ ಹೋಗಲು ಬಸ್ಸು ಇಳಿದು ಫೆರ್ರಿ ಬೋಟ್ ಏರಬೇಕು ಮತ್ತು ಅಲ್ಲಿಂದ ಪುನಃ ಬೇರೆ ಬಸ್ ಕಾಯಬೇಕು. ಹಾಗೆ ಹೀಗೆ ಅಂತ ಮಂಗಳೂರಿನಿಂದ ಕುಂದಾಪುರಕ್ಕೆ ತಲುಪಲು ಕನಿಷ್ಟ 10 ಘಂಟೆಯ ಅವಧಿಯು ಬೇಕಿತ್ತು.

ಮಲ್ಯರ ಕಾಲದಲ್ಲಿ ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಬ್ರಹ್ಮಾವರ, ಕಲ್ಯಾಣಪುರ, ಗಂಗೊಳ್ಳಿಯ ಸೇತುವೆಗಳು ಪೂರ್ತಿಯಾದವು. ಈಗ ಬಸ್ಸುಗಳಲ್ಲಿ ಕೇವಲ ಎರಡು ಘಂಟೆಗಳ ಅವಧಿಯಲ್ಲಿ ಮಂಗಳೂರಿನಿಂದ ಕುಂದಾಪುರಕ್ಕೆ ಹೆದ್ದಾರಿಯ ಮೂಲಕ ತಲುಪಲು ಸಾಧ್ಯವಾಗಿದೆ. ಮತ್ತೆ ಮತ್ತೆ ಮಲ್ಯರು ನೆನಪಾಗುವುದು ಇಂತಹ ಕಾರಣಕ್ಕೆ.

ಶ್ರೀನಿವಾಸ್ ಮಲ್ಯರು ಮಾಡಿದ ಅಭಿವೃದ್ಧಿ ಕೆಲಸಗಳಿಂದ ಇಂದು ಕರಾವಳಿ ಕರ್ನಾಟಕವು ಭಾರೀ ಅಭಿವೃದ್ದಿಯನ್ನು ಹೊಂದಲು ಸಾಧ್ಯವಾಯಿತು. ಅವರ ದೂರದೃಷ್ಟಿ ಮತ್ತು ಸಂಕಲ್ಪ ಶಕ್ತಿಗಳು ಅಸಾಧಾರಣ ಆಗಿದ್ದವು.

1965ರ ಡಿಸೆಂಬರ್ 19 ರಂದು ಶ್ರೀನಿವಾಸ ಮಲ್ಯರು ದೆಹಲಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಇಡೀ ರಾಷ್ಟ್ರವು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿತು. ಅವರಿಗೆ ಮಕ್ಕಳು ಇರಲಿಲ್ಲ.

ಮಲ್ಯರನ್ನು ಮಂಗಳೂರು ಮರೆಯಲಿಲ್ಲ: ಮುಂದೆ ಮಂಗಳೂರಿನ ಎನ್.ಎಂ.ಪಿ.ಟಿ ಮತ್ತು ಪದುವಾ ಶಾಲೆಗಳ ಮುಂಭಾಗದಲ್ಲಿ ಮಲ್ಯರ ಆಳೆತ್ತರದ ಪ್ರತಿಮೆಗಳು ನಿರ್ಮಾಣವಾದವು. ಎನ್.ಐ.ಟಿ.ಕೆ ಸಂಸ್ಥೆಯಲ್ಲಿ ಅವರ ಹೆಸರಿನ ಒಂದು ಸುಸಜ್ಜಿತವಾದ ಸಭಾಂಗಣ ಆಗಿದೆ. 2002ರಲ್ಲಿ ಜಿಲ್ಲಾಡಳಿತವು ಅವರ ಜನ್ಮ ಶತಾಬ್ದಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿ ಅವರನ್ನು ಗೌರವಿಸಿತು. ನಗರದ ಕೇಂದ್ರದಲ್ಲಿ ಇರುವ ಪಡೀಲ್ ಪಂಪವೆಲ್ ಜೋಡಿಸುವ ರಸ್ತೆಗೆ ಅವರ ಹೆಸರಿಡಲಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕರಾವಳಿ ಕರ್ನಾಟಕದ ಪ್ರತಿಯೊಬ್ಬರೂ ಅವರನ್ನು ಹೃದಯದಲ್ಲಿ ಧಾರಣೆ ಮಾಡುವ ಅಗತ್ಯ ಇದೆ. ಈಗಿನ ಜನಾಂಗಕ್ಕೆ ಉಳ್ಳಾಲ ಶ್ರೀನಿವಾಸ ಮಲ್ಯ ಅವರ ಕೊಡುಗೆಗಳು ಮರೆತು ಹೋಗಬಾರದು. ಉಳ್ಳಾಲ ಶ್ರೀನಿವಾಸ ಮಲ್ಯ ಅವರಿಗೆ ನಮ್ಮೆಲ್ಲರ ಅತೀವ ಭಾವಪೂರ್ಣ ಶೃದ್ಧಾಂಜಲಿಗಳು.

-ರಾಜೇಂದ್ರ ಭಟ್ ಕೆ.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.