Home ಸುದ್ಧಿಗಳು ಪ್ರಾದೇಶಿಕ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಭಿಯಾನ

ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಅಭಿಯಾನ

483
0

ಉಡುಪಿ: ಅಂತರಾಷ್ಟ್ರ‍ೀಯ ಜೀವವ್ಯವಿಧ್ಯ ದಿನಾಚರಣೆ-2021 ಅಭಿಯಾನವು ಜುಲೈ 17 ರಿಂದ ಆಗಸ್ಟ್ 15ರವರೆಗೆ ನಡೆಯಲಿದ್ದು, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ 2021 ರ ಅಭಿಯಾನ ಕಾರ್ಯಕ್ರವು ಬಡಗಬೆಟ್ಟು ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಜರುಗಿತು.

‘ಪ್ರಕೃತಿಗೆ ಒದಗಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ಕೂಡ ಪಾಲುದಾರರಾಗಿದ್ದೇವೆ’ ಎಂಬ ಧ್ಯೇಯವಾಕ್ಯದೂಂದಿಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಸಣ್ಣ ಪುಟ್ಟ ಕೀಟದಿಂದ ಹಿಡಿದು ದೊಡ್ಡ ಪ್ರಾಣಿಯವರೆಗೆ ಎಲ್ಲರೂ ಒಟ್ಟು ಸಹಬಾಳ್ವೆಯಿಂದ ಬದುಕುವುದೇ ಜೀವವೈವಿಧ್ಯತೆ. ಈ ನಿಟ್ಟಿನಲ್ಲಿ ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಬ್ದಾರಿ ಎಂದರು.

ಕುಂದಾಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾತನಾಡಿ, ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳನ್ನು ರಕ್ಷಿಸಿ, ಜೀವವೈವಿಧ್ಯತೆಯನ್ನು ಮುಂದಿನ ಪೀಳಿಗೆಯವರೆಗೆ ಉಳಿಸಿಕೊಂಡು ಸಂರಕ್ಷಿಸಬೇಕಾಗಿದೆ. ಹಾಗೂ ಸಾವಿರಾರು ಜೀವತಳಿಗಳು ವಿನಾಶದ ಅಂಚಿನಲ್ಲಿವೆ ಇವುಗಳನ್ನು ಉಳಿಸುವ ದೃಷ್ಟಿಯಿಂದ ನಾವು ಕಾರ್ಯಪ್ರವೃತ್ತರಾಗಬೇಕು. ಪ್ರಕೃತಿ ಸಮತೋಲನಕ್ಕೆ ಎಲ್ಲಾ ಜೀವರಾಶಿಗಳ ರಕ್ಷಣೆ ಅಗತ್ಯ. ಪ್ರಕೃತಿ ಮನುಷ್ಯನಿಗೆ ಅತ್ಯಮೂಲ್ಯವಾದ ವರದಾನಗಳನ್ನು ನೀಡಿದೆ ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಭಾರ) ಪ್ರಶಾಂತ್ ಮಾತನಾಡಿ, ಪ್ರಕೃತಿ ಎಲ್ಲರಿಗೂ ಬೇಕು, ಗಾಳಿ ಎಲ್ಲರಿಗೂ ಬೇಕು ಆದರೆ ಪೋಷಣೆ ಯಾರಿಗೂ ಬೇಡ. ಈ ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವವೈವಿಧ್ಯಗಳಿಂದಾಗಿ. ಪಶ್ಚಿಮಘಟ್ಟಗಳು ಜೀವವೈವಿಧ್ಯದ ತಾಣ. ವಿಶ್ವದ ಅತ್ಯಂತ ವಿಶಿಷ್ಟವಾದ ಜೀವರಾಶಿಗಳು ಇಲ್ಲಿ ಕಾಣಸಿಗುತ್ತವೆ. ಸ್ಥಾನಿಕವಾಗಿ ಜಿಲ್ಲಾ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿನ ನಿಸರ್ಗ ಸಂಪತ್ತಿನ ಪರಿಸ್ಥಿತಿಯ ಅವಲೋಕನವಾಗಬೇಕು, ಕೆರೆಗಳ ಪುನಶ್ಚೇತನ, ವನಗಳ ಪುನಶ್ಚೇತನ ಕಾರ್ಯಗಳಲ್ಲಿ ಜನತೆ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಜೀವವೈವಿಧ್ಯ ಜಾಗೃತಿ ಅಭಿಯಾನವನ್ನು ಸರ್ಕಾರದ ವತಿಯಿಂದ ರೂಪಿಸಲಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರು ಮತ್ತು ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಡಾ .ಎನ್ .ಎ .ಮಧ್ಯಸ್ಥ, ಹಿರಿಯ ವಿಜ್ಞಾನಿ ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮುಖ್ಯಸ್ಥ ಡಾ.ಬಿ.ಧನಂಜಯ ಮುಂತಾದವರು ಉಪಸ್ಥಿತರಿದ್ದರು.

ಜೀವವೈವಿಧ್ಯ ಕ್ಷೇತ್ರದಲ್ಲಿ ಜಿಲ್ಲೆ/ ತಾಲೂಕಿನಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ ಆರೂರು ಮಂಜುನಾಥ ರಾವ್ (ಔಷಧೀಯ ಸಸ್ಯಗಳ ಜ್ಞಾನವುಳ್ಳವರು), ಕಿಟ್ಟಿ ಪೂಜಾರ್ತಿ (ಮನೆಮದ್ದು/ ನಾಟಿವೈಧ್ಯರು ) ಇವರನ್ನು ಸನ್ಮಾನಿಸಲಾಯಿತು.

ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಧವಿ.ಎಸ್ ಆಚಾರ್ಯ, ಜಿಲ್ಲಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯರು, ಜಿಲ್ಲಾಮಟ್ಟದ ತಾಂತ್ರಿಕ ಪರಿಣಿತ ಸಮಿತಿಯ ಸದಸ್ಯರು, ಇಲಾಖಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಮಾಜಿಕ ಅರಣ್ಯ ವಲಯ ಉಡುಪಿ ವಲಯ ಅರಣ್ಯಾಧಿಕಾರಿ ರವೀಂದ್ರ ಪಿ. ಆಚಾರ್ಯ ಸ್ವಾಗತಿಸಿ, ಸಾಮಾಜಿಕ ಅರಣ್ಯ ವಲಯ ಕುಂದಾಪುರ ವಲಯ ಅರಣ್ಯಾಧಿಕಾರಿ ತುಳಸಿ ವಂದಿಸಿದರು. ಸಾಮಾಜಿಕ ಅರಣ್ಯ ವಲಯ ಕುಂದಾಪುರ ಉಪ ವಲಯ ಅರಣ್ಯಾಧಿಕಾರಿ ಸಂಗೀತಾ ಶೆಡ್ತಿ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.