Home ಸುದ್ಧಿಗಳು ಪ್ರಾದೇಶಿಕ ಉಡುಪಿ ಜಿಲ್ಲೆಯಲ್ಲಿ ಮಹಿಳಾ ಶಕ್ತಿಯ ಮೂಲಕ ಕೊಳಚೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಿದ್ದತೆ

ಉಡುಪಿ ಜಿಲ್ಲೆಯಲ್ಲಿ ಮಹಿಳಾ ಶಕ್ತಿಯ ಮೂಲಕ ಕೊಳಚೆ ಮುಕ್ತ ಗ್ರಾಮ ನಿರ್ಮಾಣಕ್ಕೆ ಸಿದ್ದತೆ

446
0

ಸ್ವಚ್ಛ ಭಾರತ್ ಮಿಷನ್ (ಗ್ರಾ) ಕಾರ್ಯಕ್ರಮದಡಿ ದ್ರವ ತ್ಯಾಜ್ಯ ನಿರ್ವಹಣೆ ಪ್ರಮುಖ ಘಟಕಾಂಶವಾಗಿದ್ದು, ಗ್ರಾಮಗಳಲ್ಲಿ ದಿನನಿತ್ಯ ಸ್ನಾನದ ಮನೆಯಿಂದ, ಪಾತ್ರೆ ತೊಳೆಯುವುದರಿಂದ, ಬಟ್ಟೆ ಒಗೆಯುವುದಿಂದ ಮನೆಗಳಲ್ಲಿ ಉತ್ಪತ್ತಿಯಾಗುವ, ಹಾಗೂ ಹೋಟೆಲ್, ಮದುವೆ ಹಾಲ್ ಇತ್ಯಾದಿ ವಾಣಿಜ್ಯ ಕೇಂದ್ರಗಳಿಂದ ಉತ್ಪತ್ತಿಯಾಗುವ ಬೂದು ನೀರನ್ನು ಕಿಚನ್ ಗಾರ್ಡನ್ ಮೂಲಕ, ವೈಯಕ್ತಿಕ ಅಥವಾ ಸಮುದಾಯ ಹಂತದ ಸೋಕ್ ಪಿಟ್ ನಿರ್ಮಾಣ ಅಥವಾ ಇತರೇ ಸೂಕ್ತ ವಿಧಾನದ ಮೂಲಕ ವೈಜ್ಞಾನಿಕವಾಗಿ ಮಾಡಬೇಕಾಗುತ್ತದೆ.

ಇದಕ್ಕಾಗಿ ಸಮರ್ಪಕ ದ್ರವ ತ್ಯಾಜ್ಯ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳ ವಿಸ್ತೃತಾ ಯೋಜನೆಯನ್ನು ಸಿದ್ದಪಡಿಸಿ, ಯೋಜನೆಯ ಅನುಷ್ಠಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ಅದರಂತೆ ಪ್ರಥಮ ಹಂತದಲ್ಲಿ ದ್ರವ ನಿರ್ವಹಣೆ ಕುರಿತಂತೆ ಪ್ರತಿ ತಾಲೂಕಿನಲ್ಲಿ ಒಂದೊಂದು ಗ್ರಾಮ ಪಂಚಾಯತ್ ಗಳನ್ನು ಗುರುತಿಸಿ, ಆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ, ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಗ್ರಾಮಗಳನ್ನು ನಿರ್ಮಾಣ ಮಾಡಲು ಕೊಳಚೆ ಮುಕ್ತ ಗ್ರಾಮದೆಡೆ ಮಹಿಳಾ ಶಕ್ತಿ ನಡೆ – ದ್ರವ ತ್ಯಾಜ್ಯ ನಿರ್ವಹಣೆ ವಿಶೇಷ ಅಭಿಯಾನ ಎಂಬ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮದ ಮೂಲಕ ದ್ರವ ತ್ಯಾಜ್ಯ ನಿರ್ವಹಣೆ ಕುರಿತಂತೆ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಿ ಮನೆ ಮನೆಯಲ್ಲಿ ಸೋಕ್ ಪಿಟ್ ನಿರ್ಮಿಸಿಕೊಳ್ಳುವಂತೆ ಪ್ರೇರೆಪಣೆ ನೀಡಲಾಗುತ್ತದೆ. ಹಾಗೂ ಸಮುದಾಯದಲ್ಲಿ ಇವರ ಮೂಲಕ ಅರಿವು ಮೂಡಿಸಲಾಗುತ್ತದೆ.

ಉಡುಪಿಯ ತಾಲೂಕಿನ ಕೊಡಿಬೆಟ್ಟು, ಬ್ರಹ್ಮಾವರದ ಚೇರ್ಕಾಡಿ, ಕಾಪುವಿನ ಎಲ್ಲೂರು, ಕುಂದಾಪುರದ ಹಕ್ಲಾಡಿ, ಬೈಂದೂರಿನ ಗೋಳಿಹೊಳೆ, ಹೆಬ್ರಿ ಮಡಾಮಕ್ಕಿ ಹಾಗೂ ಕಾರ್ಕಳದ ಹಿರ್ಗಾನ ಗ್ರಾಮ ಪಂಚಾಯತ್ ಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.

ಸೋಕ್ ಪಿಟ್ ನಿರ್ಮಾಣ ಹೇಗೆ: ಮನೆಯೊಂದಕ್ಕೆ 1.44 ಚದುರ ಮೀ ನಲ್ಲಿ 0.6 ಮೀ ವ್ಯಾಸದ ಮತ್ತು 1.8 ಮೀ ಆಳದ ಇಂಗು ಗುಂಡಿ ನಿರ್ಮಿಸಬಹುದು.ಜಾಗ ಕಡಿಮೆ ಇದ್ದು ಹಲವಾರು ಮನೆಗಳಿದ್ದರೆ ಸಾಮೂಹಿಕ ಇಂಗು ಗುಂಡಿ ನಿರ್ಮಿಸಬಹುದು. ಇದು ಒಣ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟಲು ಹೆಚ್ಚಲು ಅತ್ಯಂತ ಸಹಕಾರಿಯಾಗಲಿದೆ.

ಈ ಗುಂಡಿಗಳ ನಿರ್ಮಾಣಕ್ಕೆ ಪರಿಣಿತರ ಹಾಗೂ ತಂತ್ರಜ್ಞರ ಅಗತ್ಯವಿಲ್ಲ. ಇದನ್ನು ನಿರ್ಮಿಸಲು ತಗಲುವ ವೆಚ್ಚ ಅತ್ಯಂತ ಕಡಿಮೆ ಇದ್ದು, ಉದ್ಯೋಗ ಖಾತರಿ ಯೋಜನೆಯಡಿ ಆರ್ಥಿಕ ನೆರವೂ ಸಹ ದೊರೆಯಲಿದೆ. ನಿರ್ವಹಣೆಯೂ ಸುಲಭವಾಗಿದ್ದು, 5-6 ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕಾಗುತ್ತದೆ.

ಸೋಕ್ ಪಿಟ್ ನಿರ್ಮಾಣದಿಂದ ಬೂದು ನೀರನ್ನು ಸಮರ್ಪಕವಾಗಿ ಬಳಸಲು ಸಹಕಾರಿಯಾಗಲಿದ್ದು, ಬೂದು ನೀರು ಅಲ್ಲಲ್ಲಿ ನಿಲ್ಲುವುದು ತಪ್ಪುತ್ತದೆ, ಈ ನೀರನ್ನು ಕಿಚನ್ ಗಾರ್ಡನ್ ಗಳಿಗೆ ಬಳಸಬಹುದಾಗಿದ್ದು, ಇದರಿಂದ ವ್ಯರ್ಥವಾಗಿ ನೀರಿ ಹರಿದು ಹೋಗುವುದು ತಪ್ಪುವುದರೊಂದಿಗೆ ಸುಂದರ ಪರಿಸರ ನಿರ್ಮಾಣವಾಗಲಿದೆ.

ಡಿಸೆಂಬರ್ 18 ರಂದು ಉಡುಪಿಯ ಕೊಡಿಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ಇದರಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮ, ದ್ರವ ತ್ಯಾಜ್ಯ ವಿಸ್ತೃತಾ ಯೋಜನಾ ವರದಿಯ ಮಂಡನೆ ಮತ್ತು ಚರ್ಚೆ, ವಿವಿಧ ಕಿರುಚಿತ್ರಗಳ ಪ್ರದರ್ಶನ, ದ್ರವ ತ್ಯಾಜ್ಯ ನಿರ್ವಹಣೆ ವಸ್ತುಪ್ರದರ್ಶನ, ಸೋಕ್ ಪಿಟ್ ನಿರ್ಮಾಣದ ಪ್ರಾತ್ಯಕ್ಷಿಕೆ, ವಾಣಿಜ್ಯ ಕೇಂದ್ರಗಳಿಗೆ ತೆರಳಿ ಅರಿವು ಮೂಡಿಸುವುದು ಮುಂತಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ದ್ರವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಸೋಕ್‌ಪಿಟ್ ಗಳ ನಿರ್ಮಾಣ ಸಹಕಾರಿಯಾಗಲಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿ ಸೋಕ್ ಪಿಟ್ ನಿರ್ಮಾಣ ಮಾಡಿಕೊಳ್ಳುವ ಮೂಲಕ ಕೈ ತೋಟ, ಪೌಷ್ಠಿಕ ತೋಟಗಳನ್ನು ನಿರ್ಮಿಸಿಕೊಳ್ಳಬಹುದಾಗಿದ್ದು, ಈ ವಿಧಾನ ಜಿಲ್ಲೆಗೆ ಹೆಚ್ಚು ಸೂಕ್ತವಾಗಲಿದೆ.

ಇದರಿಂದ ವೈಜ್ಞಾನಿಕ ರೀತಿಯಲ್ಲಿ ಅಂತರ್ಜಲದ ವೃದ್ಧಿಯೂ ಆಗಲಿದೆ. ಈ ಬಗ್ಗೆ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.