Home ಅಂಕಣ ಇದೇ ಸತ್ಯ ಬೇರೆಲ್ಲವೂ ಮಿಥ್ಯ

ಇದೇ ಸತ್ಯ ಬೇರೆಲ್ಲವೂ ಮಿಥ್ಯ

313
0

ಶಾಸ್ತ್ರದ ಪ್ರಕಾರ ಹೀಗೆ ಪೂಜೆ ಮಾಡಿ, ಹೀಗೆ ಮಾಡಬಾರದು ಎಂದೆಲ್ಲ ನಾವು ಹೇಳುತ್ತೇವೆ. ಅದನ್ನು ಪಾಲಿಸಬೇಕು ನಿಜ. ಆದರೆ ಇಂದಿನ ದಿನಗಳಲ್ಲಿ ಅದೆಷ್ಟು ಜಗಳ ಯುದ್ಧ ಗಲಾಟೆಗಳು ಆಗುತ್ತಿವೆ. ಅವರು ಮಾಡಿದ್ದೇ ಸರಿ, ಇವರು ಮಾಡಿದ್ದು ಸರಿ ಇಲ್ಲ, ಅದು ಶಾಸ್ತ್ರದಲ್ಲಿ ಹೇಳಿಲ್ಲ ಅದು ಇದು ಎಂದು. ನಿಜವಾಗಿ ಹೇಳುವುದಾದರೆ ಧರ್ಮಶಾಸ್ತ್ರ ಓದಿದವರು ಯಾವತ್ತು ಜಗಳವಾಡುವುದಿಲ್ಲ. ಅರ್ಧ ಓದಿ, ಜಾಲತಾಣಗಳಲ್ಲಿ ಹರಿದಾಡುವ ಅರ್ಥವಿಲ್ಲದ ಅನೇಕ ಉತ್ತೇಜಕ ವಿಡಿಯೋಸ್ ಗಳನ್ನು ನೋಡಿ ಅದೇ ಸರಿಯಾದ ರೀತಿ ಎಂದು ತಿಳಿದುಕೊಂಡು ಜಗಳಕ್ಕೆ ಹೋಗುತ್ತಾರಲ್ಲ. ಅದೇ ಬಹಳ ಅಪಾಯಕಾರಿ. ಈ ಕಡೆ ಸರಿಯಾದ ಜ್ಞಾನವಿರುವುದಿಲ್ಲ, ಆ ಕಡೆ ಇತರರ ನಿಂದನೆ ಮಾಡುವುದು, ಜಗಳವಾಡುವುದು. ಅವರೇ ಸರಿ, ಇತರರು ತಪ್ಪು ಎಂದು.

ಈ ರೀತಿಯ ಮನಸ್ಥಿತಿ ಬೆಳೆಯುವುದು ಸಮಾಜಕ್ಕೆ ಮಾರಕ. ನಮಗೆ ನಿಜವಾದ ಧರ್ಮಶಾಸ್ತ್ರ ಓದಿ ತಿಳಿದಿರಬೇಕು. ಯಾರೋ ಏನೋ ಹೇಳಿದ್ದು ಅದೇ ನಿಜವೆಂದು ತಿಳಿದು, ತಾನೇ ಸರಿ ಎಂದು ಧೋರಣೆ ಮಾಡುವುದಲ್ಲ. ನಮ್ಮಲ್ಲಿ ಅನೇಕ ಸಿದ್ಧಾಂತಗಳಿವೆ. ಮಹಾನ್ ಸಂತರು ಅವರವರ ರೀತಿಯಲ್ಲಿ ಸತ್ಯವನ್ನು ಕಂಡು ಹಿಡಿದಿದ್ದಾರೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ. ಒಂದರಿಂದ ಒಂದು ಭಿನ್ನವಾಗಿವೆ. ಇದೆಲ್ಲಾ ಏನು ತೋರಿಸುತ್ತದೆ ಎಂದರೆ ಜಗತ್ತಿನಲ್ಲಿ ಒಂದೇ ಸತ್ಯ ಇದೇ ಸತ್ಯ ಎನ್ನುವುದು ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸತ್ಯ ಕಾಣಿಸಿದೆ ಅದೇ ಸತ್ಯವೆಂದು ಇತರರಿಗೆ ಅವರು ತಿಳಿಸಿದ್ದಾರೆ. ನಾವು ಅದನ್ನು ಪಾಲಿಸುತ್ತೇವೆ ಅಷ್ಟೇ. ನಮಗೆ ಇಷ್ಟವಾದ ಶಾಸ್ತ್ರವನ್ನು ನಾವು ಪಾಲಿಸುತ್ತೇವೆ. ಇತರರಿಗೆ ಅದು ನಿಜವಲ್ಲವಿರಬಹುದು ಅದನ್ನು ನಂಬದೇ ಇರಬಹುದು. ನಮ್ಮ ಮನಸ್ಥಿತಿಯ ಪ್ರಕಾರ ನಾವು ಯಾವುದೋ ಒಂದನ್ನು ಪಾಲಿಸುತ್ತೇವೆ. ನಮಗೆ ಸತ್ಯಾನ್ವೇಷಣೆ ಆಗದ ಕಾರಣ ತಿಳಿಹೇಳಿದ ಮಹಾನ್ ಪುರುಷರು ಕಂಡುಹಿಡಿದ ಶಾಸ್ತ್ರವನ್ನು ಪಾಲಿಸುತ್ತೇವೆ.

ನಾವು ನಮ್ಮ ತಂದೆ ತಾಯಿ ಪಾಲಿಸಿದ ಧರ್ಮ ಅಥವಾ ಓದಿ, ಇತರರ ಪ್ರೇರಣೆಯಿಂದ ಯಾವುದೋ ಒಂದು ಶಾಸ್ತ್ರವನ್ನು ಒಪ್ಪುತ್ತೇವೆ ಅದನ್ನೇ ಪಾಲಿಸುತ್ತೇವೆ ಕೂಡ ಅದೇ ಸತ್ಯವೆಂದು ನಂಬುತ್ತೇವೆ ಅದೇ ಶ್ರೇಷ್ಠವೆಂದು ಕೂಡ ತಿಳಿದು ಬಿಡುತ್ತೇವೆ. ಆದರೆ ನಾವು ಒಂದು ಮಹಾನ್ ತಪ್ಪನ್ನು ಮಾಡುತ್ತಿದ್ದೇವೆ. ಅದೇನೆಂದರೆ ಇತರರ ನಾವು ನಂಬಿದನ್ನು ಸತ್ಯವೆಂದು ನಂಬಬೇಕು ಎಂಬುದು. ಅದು ಎಷ್ಟು ಸರಿ ಜಸ್ಟ್ ಯೋಚಿಸಿ ನೋಡಿ. ನಿಮಗೆ ಸರಿ ಅನಿಸಿರುವ ವಿಷಯ ಇತರರು ಸರಿ ಎಂದು ಒಪ್ಪಬೇಕು ಎನ್ನುವ ಒತ್ತಾಯವೇಕೇ? ಎಲ್ಲರಿಗೂ ಅವರದ್ದೇ ಮನಸ್ಥಿತಿಯ ಪ್ರಕಾರ ಅವರವರ ನಂಬಿಕೆಯ ಪ್ರಕಾರ ಅವರು ಯಾವುದೋ ಒಂದನ್ನು ನಂಬುತ್ತಾರೆ ಅದನ್ನು ನಂಬಲಿ ಬಿಡಿ. ಈಗ ನಮಗೆ ಬೇರೆಯವರು ಬಂದು, ನಾವು ಪಾಲಿಸುವುದು ಸರಿ ಇಲ್ಲ ಬದಲಾಯಿಸಿ ಎಂದರೆ ನಾವು ನಮ್ಮ ನಂಬಿಕೆಯನ್ನು ಬಿಡುತ್ತೇವೆಯೋ? ಇಲ್ಲವಲ್ಲ. ಅದು ಹಾಗೇನೇ ಅಲ್ಲವೇ?

ಜೀವನದಲ್ಲಿ ಪ್ರತಿಯೊಬ್ಬರಿಗೆ ಅವರದೇ ಸ್ವಾತಂತ್ರ್ಯವಿದೆ ಯಾವುದು ಬೇಕಾದರೂ ನಂಬಬಹುದು ನಂಬದೇ ಇರಬಹುದು. ಅದು ಅವರವರಿಗೆ ಬಿಟ್ಟದ್ದು. ಇದು ಯಾವುದು ಬೇಡ ಎಂದರೆ ಧ್ಯಾನ ಮಾಡಿ ನೀವೇ ಸತ್ಯವನ್ನು ತಿಳಿದುಕೊಳ್ಳಿ. ಅದು ಒಳ್ಳೆಯ ಮಾರ್ಗ. ನಿಮಗೆ ಹೇಗೆ ಇದು ಸತ್ಯವೆಂದು ಅನಿಸುತ್ತದೆಯೋ ಅದೇ ರೀತಿ ಅವರಿಗೆ ಅವರ ನಂಬಿಕೆ ಸತ್ಯವೆಂದು ಅನಿಸುತ್ತದೆ. ನಿಜವನ್ನು ಒಂದೇ ಎಂಬುದು ನಾವು ತಿಳಿದಿದ್ದೇವೆ. ಆದರೆ ಅದು ಒಂದೇ ಆಗಲು ಸಾಧ್ಯವಿಲ್ಲ. (ಜಗತ್ತಿನಲ್ಲಿ ಆಗುವ ಘಟನೆಗಳ ಬಗ್ಗೆ ನಾನು ಹೇಳುತ್ತಿಲ್ಲ) ಇಲ್ಲಿ ನಾನು ಧರ್ಮ ಅದು ಇದು ಎಂದು ಹೊಡೆದಾಡುತ್ತೇವೆ ಅಲ್ಲವೇ ಅದರ ಬಗ್ಗೆ ಹೇಳುತ್ತಿದ್ದೇನೆ. ಒಂದು ಸತ್ಯದ ಅನ್ವೇಷಣೆ ನಾವೇ ಮಾಡಬೇಕು ಇಲ್ಲವೇ ನಮಗೆ ಯಾವುದು ಸರಿ ಅನಿಸುವುದೋ ಅದನ್ನು ಪಾಲಿಸಬೇಕು. ಇತರರಿಗೆ ಏನು ಪಾಲಿಸಬೇಕು ಅನ್ನಿಸುವುದೋ, ಅದನ್ನು ಪಾಲಿಸಲು ಬಿಡಬೇಕು. ಎಲ್ಲರಿಗೂ ಸ್ವಾತಂತ್ರ್ಯವಿದೆ ಅಲ್ಲವೇ? ನಾವು ಕಂಡದ್ದೇ ಸತ್ಯವಲ್ಲ. ಎಲ್ಲರು ಅವರವರ ಮನಸ್ಥಿತಿಯ ಪ್ರಕಾರ ಸತ್ಯವನ್ನು ಅನ್ವೇಶಿಸುತ್ತಾರೆ ಅಷ್ಟೇ. ಅದನ್ನು ನಾವು ಗೌರವಿಸಬೇಕು, ಅಷ್ಟೇ.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.