Home ಅಂಕಣ ಬೆಲೆ ಏರಿಕೆ ಮತ್ತು ಜನಸಂಖ್ಯಾ ಏರಿಕೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಕಾಲ ಬಂದಿದೆ

ಬೆಲೆ ಏರಿಕೆ ಮತ್ತು ಜನಸಂಖ್ಯಾ ಏರಿಕೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಕಾಲ ಬಂದಿದೆ

494
1

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಸ್ತುಗಳ ಬೆಲೆ ನಿರ್ಧರಿಸುವುದು ದೊಡ್ಡ ಸವಾಲೂ ಹೌದು. ಮಿತಿ ಮೀರಿ ಜನ ಸಂಖ್ಯೆ ಏರುತ್ತಿರುವ ನಮ್ಮ ದೇಶದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕಾದರೆ ಅಗತ್ಯ ವಸ್ತುಗಳ ಉತ್ಪಾದನೆ ಹೆಚ್ಚಿಸುವುದು ಒಂದು ಉಪಾಯವಾದರೆ ಇನ್ನೊಂದು ಪ್ರಮುಖವಾದ ಉಪಾಯವೆಂದರೆ ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು.

ಭಾರತದಲ್ಲಿ ವಸ್ತುಗಳ ದರವನ್ನು ನಿರ್ಧರಿಸುವುದು ಮತ್ತು ಜನಸಂಖ್ಯಾ ನಿಯಂತ್ರಣ ಎರಡು ತುಂಬಾ ಕ್ಲಿಷ್ಟಕರವಾದ ವಿಷಯಗಳೆಂದು ನಾನು ಓದಿದ ಅರ್ಥಶಾಸ್ತ್ರ ಹೇಳುತ್ತದೆ. ಯಾವುದೇ ವಸ್ತುವಿನ ದರ ನಿರ್ಧರಿಸುವುದು ಆಯಾಯ ಮಾರುಕಟ್ಟೆಗಳೇ ಆಗಿರುತ್ತದೆ. ವಸ್ತುವಿಗೆ ಬೇಡಿಕೆ ಜಾಸ್ತಿಯಾಗಿ ಸರಬರಾಜು ಕಡಿಮೆ ಆದಾಗ ವಸ್ತುಗಳ ದರ ಸ್ವಾಭಾವಿಕವಾಗಿ ಜಾಸ್ತಿಯಾಗುತ್ತದೆ. ಅದೇ ವಸ್ತುಗಳ ಪೂರೈಕೆ ಜಾಸ್ತಿಯಾಗಿ ಬೇಡಿಕೆಗಳು ಕಡಿಮೆಯಾದಾಗ ದರಗಳು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಇದು ಸಾಮಾನ್ಯವಾಗಿ ಮಾರುಕಟ್ಟೆ ನಿರ್ಧರಿಸುವ ವಸ್ತುಗಳ ದರ ನೀತಿ.

ಜನರ ಆದಾಯವೂ ಜಾಸ್ತಿಯಾದಾಗ ಅವರ ಖರೀದಿಯ ಸಾಮಾರ್ಥ್ಯವೂ ಹೆಚ್ಚಾಗುತ್ತದೆ. ಅದೇ ಪ್ರಮಾಣದಲ್ಲಿ ವಸ್ತುಗಳು ಪೂರೈಕೆ ಇದ್ದಾಗ ಬೆಲೆ ಸಮತೋಲನವಾಗಿ ನಿಲ್ಲುತ್ತದೆ. ಇಲ್ಲದೇ ಇದ್ದಲ್ಲಿ ದರಗಳು ಏರು ಪೇರಾಗುವುದು ದರದ ಇನ್ನೊಂದು ಆರ್ಥಿಕ ನೀತಿ. ವಸ್ತುಗಳ ದರ ಏರುವಿಕೆ ಮತ್ತು ಇಳಿವಿಕೆಗಳು ಸಂದರ್ಭಾನುಸಾರವಾಗಿ ಸುಖ ಕಷ್ಟಗಳನ್ನು ಆಯಾಯ ಫಲಾನುಭವಿಗಳಲ್ಲಿ ಸೃಷ್ಟಿ ಮಾಡುತ್ತದೆ ಅನ್ನುವುದಕ್ಕೆ ಉದಾಹರಣೆ ನೀಡುವುದಿದ್ದರೆ ಕೃಷಿ ವಸ್ತುಗಳಿಗೆ ಬೆಲೆ ಜಾಸ್ತಿಯಾದಾಗ ಅದನ್ನು ಬೆಳೆದ ರೈತರಿಗೆ ಖುಷಿ. ಆದರೆ ಅದೇ ವಸ್ತುಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸುವ ಗ್ರಾಹಕನಿಗೆ ಬೆಲೆ ಏರಿಕೆ ಅನ್ನುವ ಬಿಸಿ ತಾಗುತ್ತದೆ. ಅಂದರೆ ಈ ಎರಡು ವರ್ಗದ ಖುಷಿ ಬಿಸಿಗಳನ್ನು ಸಮತೂಗಿಸುವುದು ಹೇಗೆ ಅನ್ನುವುದೇ ಸಾಮಾನ್ಯ ಮಾರುಕಟ್ಟೆಯ ಇನ್ನೊಂದು ಜ್ವಲಂತ ಸಮಸ್ಯೆ. ಹಾಗಾಗಿ ಭಾರತದಂತಹ ಮಿಶ್ರ ಆರ್ಥಿಕ ನೀತಿ ಇರುವ ದೇಶದಲ್ಲಿ ಸರಕಾರವೇ ಎಲ್ಲವನ್ನೂ ಸರಕಾರವೇ ನಿರ್ಧರಿಸಲು ಸಾಧ್ಯವೇ? ಅನ್ನುವುದು ನಮ್ಮ ಮುಂದಿರುವ ಮೂಲಭೂತ ಪ್ರಶ್ನೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಿಂದಲೇ ನಾವು ಖರೀದಿಸಬೇಕಾದ ಕೆಲವೊಂದು ವಸ್ತುಗಳಾದ ಪೆಟ್ರೋಲಿಯಂ ವಸ್ತುಗಳ ಪೂರೈಕೆ ದರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವುಗಳ ಲಭ್ಯತೆ ಹಾಗೂ ಇನ್ನಿತರ ಅಂತರರಾಷ್ಟ್ರೀಯ ನೀತಿ ಮತ್ತು ಸಂಬಂಧಗಳ ನೆಲೆಯಲ್ಲಿ ಇಂತಹ ಪದಾರ್ಥಗಳ ದರ ನಿರ್ಧಾರವಾಗುವ ಸಂದರ್ಭದಲ್ಲಿ; ಅದನ್ನೇ ಜೀವನಾಡಿಯಾಗಿ ಬಳಸುವ ನಮ್ಮಂತಹ ದೇಶಗಳಲ್ಲಿ ಪ್ರತಿ ವಸ್ತು ಮತ್ತು ಬದುಕಿನ ಮೇಲೆ ನೇರವಾಗಿ ಪರಿಣಾಮ ಬೀರುವ ವಸ್ತುಗಳಾದ ಕಾರಣ ನಮ್ಮ ಜನ ಜೀವನದ ಆರ್ಥಿಕ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಅನ್ನುವುದನ್ನು ಸರ್ಕಾರ ಮತ್ತು ಜನಸಾಮಾನ್ಯರ ಅರಿವಿಗೂ ಬಂದಿರುತ್ತದೆ ಮಾತ್ರವಲ್ಲ ಬಂದಿರಬೇಕು.

ಅಂತೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಸ್ತುಗಳ ಬೆಲೆ ನಿರ್ಧರಿಸುವುದು ದೊಡ್ಡ ಸವಾಲೂ ಹೌದು. ಮಿತಿ ಮೀರಿ ಜನ ಸಂಖ್ಯೆ ಏರುತ್ತಿರುವ ನಮ್ಮ ದೇಶದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕಾದರೆ ಅಗತ್ಯ ವಸ್ತುಗಳ ಉತ್ಪಾದನೆ ಹೆಚ್ಚಿಸುವುದು ಒಂದು ಉಪಾಯವಾದರೆ ಇನ್ನೊಂದು ಪ್ರಮುಖವಾದ ಉಪಾಯವೆಂದರೆ ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು. ಇದನ್ನು ಹಲವು ವರುಷಗಳಿಂದ ಆರ್ಥಶಾಸ್ತೃಜ್ಞರು ಸರಕಾರಕ್ಕೆ ಸಲಹೆ ನೀಡುತ್ತಾ ಬಂದಿದ್ದರು. ಪ್ರತಿಯೊಂದು ಸರ್ಕಾರ ಕೂಡ ಕುಟುಂಬ ಯೋಜನಾ ನೀತಿಯನ್ನು ಓಟ್ ಬ್ಯಾಂಕ್ ನೀತಿಯನ್ನಾಗಿ ಮಾಡಿಕೊಂಡ ಕಾರಣ ಇಂದಿನವರೆಗೆ ಕೂಡ ಜನಸಂಖ್ಯಾ ನಿಯಂತ್ರಣ ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗದ ಪರಿಸ್ಥಿತಿ ನಮ್ಮದಾಗಿತ್ತು.

ಅಂತೂ ಇತ್ತೀಚಿನ ದಿನಗಳಲ್ಲಿ ಕೆಲವೊಂದು ರಾಜ್ಯಗಳು ದಿಟ್ಟ ಹೆಜ್ಜೆ ಮುಂದಿಡಲು ಯೋಜನೆ ರೂಪಿಸುತ್ತಿರುವುದು ಶುಭ ಸುದ್ದಿ ಎಂದೇ ಭಾವಿಸಬೇಕಾಗಿದೆ. ಬೆಲೆ ಏರಿಕೆ ಅನ್ನುವುದರ ಜೊತೆಗೆ ಜನಸಂಖ್ಯಾ ಏರಿಕೆಯ ಕುರಿತಾಗಿ ಧ್ವನಿ ಎತ್ತಬೇಕಾದ ಕಾಲ ಕೂಡಿ ಬಂದಿದೆ.

-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

1 COMMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.