ಕೋಟ, ಜ.28: ದೇಶ ಸೇವೆಗಾಗಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಯಾಗಬೇಕಿದೆ ಎಂದು ನಿವೃತ್ತ ವಾಯುಸೇನಾ ಅಧಿಕಾರಿ ಶ್ರೀಧರ್ ಭಟ್ ಹೇಳಿದರು. ಅವರು ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಆವರಣದಲ್ಲಿ ನಿಲ್ಲಿಸಲಾದ ಮಿಗ್-21 ಯುದ್ಧ ವಿಮಾನದ ಬಳಿ ನಡೆದ 77ನೇ ಗಣರಾಜ್ಯೋತ್ಸವದ ಅಂಗವಾಗಿ ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಕೋಟ ಹಾಗೂ ಕರಾವಳಿ ನಿವೃತ್ತ ಯೋಧರ ಸಂಘ ಹಮ್ಮಿಕೊಂಡ ನಿವೃತ್ತ ಯೋಧರ ಸಮಾಗಮ ಹಾಗೂ ಸೈನಿಕರ ಕನಸು ಎಂಬ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮಿಗ್ 21 ವಿಮಾನ ಕೋಟಕ್ಕೆ ನೆಲೆಯಾಗಲು ಕಾರಣೀಕರ್ತರಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವಿಕ ನುಡಿಗಳಲ್ಲಿ ಮಿಗ್ 21 ಯುದ್ಧ ಮಿಮಾನಕ್ಕಾಗಿ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮನವಿ ನೀಡಿದನ್ನು ನೆನಪಿಸಿ ಪ್ರಸ್ತುತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹಕಾರವನ್ನು ಸಭೆಯಲ್ಲಿ ಸ್ಮರಿಸಿದರು. ಧ್ವಜಾರೋಹಣವನ್ನು ಉದ್ಯಮಿ ಡಾ.ಕೆ ಪ್ರಕಾಶ್ ಶೆಟ್ಟಿ ಬಂಜಾರು ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಯೋಧರ ತ್ಯಾಗ ಬಲಿದಾನ ಕೊಂಡಾಡಿದರು.
ವಿವಿಧ ವಿಭಾಗಗಳಲ್ಲಿ ದೇಶ ಸೇವೆಯಲ್ಲಿ ಭಾಗಿಯಾಗಿ ನಿವೃತ್ತರಾದ ಯೋಧರಾದ ಶ್ರೀಧರ್ ಭಟ್, ವ್ಯಾಸರಾಜ್, ಮೋಹನದಾಸ್ ಶೆಟ್ಟಿ, ಗೌರಯ್ಯ, ಸುನಿಲ್, ಶಿವಪ್ರಸಾದ್, ಸುಧಾಕರ್ ದೇವಾಡಿಗ, ಯಶವಂತ್ ಶೆಟ್ಟಿ, ಶ್ರೀನಿವಾಸ್ ಗಾಣಿಗ, ಶ್ರೀಪಾದ್ ಶಾಸ್ತ್ರಿ, ವಾಯುಸೇನೆ, ಭೂಸೇನೆ, ನೌಕಾ ಸೇನೆಯಲ್ಲಿ ನಿವೃತ್ತ ಅಧಿಕಾರಿಗಳಾದ ಮೇಜರ್ ಜನರಲ್ ಎಮ್.ವಿ ಭಟ್, ನಿವೃತ್ತ ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಮತ್ತು ನಿವೃತ್ತ ಕಮಾಂಡರ್ ಅತುಲ್ ಕುಮಾರ್ ರಸ್ತೋಗಿ ಇವರುಗಳಿಗೆ ವಿಶೇಷ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಕುಂದಾಪುರ ಉಪವಿಭಾಗದ ಆಯುಕ್ತೆ ರಶ್ಮಿ ಎಸ್., ಉದ್ಯಮಿಗಳಾದ ಸುಗ್ಗಿ ಸುಧಾಕರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಕೋಟ ಅಮೃತೇಶ್ವರೀ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ನಿವೃತ್ತ ಯೋಧ ಅನೂಪ್ ಪೂಜಾರಿ ಪತ್ನಿ ಮಂಜುಶ್ರೀ ಮೆರವಣಿಗೆಗೆ ಚಾಲನೆ ನೀಡಿದರು.
150 ವರ್ಷ ಸಂಭ್ರಮದಲ್ಲಿರುವ ವಂದೇ ಮಾತರಂ ಗೀತೆಯನ್ನು ವಿಜಯ ಭಟ್ ಕಡೆಕಾರ್ ಹಾಡಿದರು. ಯೋಧರ ಕುರಿತಾಗಿ ನಿವೃತ್ತ ವಾಯು ಸೇನಾಧಿಕಾರಿ ಶ್ರೀನಿವಾಸ್ ಗಾಣಿಗ ಪರಿಚಯಿಸಿದರು. ಕೋಟತಟ್ಟು ಗ್ರಾಮ ಪಂಚಾಯತ್ ಪಿಡಿಒ ರವೀಂದ್ರ ರಾವ್ ನಿರೂಪಿಸಿದರು. ಕಾರಂತ ಹುಟ್ಟೂರ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಸ್ವಾಗತಿಸಿ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ವಂದಿಸಿದರು.




By
ForthFocus™