Friday, September 20, 2024
Friday, September 20, 2024

ಉಡುಪಿಯಲ್ಲಿ ನಡೆಯಿತು ವಿಶಿಷ್ಟ ಕಾರ್ಯಕ್ರಮ

ಉಡುಪಿಯಲ್ಲಿ ನಡೆಯಿತು ವಿಶಿಷ್ಟ ಕಾರ್ಯಕ್ರಮ

Date:

ಉಡುಪಿ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು, ಇಡೂರು- ಕುಂಜ್ಙಾಡಿ ಗ್ರಾಮ ಪಂಚಾಯತ್ ಜನ್ನಾಲ್‌ನ ಅವಲಕ್ಕಿಪಾರೆ, ಆದಿಮ ಕಲೆಯ ನಿವೇಶನದಲ್ಲಿ ಎರಡು ದಿನಗಳ ಅಂತರಾಷ್ಟ್ರೀಯ ಆದಿಮ ಕಲೆಯ ಹಬ್ಬವನ್ನು ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಾಲಯದ ಅನುವಂಶಿಕ ಮೊಕ್ತೇಸರರಾದ ಸದಾಶಿವ ಶೆಟ್ಟಿ ಉದ್ಘಾಟಿಸಿದರು.

ಎರಡು ದಿನಗಳ ಈ ರಾಷ್ಟ್ರೀಯ ಕಾರ್ಯಕ್ರಮದ ಸರ್ವಾಧ್ಯಕ್ಷ ಆಸ್ಟ್ರಿಯಾದ ಖ್ಯಾತ ಕಲಾ ಇತಿಹಾಸಕಾರ ಡಾ. ಇರ್ವಿನ್ ನ್ಯೂಮೇಯರ್ ಮಾತನಾಡುತ್ತಾ, ಭಾರತದ ಪಶ್ಚಿಮ ಕರಾವಳಿಯಲ್ಲಿ ಮತ್ತು ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಹಳೇ ಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗದ ಶಿಲಾಯುಧಗಳು ಕಂಡು ಬಂದಿದ್ದರೂ ಯಾಕೆ ಆದಿಮ ಕಲೆಯ ನಿವೇಶನಗಳು ದೊರೆತಿಲ್ಲವೆಂಬುದು ಆದಿಮ ಕಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಕೌತುಕದ ಪ್ರಶ್ನೆಯಾಗಿತ್ತು.

ಆದರೆ, ಅನೇಕ ಸಂಶೋಧಕರ ಸತತ ಪ್ರಯತ್ನಗಳಿಂದಾಗಿ ಕರಾವಳಿಯ ಮುರಕಲ್ಲಿನ ಭೂಹಾಸಿನ ಮೇಲೆ ನೂರಾರು ಆದಿಮ ಚಿತ್ರಗಳು ಇರುವ ನಿವೇಶನಗಳು ಅವುಗಳ ಚಿತ್ರಗಳೊಂದಿಗೆ ಸಂಶೋಧಿಸಿ ಪ್ರಕಟಿಸಿದರೂ ಭಾರತದ ಪುರಾತತ್ವ ಇಲಾಖೆಯ ಅಧಿಕಾರಿಗಳು ಅವುಗಳನ್ನು ಗುರುತಿಸುವ ಪ್ರಯತ್ನವನ್ನು ಮಾಡದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

ತೀರಾ ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರವು ಈ ಸಂಶೋಧನೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಅಧ್ಯಯನಕ್ಕೆ ಅಗತ್ಯವಾದ ಅನುದಾನವನ್ನು ಬಿಡುಗಡೆಗೊಳಿಸಿ ಅವುಗಳ ಸಂರಕ್ಷಣೆಗೆ ಮುಂದಾಗಿದೆ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು, ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳಿಗೆ ನೀಡಿರುವ ಮತ್ತು ನೀಡುತ್ತಿರುವ ಬೆಂಬಲ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದರು.

ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಬಳ್ಳಾರಿಯ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದ ಗೌರವ ನಿರ್ದೇಶಕರಾದ ಡಾ. ರವಿಕೋರಿಶೆಟ್ಟರವರು ಮಾತನಾಡುತ್ತಾ, ಅವಲಕ್ಕಿ ಪಾರೆಯಂತಹ ವನ್ಯಜೀವಿ ರಕ್ಷಿತಾರಣ್ಯದ ಒಳಗೆ ಪುರಾತನ ಚಿತ್ರಗಳು ಇರುವ ನಿವೇಶನದಲ್ಲಿ ಕಲಾವಿದರು, ಕಲಾ ಇತಿಹಾಸಕಾರರು, ಪುರಾತತ್ವಶಾಸ್ತ್ರ ವಿದ್ವಾಂಸರು ಹಾಗೂ ಸಾರ್ವಜನಿಕರ ಸಮಾವೇಶದೊಂದಿಗೆ ಹಮ್ಮಿಕೊಂಡ ಈ
ಕಾರ್ಯಕ್ರಮ ಇಡೀ ದೇಶದಲ್ಲಿಯೇ ಮೊದಲನೆಯದು ಹಾಗೂ ಅಪೂರ್ವವಾದದ್ದು.

ವಿದ್ವತ್ ಸಮಾವೇಶಗಳು ಕೇವಲ ಪಂಡಿತರ ಚರ್ಚೆಗೆ ಸೀಮಿತವಾಗಿ ಬಿಡುತ್ತವೆ. ಯಾವುದೇ ಸಂಶೋಧನೆಗಳು ಸಾರ್ವಜನಿಕರಿಗೆ ಉತ್ತರದಾಯಿಯಾಗಬೇಕಾದರೆ ಇಂತಹ ಹಬ್ಬಗಳು ನಿರಂತರವಾಗಬೇಕು ಎಂದರು. ತುಳುನಾಡಿನ ಪ್ರಾಗೈತಿಹಾಸಕ್ಕೆ ಸಂಬಂAಧಿಸಿದ ಒಂದು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ವೈ. ಭಾಸ್ಕರ್ ಶೆಟ್ಟಿ, ನಮ್ಮ ಕಾಲೇಜಿನ ಪುರಾತತ್ವಶಾಸ್ತ್ರ ವಿಭಾಗವು ಅನೇಕ ದಶಕಗಳಿಂದ ಪುರಾತತ್ವ ಸಂಶೋಧನೆ ಮತ್ತು ಪರಂಪರೆಯ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಸದಾ ಕ್ರಿಯಾಶೀಲವಾಗಿದೆ ಎಂದು ನುಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಾ. ಅತುಲ್ ಕುಮಾರ್ ಶೆಟ್ಟಿ ಮಾತನಾಡುತ್ತಾ, ಅವಲಕ್ಕಿ ಪಾರೆಯ ಪುರಾತನ ಚಿತ್ರಗಳು ನಮ್ಮ ದೇಶದ ಶ್ರೀಮಂತ ಪರಂಪರೆಯ
ಪಳೆಯುಳಿಕೆಗಳಾಗಿದ್ದು ಅವುಗಳನ್ನು ಸಂರಕ್ಷಿಸಿ ಮುಂದಿನ ಜನಾಂಗಕ್ಕೆ ಉಳಿಸಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆಯೆಂದು ನುಡಿದರು.

ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರ ಸಂಘ (ಮಾನುಷ)ದ ಅಧ್ಯಕ್ಷರಾದ ಡಾ. ಜಯರಾಮ್ ಶೆಟ್ಟಿಗಾರ್, ತುಳುನಾಡಿನ ಪ್ರಾಗೈತಿಹಾಸಕ್ಕೆ ಸಂಬಂಧಿಸಿದ ಕನ್ನಡದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇಡೂರು- ಕುಂಜ್ಙಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಮೀನ ಶೆಟ್ಟಿ, ಹಿತ್ತಲಗಿಡ ಮದ್ದಲ್ಲ ಎಂಬ ನಾಣ್ಣುಡಿಯಂತೆ ನಮ್ಮ ಊರಿನಲ್ಲಿಯೇ ಇರುವ ಪುರಾತನ ಚಿತ್ರಗಳ ಮಹತ್ವ ನಮಗೆ ಈ ಕಾರ್ಯಕ್ರಮದ ಮೂಲಕ ಅರಿವಾಗಿದೆ ಅದರ ರಕ್ಷಣೆಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಂಘಟನಾ ಕಾರ್ಯದರ್ಶಿ ಪ್ರೊ.ಟಿ.ಮುರುಗೇಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ನಯನ ಎಂ ಪಕ್ಕಳ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ವೈಶಾಖ್ ಹೆಬ್ಬಾರ್ ವಂದಿಸಿದರು. ಸಂಧ್ಯಾ ಮತ್ತು ಮಾನಸ್ ಮುರುಗೇಶ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ, ಡಾ. ರವಿಕೋರಿಶೆಟ್ಟರ್ ದಿಕ್ಸೂಚಿ ಭಾಷಣವನ್ನು ಮಾಡಿದರು, ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಮೋಹನ್ ಆರ್ ಡಾ. ಅ. ಸುಂದರ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ನಡೆದ ಶೈಕ್ಷಣಿಕ ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಕೊಟ್ಟಾಯಂ ನ ಮಹತ್ಮಾಗಾಂಧಿ ವಿಶ್ವವಿದ್ಯಾಲಯದ ಜಾರ್ಜ್ ವರ್ಗಿಸ್, ಹಂಪಿ ವಿಶ್ವವಿದ್ಯಾನಿಲಯದ ರೇಣುಕಾಸ್ವಾಮಿ ಒಡೆಯರ್, ದಾವಣಗೆರೆ ವಿಶ್ವವಿದ್ಯಾಲಯದ ಯಶವಂತ ಬಿ ಪ್ರಬಂಧಗಳನ್ನು ಮಂಡಿಸಿದರು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಹಿಂದೂಸ್ತಾನಿ ಗಾಯಕ ಡಾ. ಮಿಥುನ್ ಚಕ್ರವರ್ತಿ, ಮಾನಸ ಮತ್ತು ಅಪ್ಸಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎರಡನೇ ದಿನ, ರಾಜ್ಯದ ಹೆಸರಾಂತ ಕಲಾವಿದರಾದ ಸುನಿಲ್ ಮಿಶ್ರಾ ಮತ್ತು ಲಕ್ಷಣ್ ರವರ ತಂಡ ವಿಭಿನ್ನ ಮಾಧ್ಯಮಗಳಲ್ಲಿ ಅವಲಕ್ಕಿ ಪಾರೆಯ ಆದಿಮ ಚಿತ್ರಗಳನ್ನು ಪುನರ್ ಸೃಷ್ಠಿ ಮಾಡಿದರು. ನಂತರ ನಡೆದ ಶೈಕ್ಷಣಿಕ ಸಂಶೋಧನಾ ಪ್ರಬಂಧಗಳ ಮಂಡನೆಯಲ್ಲಿ ಪ್ರೊ. ಟಿ. ಮುರುಗೇಶಿ, ಶಿರ್ವ ಕಾಲೇಜಿನ ದಿಶಾಂತ್, ವಿಶಾಲ್ ರೈ, ಬೆಂಗಳೂರಿನ ಡಾ. ಗೀತಾ ಬಡಕಿಲ್ಲಾಯ ಪ್ರಬಂಧಗಳನ್ನು ಮಂಡಿಸಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಪ್ರೊ. ಟಿ. ಮುರುಗೇಶಿ ಅವಲಕ್ಕಿ ಪಾರೆಯ ಮಾರ್ಗಸೂಚಿ ನಾಮಫಲಕಗಳನ್ನು ಅನಾವರಣ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!