ಉಡುಪಿ, ಮಾ.26: ಪುತ್ತೂರು ಬ್ರಾಹ್ಮಣ ಮಹಾಸಭಾ ವತಿಯಿಂದ ಮಹಿಳಾ ದಿನಾಚರಣೆಯನ್ನು ಭಗವತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಗ್ರಹದಲ್ಲಿ ಆಚರಿಸಲಾಯಿತು. ಡಾ. ಶ್ರೀಧರ ಬಾಯಿರಿ ಇವರ ನೇತೃತ್ವದ ದುರ್ಗಾ ಆರೋಗ್ಯ ಘಟಕದ ವತಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಹಂಡೆದಾಸ ಪ್ರತಿಷ್ಠಾನದ ಸಂಸ್ಥಾಪಕಿ ರುಕ್ಮಿಣಿ ಹಂಡೆ ಇವರಿಂದ ಮಹಾಸತಿ ಅನುಸೂಯ ಎಂಬ ವಿಷಯದ ಬಗ್ಗೆ ಹರಿಕಥಾ ಕಾಲಕ್ಷೇಪ ನಡೆಯಿತು. ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷರಾದ ಕಾಂತಿ ರಾವ್, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿ ಸಾಧನೆಗೈದ ಸುಮತಿ ಭಟ್, ಹಾಗೂ ಹರಿಕಥಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ರುಕ್ಮಿಣಿ ಹಂಡೆ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂತಿ ರಾವ್ ಮಾತನಾಡಿ, ಮಹಿಳೆಯರು ಪ್ರಸ್ತುತ ಕಾಲಘಟ್ಟದಲ್ಲಿ ಸದ್ಗೃಹಿಣಿಯಾಗಿ ಮನೆಯನ್ನು ನಿರ್ವಹಿಸುವುದು ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಹಾಗೂ ಇದಕ್ಕೆ ಸಮಾಜದ ಎಲ್ಲರ ಪ್ರೋತ್ಸಾಹ ಅತ್ಯಗತ್ಯವಾಗಿದೆ ಮತ್ತು ಈ ನಿಟ್ಟಿನಲ್ಲಿ ಪುತ್ತೂರು ಬ್ರಾಹ್ಮಣ ಮಹಾಸಭಾ ಅಂತಹ ಅಪೂರ್ವ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ವರ್ಷಗಳಲ್ಲಿ ಬ್ರಾಹ್ಮಣ ಮಹಾಸಭಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾಜಿ ಮಹಿಳಾ ಅಧ್ಯಕ್ಷರುಗಳಾದ ಸರೋಜಾ ಭಟ್, ನಿರ್ಮಲಾ ಭಟ್ ಕೊಡಂಕೂರು, ಪ್ರಿಯಂವದಾ ಐತಾಳ್ ಹಾಗೂ ಮಾಜಿ ಕಾರ್ಯದರ್ಶಿಗಳಾದ ವೇದಾವತಿ ಭಟ್ ಮತ್ತು ಪದ್ಮಿನಿ ಭಟ್ ಇವರನ್ನು ಮಹಾಸಭಾದ ವತಿಯಿಂದ ಗೌರವಿಸಲಾಯಿತು. ಆಪದ್ಬಾಂಧವ ಸಮಿತಿಯ ವತಿಯಿಂದ ಅಶಕ್ತರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನಸಹಾಯವನ್ನು ಯಶೋಧ ಪಿ.ಆರ್. ಅವರು ಹತ್ತಾಂತರಿಸಿದರು. ಸ್ಪಂದನ ಬುದ್ಧಿಮಾಂದ್ಯ ಶಾಲೆಗೆ ಧನಸಹಾಯ ನೀಡಿದವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೇಹಾ ಇವರಿಂದ ಭಾವಗೀತೆ ಕಾರ್ಯಕ್ರಮ ನಡೆಯಿತು.
ಮಹಾಸಭಾದ ಅಧ್ಯಕ್ಷರಾದ ಶುಭಾ ಬಾಳ್ತಿಲ್ಲಾಯ ಪೃಸ್ತಾವನೆಗೈದು ಸ್ವಾಗತಿಸಿದರು. ಪದ್ಮಿನಿ ಭಟ್, ಅನ್ನಪೂರ್ಣ ಉಪ್ಪೂರ, ಜಯಂತಿ ಉಡುಪ, ಸುನೀತಾ ಚೈತನ್ಯ, ಶ್ರೀಲಕ್ಷ್ಮಿ ಸಹಕರಿಸಿದರು. ಆಪತ್ಬಾಂಧವ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಉಡುಪ, ವಿಜಯಕುಮಾರ್ ಉಪಸ್ಥಿತರಿದ್ದರು. ಗೀತಾ ಭಟ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಮಂಜುಳಾ ಪ್ರಸಾದ್ ವಂದಿಸಿದರು.




By
ForthFocus™