Home ಅಂಕಣ ಅಬ್ಬನಡ್ಕ ಮತ್ತು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವಗಳು

ಅಬ್ಬನಡ್ಕ ಮತ್ತು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಉತ್ಸವಗಳು

436
0

ಬೆಳ್ಮಣ್ಣು ದೇವಸ್ಥಾನದ ಉತ್ಸವ ಮೈದಾನವಾಗಿರುವ ಅಬ್ಬನಡ್ಕ ಎನ್ನುವುದು ಐತಿಹಾಸಿಕ ಪ್ರಸಿದ್ಧಿಯುಳ್ಳ ಮೈದಾನ. ತುಳುನಾಡ ಸಿರಿಯು ಇದೇ ಅಡ್ಕದಲ್ಲಿ ನಂತರದ ಕಾಲದಲ್ಲಿ ಆಶ್ರಯ ಪಡೆದಿದ್ದಳು. ಆಗ ಬೆಳ್ಮಣ್ಣು ತಾಯಿಯ ದರ್ಶನ ಪಡೆದಿದ್ದಳು, ಪ್ರಾರ್ಥಿಸಿದ್ದಳು ಎಂಬ ಉಲ್ಲೇಖಗಳು ಸಿಗುತ್ತವೆ. (ಸುತ್ತಲೂ ವನ ಪ್ರದೇಶದಿಂದ ಆವರಿಸಿರುವ ಪ್ರಕೃತಿಯ ರಮಣೀಯ ಸಣ್ಣ ಪ್ರಸ್ಥಭೂಮಿ. ದೊಡ್ಡ ಪ್ರಸ್ಥಭೂಮಿಗೆ ಪದವು ಎಂಬ ಹೆಸರು.)

ಇದು ಅಪ್ಪೆನ ಅಡ್ಕ ಅಬ್ಬನಡ್ಕವಾಗಿದೆ. ಅಪ್ಪೆ ಎಂದರೆ ತಾಯಿ. ತಾಯಿ ಅಂದರೆ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಅಮ್ಮ. (ಉಡುಪಿಯಲ್ಲಿ ಅಮ್ಮನ ಪಾಡಿ ಅಂಬಲಪಾಡಿ ಆದ ಹಾಗೆ). ಅಬ್ಬನಡ್ಕವು ಬೆಳ್ಮಣ್ಣು ಅಮ್ಮನ ಉದ್ಭವ ಸ್ಥಳಗಳಲ್ಲಿ ಒಂದು. ಈ ಪ್ರದೇಶದಲ್ಲಿ ದೇವಿಯ ಮೂಲ ಸಾನ್ನಿಧ್ಯ ಇದೆ. ಅಲ್ಲಿ ಪತ್ತನಾಜೆಯ ದಿನ ಬೆಳ್ಮಣ್ಣು ದೇವಿಯ ಪೂಜೆ ಮತ್ತು ಸಮಾರಾಧನೆ ನಡೆಯುತ್ತದೆ.

ಕನ್ನಡದ ಮೊದಲನೆಯ ತಾಮ್ರ ಶಾಸನ ಸಿಕ್ಕಿದ ಬೆಳ್ಮಣ್ಣು ದೇವಸ್ಥಾನದಲ್ಲಿ ಸಿಕ್ಕಿದ ತಾಮ್ರ ಶಾಸನವು ಎಂಟನೆಯ ಶತಮಾನದ್ದು. ಹಾಗಾಗಿ ದೇವಸ್ಥಾನವು ಅದಕ್ಕಿಂತಲೂ ಹಿಂದಿನದು. ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಹಿಂದಿನ ದೇವಾಲಯ ಇದು.

ದೇವಿಯ ಆರಟ ಉತ್ಸವದ ಸಂದರ್ಭದಲ್ಲಿ ಮೂರು ಆಚರಣೆಗಳು ಇಲ್ಲಿ ನಡೆಯುತ್ತವೆ.
1. ಚೆಂಡು: ಮಾರ್ಚ್ 15, 16, 17 ಮೂರು ದಿನಗಳ ಕಾಲ ಈ ಮೈದಾನದಲ್ಲಿ ಸುತ್ತಮುತ್ತಲಿನ ಊರವರು ದೇವಿಯ ಪ್ರೀತ್ಯರ್ಥವಾಗಿ ಚೆಂಡಾಟ ಆಡುತ್ತಾರೆ.

2. ಕಟ್ಟೆಪೂಜೆ: ಮಾರ್ಚ್ 18 ರ ಆರಟಕ್ಕಿಂತ ಎರಡುದಿನಗಳ ಹಿಂದೆ (ಮಾರ್ಚ್ 16) ರಾತ್ರಿ ಮೂಡುಸವಾರಿ ಅಂದರೆ ದೇವಳದ ಮೂಡುದಿಕ್ಕಿನಲ್ಲಿರುವ ಅಬ್ಬನಡ್ಕದಲ್ಲಿ ದೇವರ ಉತ್ಸವಮೂರ್ತಿ ಆಗಮಿಸಿ ಕಟ್ಟೆಪೂಜೆ ಸ್ವೀಕರಿಸುವ ಸಂಭ್ರಮ ಇದೆ.

3. ಆರಟ: ಮಾರ್ಚ್ 18 ರ ಪ್ರಸಿದ್ಧ ಆರಟದ ಸಂಜೆ ನಾಲ್ಕರಿಂದ ನೂರಾರು ಕಟ್ಟೆ ಪೂಜೆ ನಡೆದು ಮುಂಜಾನೆ (ಮಾರ್ಚ್ 19) ಸುಮಾರು ನಾಲ್ಕು ಗಂಟೆ ಹೊತ್ತಿಗೆ ದೇವರ ದರ್ಶನ ಬಲಿ, ಗಡಿ ದೈವ ಮತ್ತು ಬಂಟನ ಭೇಟಿ ನಡೆಯುತ್ತದೆ. ಜತೆಗೆ ಅಬ್ಬನಡ್ಕದ ಒಂದು ಬದಿಯಲ್ಲಿ ಸೂಟೆಧಾರೆ ನಡೆಯುತ್ತಿರುತ್ತದೆ. ಇಂತಹ ಪಾರಂಪರಿಕ ವೈಭವ ಬೇರೆಲ್ಲೂ ಕಾಣಸಿಗದು.

ಸಿರಿಯ ಆಶ್ರಯದಾಣ – ಕಾರ್ಣಿಕ
ದೇವಿಯ ಈ ಮೈದಾನದಲ್ಲಿ ಸುಮಾರು ನಾಲ್ಕು ನೂರು ಐದುನೂರು ವರ್ಷಗಳ ಹಿಂದೆ ತುಳುನಾಡ ಸಿರಿ ಆಶ್ರಯ ಪಡೆದಿದ್ದಳು. ಆಕೆಯನ್ನು ಬೋಳದರಸರು ಕಾಣುವುದು ಇಲ್ಲಿಯೆ. ಕುಮಾರನನ್ನೂ ದಾರುವನ್ನೂ ಮಾಯ ಮಾಡುವುದು ಇಲ್ಲಿಯೆ. ಮುಂದೆ ಅವಳ ಮಗಳು-ಅಳಿಯ ಮೊಮ್ಮಕ್ಕಳು (ಅಬ್ಬಗ ದಾರಗ- ಮಾಯದ ರೂಪಿನಲ್ಲಿ) ಅಬ್ಬನಡ್ಕಕ್ಕೆ ಬಂದ ಉಲ್ಲೇಖ ತುಳು ಪಾರ್ದನಗಳಲ್ಲಿವೆ. ಹೀಗೆ ತುಳುನಾಡಿನ ಇತಿಹಾಸ ಪ್ರಸಿದ್ಧ ಪುಣ್ಯ ಸ್ಥಳ ಅಬ್ಬನಡ್ಕ. ಇದು ಬೆಳ್ಮಣ್ಣು, ನಂದಳಿಕೆ, ಬೋಳ ಎಂಬ ತ್ರಿವಳಿ ಊರುಗಳ ತ್ರಿವೇಣಿ ಸಂಗಮ. ಕೋಟಿ ಚೆನ್ನಯರು ಅಬ್ಬನಡ್ಕಕ್ಕೆ ಬಂದಿದ್ದರೆಂದು ಐತಿಹ್ಯ ಇದೆ.

ಲೇಖನ: – ಡಾ. ಬಿ. ಜನಾರ್ದನ ಭಟ್ (ಹಿರಿಯ ಸಾಹಿತಿ, ಬೆಳ್ಮಣ್ಣು)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.