Friday, September 20, 2024
Friday, September 20, 2024

ಜನಮನ ಸೂರೆಗೊಂಡ ‘ಮರಣಿ ಮಾಂಟೆ’

ಜನಮನ ಸೂರೆಗೊಂಡ ‘ಮರಣಿ ಮಾಂಟೆ’

Date:

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಲ್ಲಿನ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಮರಣಿ ಮಾಂಟೆ ‘ನಾಟಕ ತನ್ನ ಭಿನ್ನತೆಯಿಂದ ಜನಮನ ಸೂರೆಗೊಂಡಿತು.

ತನ್ನ ಶೀರ್ಷಿಕೆಯಿಂದಲೇ ಬಹಳಷ್ಟು ಕುತೂಹಲವನ್ನು ಮೂಡಿಸಿದ್ದ, ಸಾವಿನ ದೇವತೆಯೊಂದಿಗೆ ಹೋರಾಟಕ್ಕಿಳಿವ ವೈದ್ಯನೊಬ್ಬನ ಕಥಾನಕವನ್ನು ಪ್ರಮುಖ ವಸ್ತುವಾಗಿ ಹೊಂದಿದ ಮಾಮೂಲಿ ನಾಟಕ ಗಳಿಗಿಂತ ತೀರಾ ಭಿನ್ನ ನೆಲೆಯಲ್ಲಿ ಥಿಯೇಟರ್ ನಾಟಕಗಳನ್ನು ನೆನಪಿಸುವಂತೆ ಮೂಡಿಬಂದ ಈ ನಾಟಕವನ್ನು ಇಲ್ಲಿನ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಲೇಖಕ ನರೇಂದ್ರ ಎಸ್ ಗಂಗೊಳ್ಳಿ ರಚಿಸಿ ನಿರ್ದೇಶಿಸಿದ್ದರು.

50 ನಿಮಿಷಗಳ ಅವಧಿಯ ಈ ನಾಟಕದದ್ದಕ್ಕೂ ಬಳಸಿದ ಪರಿಕರಗಳು, ವೇಷಭೂಷಣಗಳು, ರಂಗ ಸಜ್ಜಿಕೆ ವಿಶೇಷವಾಗಿ ಗಮನ ಸೆಳೆಯಿತು. ಮರಣಿ ಪಾತ್ರದಲ್ಲಿ ಶ್ರಾವ್ಯ ಎನ್ ಪಾತ್ರವನ್ನೇ ಆವಾಹಿಸಿಕೊಂಡಂತೆ ಅಬ್ಬರದ ಅಭಿನಯವನ್ನು ನೀಡಿ ಜನ ಮೆಚ್ಚುಗೆ ಗಳಿಸಿದರು. ಸಾವಿನ ದಾಸಿ ಮುದುಕಿಯ ಪಾತ್ರದಲ್ಲಿ ವಿಶೇಷ ಆಂಗಿಕ ಅಭಿನಯದಿಂದ ಅಮೀಕ್ಷಾ ಡಿ ನಾಯ್ಕ್ ಗಮನ ಸೆಳೆದರೆ, ಚಮರಿಯ ಪಾತ್ರದಲ್ಲಿ ತನ್ನ ಸ್ಪಷ್ಟವಾದ ಮಾತುಗಾರಿಕೆಯಿಂದ ನಿಶಾ ಬಿ ಪೂಜಾರಿ ಪ್ರೇಕ್ಷಕರನ್ನು ರಂಜಿಸಿದರು. ವೈದ್ಯ ಜೀವಕನ ಪಾತ್ರದಲ್ಲಿ ಹೃತಿಕಾ ಮತ್ತು ರಾಜಕುಮಾರಿ ಪಯಸ್ವಿನಿ ಪಾತ್ರದಲ್ಲಿ ದಿಯಾ ಪಾತ್ರಕ್ಕೆ ಜೀವ ತುಂಬಿದರು.

ಉಳಿದಂತೆ ಲಾಲಿತ್ಯನಾಗಿ ಆಕಾಂಕ್ಷ, ಬಡ ಹೆಂಗಸಾಗಿ ಸಮೀಕ್ಷಾ, ಮಗನಾಗಿ ಸಂಜನಾ, ತರಂಗಿಣಿಯಾಗಿ ರಿಶೆಲ್ ಡಿ ಅಲ್ಮೇಡ, ಶಿವನಾಗಿ ರಚನಾ, ಡಂಗುರದವರಾಗಿ ನಾಗಶ್ರೀ ಮತ್ತು ಶ್ರೀನಿಧಿ, ರಾಜಭಟರಾಗಿ ತ್ರಿಷಾ, ದೀಕ್ಷಾ, ಶ್ರೀನಿಧಿ, ಶಿಲ್ಪ ಪ್ರಿಯ, ತೇಜಸ್ವಿನಿ, ಶ್ರೀಶ್ರಾವ್ಯ, ಮುರಿಗಳಾಗಿ ರಿತೇಶ್ ಎಂ ಜಿ, ರಿತೇಶ್ ತೋಳಾರ್, ಅಮೃತ್, ವಿನಯ್,ಸಂಪತ್, ರಿತೇಶ್, ಶರತ್ ವಿಶ್ವಾಸ್, ಪ್ರಥ್ವಿಕ್ ಮತ್ತು ವೀರೇಂದ್ರ ಅಭಿನಯಿಸಿದ್ದರು. ಆಂಗ್ಲ ಭಾಷೆ ಉಪನ್ಯಾಸಕರಾದ ಥಾಮಸ್ ಪಿ. ಎ., ವಿದ್ಯಾರ್ಥಿಗಳಾದ ಸುಜನ್ ಮತ್ತು ಪ್ರೇಮ್ ಹಿನ್ನೆಲೆ ಸಂಗೀತ ನೀಡಿದ್ದರು. ಹಿನ್ನೆಲೆ ಗಾಯನದಲ್ಲಿ ಶ್ರೇಯಾ ಖಾರ್ವಿ ಸಹಕರಿಸಿದರು.

ಮರಣಿ ಮತ್ತು ಶಿವನ ಪ್ರವೇಶ ಸನ್ನಿವೇಶಗಳು, ಆರಂಭದಲ್ಲಿ ಮುರಿಗಳ ನೃತ್ಯ, ಜೀವಕನ ಕನಸಿನಲ್ಲಿ ಕಾಣಿಸಿಕೊಳ್ಳುವ ಪ್ರೇತ, ಲಾಲಿತ್ಯ ತರಂಗಿಣಿಯ ಸಾವಿನ ಸನ್ನಿವೇಶಗಳನ್ನು ಕಟ್ಟಿಕೊಟ್ಟ ರೀತಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ಯಾವ ವೈದ್ಯನೂ ಸಾವನ್ನು ಗೆಲ್ಲಲು ಸಾಧ್ಯವಿಲ್ಲ, ಅಂತರಂಗದ ಗುಟ್ಟು ತಿಳಿಯಬೇಕಾದರೆ ಅಂತಪುರವನ್ನು ಹೊಕ್ಕು ನೋಡಬೇಕು ಎನ್ನುವಂತಹ ಸಂಭಾಷಣೆಗಳು ಗಮನ ಸೆಳೆದವು.

ಕೊನೆಯಲ್ಲಿ ಮರಣಿಯ ಲೋಕವನ್ನು ಪ್ರದರ್ಶಿಸಿದ ರೀತಿ ಮನಸಳೆಯುವಂತಿತ್ತು. ಕಿರು ಸನ್ನಿವೇಶಗಳು, ಅನೂಹ್ಯ ತಿರುವುಗಳು, ನಾಟಕದ ಅಂದವನ್ನು ಹೆಚ್ಚಿಸಿದವು. ಅರ್ಥಪೂರ್ಣ ಕಥೆ ನಾಟಕಕ್ಕೆ ಮೌಲ್ಯ ತಂದಿತ್ತು. ಒಟ್ಟಾರೆಯಾಗಿ ಎಲ್ಲಾ ಇತಿಮಿತಿಗಳ ನಡುವೆ ಇಂಥದ್ದೊಂದು ರಮಣೀಯ ನಾಟಕವನ್ನು ಅಭಿನಯಿಸಿ ಗ್ರಾಮೀಣ ಭಾಗದ ಮಕ್ಕಳು ಕೂಡ ಇಂತಹ ನಾಟಕಗಳನ್ನು ಮಾಡಬಲ್ಲರು ಎಂದು ತೋರಿಸಿಕೊಟ್ಟ ಹೆಮ್ಮೆ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳದ್ದು.

ನಾಟಕದ ಬಹುತೇಕ ವೇಷ ಭೂಷಣಗಳನ್ನು ರಂಗಸಜ್ಜಿಕೆಗಳನ್ನು ವಿದ್ಯಾರ್ಥಿಗಳು ಸ್ವಯಂ ಪ್ರಯತ್ನದಿಂದ ರೂಪಿಸಿದ್ದು ವಿಶೇಷವಾಗಿತ್ತು. 30 ವಿದ್ಯಾರ್ಥಿಗಳ ತಂಡವನ್ನು ಎರಡು ವಾರಗಳ ಅವಧಿಯಲ್ಲಿ ತರಬೇತುಗೊಳಿಸಿ ನಾಟಕವನ್ನು ವೇದಿಕೆಯ ಮೇಲೆ ಅಚ್ಚುಕಟ್ಟಾಗಿ ತಂದು ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಿದ ನಿರ್ದೇಶಕ ನರೇಂದ್ರ ಎಸ್ ಗಂಗೊಳ್ಳಿ ಅವರ ಪರಿಶ್ರಮ ಅಭಿನಂದನೀಯ.

-ಸಂ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!