ನಾಗಾರಾಧನೆ ಅಥವಾ ನಾಗದೇವತಾರಾಧನೆ ಈ ಭೂಮಿಯಲ್ಲಿ ಇಂದು ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ಇಂದು ನಾಗರಪಂಚಮಿ ನಿಮಿತ್ತ ನಾಗಾರಾಧನೆ ಕುರಿತ ಲೇಖನ ಇದಾಗಿದೆ.
ಹಿಂದಿನ ಯುಗದಲ್ಲಿ ಋಷಿಮುನಿಗಳ ತಪಸಮಯದಲ್ಲಿ ದೇವತೆ -ಗಂಧರ್ವ- ಯಕ್ಷ – ಕಿನ್ನರ ನಾಗರಾದಿಯಾಗಿ ಎಲ್ಲರೊಳಗೂ ನಿಕಟ ಸಂಪರ್ಕವಿತ್ತು, ಆದರೆ ಕಾಲ ಕಳೆದಂತೆ ಮನುಷ್ಯನ ಮನಸ್ಸು ಕಿರಿದಾಗತೊಡಗಿದಾಗ ಸಂಪರ್ಕ ಸಂಬಂಧಗಳ ಕೊಂಡಿಕಳಚಿ ಬಿತ್ತು. ಮನುಷ್ಯ ಬೇರೆಯಾಗಿ ಉಳಿದ, ಬೆಳೆದ. ಬಳಿಕ ಪ್ರಕೃತಿಯ ಶಕ್ತಿಗಳನ್ನೇ ಸಾಂಕೇತಿಕವಾಗಿ ಆರಾಧಿಸತೊಡಗಿದ.
ಪರಿಸರ ಸಮತೋಲನದ ಶಕ್ತಿ: ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು (ಸಪ೯)ಕೃಷಿಯನ್ನು ನಾಶ ಮಾಡುವ ಇತರ ಜೀವಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ.
ಶ್ರಾವಣ ಮಾಸದಲ್ಲಿ ನಾಗಪೂಜೆ: ಶ್ರಾವಣಮಾಸ ಎಂದರೆ ಮಳೆ ಬೀಳುವ ಸಮಯ. ಈ ಸಮಯ ನಾಗನ ಬಿಲಗಳಲ್ಲಿ ನೀರು ತುಂಬುತ್ತವೆ. ಆದ್ದರಿಂದ ನಾಗಗಳು ಹುತ್ತ, ಬಿಲದಿಂದ ಹೊರಬರುತ್ತವೆ. ಹೊಲಗದ್ದೆಗಳಲ್ಲಿ ಸುತ್ತಾಡುತ್ತವೆ. ಫಸಲು ಹಾಳು ಮಾಡುವ ಜಂತುಗಳನ್ನು ತಿಂದು ಫಸಲು ಹಾಳಾಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಾಗಪೂಜೆಗೆ ಆದ್ಯತೆ ನೀಡುತ್ತಾ ಬರಲಾಗಿದೆ ಎಂಬುದಾಗಿ ಹಿರಿಯ ಜನರ ಅಭಿಪ್ರಾಯ.
ಶಿವನು ನಾಗಾಭರಣನಾದರೆ, ನಾರಾಯಣನು ಶೇಷಶಯನ. ಗಣಪತಿಯು ನಾಗನನ್ನು ಜನಿವಾರವಾಗಿ ಧರಿಸುತ್ತಾನೆ, ಇದರಿಂದ ಶೈವರಾಗಲಿ, ವೈಷ್ಣವರಾಗಲಿ, ನಾಗಾರಾಧನೆ ಎಂಬುದು ಸಮಾನವಾಗಿ ಬಳಕೆಯಲ್ಲಿದೆ. ಜ್ಯೋತಿಷ್ಯದಲ್ಲಿ ರಾಹುವಿಗೂ ನಾಗನಿಗೂ ಅನ್ಯೋನ್ಯ ಸಂಬಂಧವಿರುವುದರಿಂದ ಅನೇಕ ರೀತಿಯಾಗಿ ನಾಗಾನುಗ್ರಹ ಹಾಗೂ ನಾಗ ದೋಷಗಳ ಬಗ್ಗೆ ಪರಿಕಲ್ಪನೆಯಿದೆ.
ಹಬ್ಬಗಳು ಸಂಬಂಧಗಳ ಬೆಳಸುವ ಮಾರ್ಗಗಳು: ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ, ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ. ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ ,ಪಕ್ಕದಲ್ಲಿ ಕೆರೆ ಅಥವಾ ನೀರಿನ ತಾಣಗಳು ಈ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಕಲ್ಲು ಸಿಮೆಂಟುಗಳ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ನಾಗಗಳು ಬಂಧಿಸಲ್ಪಟ್ಟಿವೆ.
ಉರಗ ರಕ್ಷಕರ ಪ್ರಕಾರ ನಾಗಗಳು ತಂಪಾದ ಜಾಗದಲ್ಲಿ ಇರಲು ಬಯಸುವ ಜೀವಿಗಳಾಗಿವೆ ಹೀಗಾಗಿ ನಾಗಬನದಲ್ಲಿ ಇರುವಷ್ಟು ಉತ್ತಮ ಗಿಡ ಮರಗಳು ಬೇರೆ ಕಡೆ ಸಿಗಲಾರದು. ನಾಗಬನಗಳು ಪ್ರಕೃತಿಯ ರಕ್ಷಣೆ ಮಾಡುವ ಕೇಂದ್ರಗಳಾಗಿತ್ತು. ನಾಗನಿಗೆ ಪ್ರಿಯವಾದ ಹೂ, ಹಣ್ಣಿನ ಮರಗಳು ಇಲ್ಲಿರುತ್ತಿತ್ತು.
ನಾಗಬನಗಳ ಪುನರ್ ನವೀಕರಣ ಹೆಸರಿನಲ್ಲಿ ಹಳೆಯ ನಾಗಬನಗಳು ದೂರವಾಗಿ ಕೇವಲ ಕಾಂಕ್ರಿಟ್ ಗುಡಿಗಳು ತಲೆ ಎತ್ತಿವೆ ಅಲ್ಲಿರುವ ಅಮೂಲ್ಯವಾದ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಅಲ್ಲಿ ವಾಸ ಮಾಡುವ ಪಕ್ಷಿಗಳಿಗೆ, ವಿವಿಧ ಜೀವ ಜಂತುಗಳಿಗೆ ತೊಂದರೆ ಯಾಗುತ್ತಿದೆ. ಕೇವಲ ಆಡಂಬರದ ಆಚರಣಿಯಲ್ಲಿ ಪ್ರಕೃತಿಯ ಮೇಲಿನ ಪ್ರೀತಿ ದೂರವಾಗುತ್ತಿದೆ.
ನಾಗಬನಗಳು ಮೂಲ ಸ್ವರೂಪದಲ್ಲಿದ್ದರೆ ಮಾತ್ರ ಪ್ರಕೃತಿಗೆ ವರವಾಗಬಹುದಾಗಿದೆ. ನಾಗರ ಪಂಚಮಿಯ ಮೂಲ ಸ್ವರೂಪ ತಿಳಿಯದೆ, ಕೇವಲ ಅಭಿಷೇಕ ಮಾಡಿದರೆ ನಮ್ಮ ಕೆಲಸ ಮುಗಿಯಿತು ಅಲ್ಲ ಬದಲಾಗಿ ನಾಗಬನವೆಂಬ ಈ ಪ್ರಕೃತಿಯ ತಾಣ ಉಳಿಸಿ ಬೆಳೆಸಬೇಕು. ಇನ್ನಾದರೂ ಈ ಬಗ್ಗೆ ಗಮನ ಹರಿಸಬೇಕು. ಪ್ಲಾಸ್ಟಿಕ್ ಮುಕ್ತ ಉತ್ತಮ ಬನಗಳ ನಿರ್ಮಾಣವಾದರೆ ಮಾತ್ರ ಪ್ರಕೃತಿ ಉಳಿಯಬಹುದು.
-ರಾಘವೇಂದ್ರ ಪ್ರಭು ಕರ್ವಾಲು




By
ForthFocus™