Home ಅಂಕಣ ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ

ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ

2889
0

ಡಾ. ಬಿ. ಜನಾರ್ದನ ಭಟ್ ಅವರು ನಮ್ಮ ನಡುವಿನ ಬಹುಮುಖ ಪ್ರತಿಭೆಯ ಸಾಹಿತಿಗಳಲ್ಲಿ ಒಬ್ಬರು. ಆಂಗ್ಲಭಾಷಾ ಸಾಹಿತ್ಯದ ಪ್ರಕಾಂಡ ಪಾಂಡಿತ್ಯವನ್ನು ಪಡೆದ ಅವರು ಬಹುಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಇಂಗ್ಲಿಷ್, ತುಳು, ಕನ್ನಡ, ಸಂಸ್ಕೃತ ಮೊದಲಾದ ಭಾಷೆ ಹಾಗೂ ಸಾಹಿತ್ಯಗಳಲ್ಲಿ ಪಾಂಡಿತ್ಯವನ್ನು ಹೊಂದಿರುವ ಅವರು ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಬಣ್ಣ ಬನಿಯನ್ನು ಗಾಢಗೊಳಿಸಲು ಶ್ರಮಿಸುತ್ತಾ ಬಂದಿದ್ದಾರೆ.

ಡಾ. ಜನಾರ್ದನ ಭಟ್ ಅವರು ನಮ್ಮ ನಾಡಿನ ಗಣ್ಯ ವಿಮರ್ಶಕರಲ್ಲಿ ಒಬ್ಬರು. ಕತೆ, ಕಾದಂಬರಿಗಳಂತೆ ವಿಮರ್ಶೆಯೂ ಅವರ ಪ್ರಧಾನ ಆಸಕ್ತಿಗಳಲ್ಲಿ ಒಂದು ಎಂಬುದು ಬೆರಗುಗೊಳ್ಳುವ ಸಂಗತಿ. ಕಾರಯಿತ್ರಿ ಹಾಗೂ ಭಾವಯಿತ್ರಿ ಪ್ರತಿಭೆಗಳೆರಡರ ಸಂಗಮವನ್ನು ನಾವು ಅವರಲ್ಲಿ ಕಾಣಬಹುದು. ಜಗದಗಲದ ಸಾಹಿತ್ಯಕ ವಿದ್ಯಮಾನಗಳ ಬಗೆಗೆ, ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಕುರಿತು, ಪ್ರಯೋಗಗಳ ಹಾಗೂ ಅದರ ಆಶೋತ್ತರಗಳ ಕುರಿತು ವಿವರವಾಗಿ ಅಧಿಕೃತವಾಗಿ ಮಾತಾಡಬಲ್ಲ, ಸಮೃದ್ಧವಾದ ಓದು, ಅಧ್ಯಯನ ನಡೆಸಿದ ವಿರಳ ವಿದ್ವಾಂಸರಾಗಿಯೂ ಕೂಡ ಅವರು ಗುರುತಿಸಲ್ಪಡುತ್ತಾರೆ.

ಸಾಹಿತ್ಯಾವಲೋಕನದ ರಸಜ್ಞತೆ, ಹೊಸದೃಷ್ಟಿ, ಒಳನೋಟ, ಸೂಕ್ಷಚಿಂತನ, ತುಲನಾತ್ಮಕ ನೋಟ ಅವರ ವಿಮರ್ಶೆಯಲ್ಲಿ ಒಡೆದುಕಾಣುವ ಆಂಶಗಳು. ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಹಾಗೂ ಭಾರತೀಯ ಕಾವ್ಯ ಮೀಮಾಂಸೆ ಇವೆರಡರ ಆಳವಾದ ಅಧ್ಯಯನ, ಜಿಜ್ಞಾಸೆ ಡಾ.ಭಟ್ ಅವರ ವಿಮರ್ಶೆಯ ವೈಶಿಷ್ಟ್ಯ. ಸಮಗ್ರತೆಯೇ ಅವರ ವಿಮರ್ಶೆಯ ಗುರಿ ಹಾಗೂ ಬಹುಮುಖ್ಯ ಕಾಣಿಕೆ. ಪ್ರಸ್ತುತ ಕೃತಿ, ‘ಸಾಹಿತ್ಯ ವಿಮರ್ಶೆ: ಒಂದು ಕೈಪಿಡಿ’ ಕನ್ನಡದ ವಿಮರ್ಶೆಯ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಬಹು ಮೌಲಿಕವಾದ ಕೃತಿ.

ಶ್ರೀರಾಮ ಪ್ರಕಾಶನ, ಮಂಡ್ಯ. 2021
ಬೆಲೆ: ರೂ. 375

– ಡಾ. ಜಿ. ಎನ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ.
ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ.

ಪರಿವಿಡಿ
ಭಾಗ: ಒಂದು
ಸಾಹಿತ್ಯ ವಿಮರ್ಶೆ: ಒಟ್ಟು ನೋಟ
1. ಸಾಹಿತ್ಯ ವಿಮರ್ಶೆ ಅಂದರೆ ಏನು? 2. ವಿಮರ್ಶೆಯ ಮೂರು ಆಯಾಮಗಳು, 3. ಶಿಕ್ಷಣದಲ್ಲಿ ಸಾಹಿತ್ಯ: ಇಂಗ್ಲೆಂಡಿನಲ್ಲಿ ಮತ್ತು ಇಲ್ಲಿ, 4. ಸಾಹಿತ್ಯ ಶಿಕ್ಷಣ ಮತ್ತು ವಿಮರ್ಶೆ, 5. ಕನ್ನಡದಲ್ಲಿ ಕಾಣಿಸಿಕೊಂಡ ಕೃತಿ ವಿಮರ್ಶೆ, 6. ವಿಮರ್ಶೆಯ ಪ್ರಸ್ಥಾನಗಳ ಸ್ಥೂಲ ನೋಟ, 7. ಪ್ರಾಯೋಗಿಕ ವಿಮರ್ಶೆ ಕವಿತೆ – ರೂಪನಿಷ್ಠ ವಿಧಾನ, ಕಾದಂಬರಿ – ರಾಚನಿಕ ವಿಧಾನ.

ಭಾಗ: ಎರಡು
ಸಾಹಿತ್ಯ ವಿಮರ್ಶೆಯ ಪ್ರಸ್ಥಾನಗಳು ಪ್ರವೇಶ
ಅ. ಕರ್ತೃ ಕೇಂದ್ರಿತ ವಿಮರ್ಶೆ, ಅ.1ಕರ್ತೃನಿಷ್ಠ ವಿಮರ್ಶೆ (Biological Criticism), ಅ.2 ಮನೋವೈಜ್ಞಾನಿಕ ವಿಮರ್ಶೆ (Psychological Criticism). ಇ. ಕೃತಿನಿಷ್ಠ ವಿಮರ್ಶಾ ಪ್ರಸ್ಥಾನಗಳು, ಇ. 1. ರೂಪನಿಷ್ಠ ವಿಮರ್ಶೆ (Formalist Criticism):(ಇ.1.1.ಬ್ರಿಟಿಷ್ ರೂಪನಿಷ್ಠ ವಿಮರ್ಶೆ:, ಇ.1.2. ಅಮೇರಿಕದ ನ್ಯೂ ಕ್ರಿಟಿಸಿಸಂ., ಇ. 1.3. ರಷ್ಯನ್ ರೂಪನಿಷ್ಠ ವಿಮರ್ಶೆ), ಇ. 2. ರಾಚನಿಕ ವಿಮರ್ಶೆ (Structuralist criticism), ಇ. 3 ಕಥನ ಶಾಸ್ತ್ರ (Narratology)

ಇ. 4. ಪ್ರಕಾರ (ಪ್ರಭೇದ ವಿಮರ್ಶೆ (Genre criticism), ಇ. 5. ಶೈಲಿ ಶಾಸ್ತ್ರ (Stylistics), ಇ 6. ಚಿರಂತನ ಪ್ರತೀಕ ವಿಮರ್ಶೆ (Archetyapal Criticism), ಇ.7 ರಾಚನಿಕೋತ್ತರ ವಿಮರ್ಶೆ: (Post-structural Criticism), (ಉ) ಸಮಾಜ ನಿಷ್ಠ ವಿಮರ್ಶೆ, ಉ.1.ಮಾರ್ಕ್ಸ್ವಾದಿ ವಿಮರ್ಶೆ (Marxist Criticism), ಉ.2 ಸ್ತ್ರೀವಾದಿ ವಿಮರ್ಶೆ(Feminist Criticism), ಉ.3. ಚಾರಿತ್ರಿಕ ವಿಮರ್ಶೆ (Historical Criticism), ಉ.4. ನವಚಾರಿತ್ರಿಕ ವಿಮರ್ಶೆ – ಸಾಂಸ್ಕೃತಿಕ ಭೌತಿಕವಾದ (New Historicist Criticism- Cultural Materialism)

ಉ.5. ವಸಾಹತೋತ್ತರ ವಿಮರ್ಶೆ (Post Colonial Criticism), ಉ.6. ಆಧುನಿಕೋತ್ತರ ವಿಮರ್ಶೆ (Post Modernism), (ಬ.) ತೌಲನಿಕ ಸಾಹಿತ್ಯ ವಿಮರ್ಶೆ, ಬ.1. ಭಾಷಾಂತರ ಅಧ್ಯಯನ -Translation Studies, ಬ.2. ತೌಲನಿಕ ಕಾವ್ಯ ಮೀಮಾಂಸೆ Comparative Poetics, ಬ.3. ವಸ್ತು ಸಮಾನತೆಯನ್ನಾಧರಿಸಿದ ಅಧ್ಯಯನ – Thematic Studies ಅಥವಾ Thematics, ಬ.4. ಪ್ರಭಾವ ಅಧ್ಯಯನ – Influence Studies, ಬ.5. ಪ್ರಭೇದ ಅಧ್ಯಯನ – Genre Studies, (ಕ.) ವಾಚಕ ಸ್ಪಂದನ ಮತ್ತು ಸ್ವೀಕಾರ ಸಿದ್ಧಾಂತಗಳು Reader Response and Reception Theories

ಭಾಗ: ಮೂರು
ಪೂರಕ ಬರಹಗಳು
1.ಭರತ, 2.ಅರಿಸ್ಟಾಟಲ್, 3.ಲಾಂಜೈನಸ್, 4.ಆನಂದವರ್ಧನ, 5.ಅಭಿನವಗುಪ್ತ, 6.ಧನಂಜಯ, 7. ನಾರ್ಥ್ರಾಪ್ ಫ್ರೈ, 8. ರೂಪನಿಷ್ಠ ವಿಮರ್ಶೆ, 9. ರಾಚನಿಕ ವಿಮರ್ಶೆ, 10.ನಿರಚನ, 11. ಸಣ್ಣಕತೆ ಹಾಗೂ ಕಾದಂಬರಿಯ ಬಗ್ಗೆ, 12. ಪಾರಿಭಾಷಿಕ ಪದಗಳು

ಅನುಬಂಧ – ಕೃತಿ ವಿಮರ್ಶೆ
1. ‘ಮೃಚ್ಛಕಟಿಕ’ (ನಾಟಕ) – ಪ್ರಕಾರ ಮತ್ತು ಸಮನ್ವಯ ವಿಮರ್ಶೆ, 2. ಮಾಂತ್ರಿಕ ಕಾದಂಬರಿ (ಕಾದಂಬರಿ) – ರಾಚನಿಕ ಮತ್ತು ಸಮನ್ವಯ ವಿಮರ್ಶೆ, 3. ಕಾರಂತರ ಕಾದಂಬರಿಗಳ ರಚನಾ ವಿನ್ಯಾಸ – ರಾಚನಿಕ ಮಾದರಿ.

ಈ ವರ್ಷ ಅಂದರೆ 2021 ರಲ್ಲಿ ನಾನು ರಚಿಸಿದ ಎರಡು ಕೃತಿಗಳಲ್ಲಿ ಒಂದು ಈಗ ಪ್ರಕಟವಾಗಿ ನನ್ನ ಕೈಸೇರಿದೆ. ಅದು ‘ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ’. (‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಮತ್ತೆ ನಾವು ಹಿಂದಿನಂತೆ’ 2020 ರಲ್ಲಿ ಪ್ರಕಟವಾದ ಕೃತಿಗಳು; ಅದಕ್ಕಿಂತಲೂ ಹಿಂದೆ ಬರೆದವು). ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಈ ವಿಷಯದ ಮೇಲೆ ಉಪನ್ಯಾಸ ನೀಡಿದ ಮೇಲೆ ನನಗೆ ಈ ಕೃತಿಯನ್ನು ರಚಿಸಬೇಕೆಂದು ಪ್ರೇರಣೆ ನೀಡಿದವರು ಡಾ. ಜಿ. ಎನ್. ಉಪಾಧ್ಯರು.

ನಾನು ಮಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ಇಲಾಖೆಯ ಇಂಗ್ಲಿಷ್ ಎಂ.ಎ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ‘ಲಿಟರರಿ ಕ್ರಿಟಿಸಿಸಮ್: ಥಿಯರಿ ಅಂಡ್ ಪ್ರಾಕ್ಟಿಸ್’ ವಿಷಯದ ಬಗ್ಗೆ ಬೋಧನೆ ನಡೆಸುತ್ತಿರುವುದು ಸಹಾಯಕ್ಕೆ ಬಂತು. ಇದು ಸಾಹಿತ್ಯದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ರಚಿಸಿದ ಸರಳ ಪರಿಚಯದ ಕೃತಿ. ಇತರ ಸಾಹಿತ್ಯಾಸಕ್ತರಿಗೂ ಉಪಯುಕ್ತವಾದೀತು ಎನ್ನುವುದು ನನ್ನ ನಂಬಿಕೆ. ಪ್ರಕಾಶಕರು ಈ ವಾರ ಪುಸ್ತಕಗಳನ್ನು ನವಕರ್ನಾಟಕ ಮತ್ತು ಅಂಕಿತ ಪುಸ್ತಕ ಮಳಿಗೆಗೆ ತಲುಪಿಸುವುದಾಗಿ ಹೇಳಿದ್ದಾರೆ. 360 ಪುಟಗಳ, ದಪ್ಪ ರಟ್ಟಿನ ಪುಸ್ತಕ ಇದು. ಆಸಕ್ತರು 9481145775 ಸಂಖ್ಯೆಗೆ ವಾಟ್ಸಪ್ ಮಾಡಿ ತರಿಸಿಕೊಳ್ಳಬಹುದು.
-ಡಾ. ಬಿ. ಜನಾರ್ದನ ಭಟ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.