Monday, September 23, 2024
Monday, September 23, 2024

ಮಹಿಳಾ ಪ್ರಕರಣಗಳ ನಿರ್ವಹಣೆ ಬಗ್ಗೆ ತರಬೇತಿ

ಮಹಿಳಾ ಪ್ರಕರಣಗಳ ನಿರ್ವಹಣೆ ಬಗ್ಗೆ ತರಬೇತಿ

Date:

ಕಾರವಾರ: ಹೆಣ್ಣು ಗಂಡು ಅಸಮಾನತೆ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಗಳಂತಹ ಅನಿಷ್ಟಗಳಿಗೆ ಮಹಿಳೆಯರು ಒಳಗಾಗುತ್ತಿದ್ದಾರೆ. ಇದಕ್ಕೆ ಮಾಹಿತಿಯ ಕೊರತೆಯೂ ಕಾರಣವಾಗಿದ್ದು, ಈ ಕಾರಣವಾಗಿಯೂ ಜನರಲ್ಲಿ ಕಾನೂನುಗಳ ಅರಿವನ್ನು ಮೂಡಿಸುವ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರ ನಿರಂತರವಾಗಿ ನಡೆಸುತ್ತಿದೆ. ಜತೆಗೆ ನೊಂದ ಮಹಿಳೆಯರಿಗೆ, ಬಡವರಿಗೆ ಉಚಿತವಾಗಿ ಮಾರ್ಗದರ್ಶನ ಮತ್ತು ಪ್ರಕರಣವನ್ನು ನ್ಯಾಯಾಲಯದಲ್ಲಿ ನಡೆಸಲು ಉಚಿತವಾಗಿ ವಕೀಲರನ್ನು ಒದಗಿಸುತ್ತದೆ. ಜತೆಗೆ ಅತ್ಯಾಚಾರ, ಆಸಿಡ್‌ ದಾಳಿಯಂತಹ ಸಮಸ್ಯೆಗಳಿಗೆ ಒಳಗಾದವರಿಗೆ ತಕ್ಷಣ ಪರಿಹಾರವನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ಪ್ರಾಧಿಕಾರವನ್ನು ಸಂಪರ್ಕಿಸಿದರೆ ಮಾರ್ಗದರ್ಶನ, ಸಹಾಯವನ್ನು ಮಾಡಲಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ ರಾಯ್ಕರ್‌ ಕಾರವಾರದ ಕೆಡಿಡಿಸಿ ಸಭಾಂಗಣದಲ್ಲಿ ನಡೆದ ಮಹಿಳಾ ಪ್ರಕರಣಗಳ ನಿರ್ವಹಣೆ ಬಗೆಗಿನ ತರಬೇತಿಯಲ್ಲಿ ತಿಳಿಸಿದರು.

2 ದಿನಗಳಲ್ಲಿ ನಡೆದ ತರಬೇತಿಯಲ್ಲಿ ಮೊದಲಿಗೆ ಶಿಬಿರಾರ್ಥಿಗಳು ತಾವು ತಮ್ಮ ಪ್ರದೇಶಗಳಲ್ಲಿ ನಡೆಸಿದ ಮಹಿಳಾ ಕಾನೂನುಗಳ ಬಗೆಗಿನ ಮಾಹಿತಿ ಕಾರ್ಯಕ್ರಮದ ಅನುಭವಗಳನ್ನು ಹಂಚಿಕೊಂಡರು. ಡೀಡ್ಸ್‌ನ ಕಾನೂನು ಸಂಯೋಜಕರಾದ ದೀಪಾರವರು ಮಹಿಳಾ ಪ್ರಕರಣಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಾ, ನೊಂದ ಮಹಿಳೆಯರಿಗೆ ಆತ್ಮವಿಶ್ವಾಸ ನೀಡುತ್ತಾ, ಅವರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸುತ್ತಾ, ಅವಳ ಸಮಸ್ಯೆಯನ್ನು ಲಿಂಗಸೂಕ್ಷ್ಮತೆಯಿಂದ ಗಮನಿಸಬೇಕಾಗುತ್ತದೆ. ಆಕೆಗೆ ಅವಳ ಸಮಸ್ಯೆಯ ನಿರ್ವಹಣೆಗೆ ಅವಳಿಗಿರುವ ಹಕ್ಕುಗಳು, ಕಾನೂನು ಪ್ರಕಾರ ಲಭ್ಯವಿರುವ ವ್ಯವಸ್ಥೆಗಳ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದರು. ಎಫ್‌ ಐ ಆರ್‌ ಬಗೆಗಿನ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಿದರು.

ಆಪ್ತ ಸಮಾಲೋಚನೆ ಬಗ್ಗೆ ದಾಖಲಾತಿ ಸಂಯೋಜಕರಾದ ಜೆಸಿಂತಾರವರು ಮಾಹಿತಿ ನೀಡುತ್ತಾ, ಸಮಾಲೋಚಕರು ಮತ್ತು ಪ್ರಯೋಜನಾರ್ಥಿಯ ನಡುವಿನ ಕ್ರಿಯೆಯಾಗಿದ್ದು, ನೊಂದವರ ಸಮಸ್ಯೆಗಳನ್ನು ಆಲಿಸುತ್ತಾ ಅವರ ಬಾವನೆಗಳನ್ನು ಹೊರಹಾಕಿಸಲು ಪ್ರಯತ್ನಿಸುವುದೇ ಆಪ್ತ ಸಮಾಲೋಚನೆಯ ಉದ್ದೇಶ. ಇದರಿಂದ ಬಾಧಿತರು ಹಿತ ಭಾವನೆಯನ್ನು ಹೊಂದುತ್ತಾರೆ, ಅವರ ಸಮಸ್ಯೆಗಳಿಗೆ ನಂತರ ಪರಿಹಾರ ಸಾಧ್ಯತೆಗಳನ್ನು ಹುಡುಕಲು ಅವಕಾಶ ನೀಡಬೇಕಾಗುತ್ತದೆ.

ಸಮಾಲೋಚಕರು ಹೆಚ್ಚು ಮಾತನಾಡದೆ ಬಾಧಿತರಿಗೆ ಮಾತನಾಡಲು ಅವಕಾಶ ನೀಡಬೇಕಾಗುತ್ತದೆ. ಸಮಾಲೋಚನೆಯ ತತ್ವಗಳು, ಸಮಾಲೋಚಕರ ನಡೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಶಿಬಿರಾರ್ಥಿಗಳಲ್ಲಿ ಪರಸ್ಪರ ಆಪ್ತ ಸಮಾಲೋಚನೆಯ ಪ್ರಾತ್ಯಕ್ಷಿಕೆಯನ್ನು ಮಾಡಿಸಿದರು.

ದೂರು ಅರ್ಜಿ ಬರವಣಿಗೆ ಬಗ್ಗೆ ಮಾಹಿತಿ ನೀಡಿದ ಕಾರ್ಯಕ್ರಮ ಸಂಯೋಜಕ ತುಕಾರಾಮರವರು ಯಾವುದೇ ದೂರು ಅರ್ಜಿಯಲ್ಲಿ ಯಾರು, ಯಾರಿಗೆ, ಯಾವಾಗ, ಎಲ್ಲಿ, ಯಾಕೆ, ಏನು, ಹೇಗೆ ಇತ್ಯಾದಿ ಅಂಶಗಳ ಉತ್ತರ ಬರುವ ಹಾಗೆ ಅರ್ಜಿ ಬರೆದಾಗ ಅದು ನಿಜವಾದ ಅರ್ಜಿಯಾಗುತ್ತದೆ,ಮತ್ತು ದೌರ್ಜನ್ಯದ ಎಲ್ಲಾ ಅಂಶಗಳು ಈ ಮೂಲಕ ದಾಖಲಾಗುತ್ತವೆ, ಇದರಿಂದ ಸಂಬಂಧಿತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಸುಲಭವಾಗುತ್ತದೆ ಎಂದರು.

ಸಖಿ ಕೇಂದ್ರದ ಕೇಂದ್ರ ಆಡಳಿತಗಾರರಾದ ಮಂಜುಳಾ ಮತ್ತು ಸಮಾಲೋಚಕರಾದ ಶ್ವೇತಾರವರು ಸಖಿ ಕೇಂದ್ರದ ಉದ್ದೇಶ ಮತ್ತು ಸೌಲಭ್ಯಗಳ ಮಾಹಿತಿ ನೀಡಿದರು. ಸಮಾಲೋಚಕರು, ಪೊಲಿಸ್‌ ಅಧಿಕಾರಿ, ವಕೀಲರು, ವೈದ್ಯರು ಈ ಕೇಂದ್ರದಲ್ಲಿ ಲಭ್ಯವಿದ್ದು, ನೊಂದ ಮಹಿಳೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗುತ್ತದೆ. ಪೊಕ್ಸೊ, ಸಾಗಾಟ, ಬಾಲ್ಯವಿವಾಹ, ಸೈಬರ್‌ ಅಪರಾಧಗಳು, ಕೌಟುಂಬಿಕ ಹಿಂಸೆ ಬಗೆಗಿನ ಕೇಸ್‌ ಗಳು ಬರುತ್ತಿವೆ. ತೊಂದರೆಗೊಳಗಾದ ಮಹಿಳೆಗೆ 5 ದಿನಗಳ ವಿಶ್ರಾಂತಿ ವ್ಯವಸ್ಥೆ ಲಭ್ಯವಿದೆ. ಯಾವುದೇ ದೌರ್ಜನ್ಯಕ್ಕೊಳಗಾದ ಮಹಿಳೆಯರು 181 ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಕೇಂದ್ರದ ಸದುಪಯೋಗ ಮಾಡಬಹುದು ಎಂದರು.

ನಂತರ ತರಬೇತಿ ಕೈಪಿಡಿ ಮಾಹಿತಿಯ ಜತೆಗೆ ಮುಂದೆ ತಳಮಟ್ಟದಲ್ಲಿ ನಡೆಸಬೇಕಾದ ಮಾಹಿತಿ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಪೂರಕ ಕಾನೂನು ಚಟುವಟಿಕೆಗಳನ್ನು ಮುಂದುವರಿಸಿಕೊಂಡುಹೋಗಲು, ನೊಂದ ಮಹಿಳೆಯರಿಗೆ ಮಾರ್ಗದರ್ಶನ, ನ್ಯಾಯಿಕ ಸಹಾಯವನ್ನು ಸಂಘಟಿತವಾಗಿ ನೀಡಲು ಕಾರವಾರ ಜಿಲ್ಲಾ ಪೂರಕ ಕಾನೂನು ಸುಗಮಕಾರರ ಸಮುಚ್ಚಯವನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು.

ಹೇಮಲತಾ ಮುಖ್ಯ ಸಂಚಾಲಕರಾಗಿ, ಮಂಗಲಾ ಕೆ ಗುನಗಾ ಉಪ ಮುಖ್ಯ ಸಂಚಾಲಕರಾಗಿ, ಗೀತಾ ಪಿ. ಕಾರ್ಯಕಾರಿ ಸಂಚಾಲಕರಾಗಿ, ಪ್ರಿಯಾ ಬಾಬು ಅವರ್ಸೆಕರ ಉಪ ಕಾರ್ಯಕಾರಿ ಸಂಚಾಲಕರಾಗಿ, ಸ್ವಾತಿ ಸುಭಾಷ ಗೋವೇಕರ ವಿತ್ತ ನಿರ್ವಹಣಾ ಸಂಚಾಲಕರಾಗಿ ಆಯ್ಕೆಯಾದರು.

ತರಬೇತಿಯು ಡೀಡ್ಸ್‌ ಮಂಗಳೂರು, ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ ಧರ್ಮಪ್ರಾಂತ್ಯ ಅಭಿವೃದ್ಧಿ ಮಂಡಳಿ(ಕೆಡಿಡಿಸಿ), ಚೈಲ್ಡ್‌ ಫಂಡ್‌ ಕಾರವಾರ, ಕಾರವಾರ ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಬದುಕು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರವಾರ ಸಹಭಾಗಿತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...
error: Content is protected !!