ಬೆಂಗಳೂರು, ಫೆ.1: ಕೇಂದ್ರ ಸರ್ಕಾರವು ಔಷಧಿಗಳು, ಎಲೆಕ್ಟ್ರಿಕ್, ಚರ್ಮ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಸಿ ವಿಕಸಿತ ಭಾರತ ಕಟ್ಟುವ ದೂರದೃಷ್ಟಿಯ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರವನ್ನು ಟೀಕಿಸುವುದು ಕೇವಲ ರಾಜಕೀಯ ದುರುದ್ದೇಶದಿಂದ ಮಾತ್ರ ಎಂಬುದು ರಾಜ್ಯದ ಜನತೆಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಶನಿವಾರ ಮಂಡನೆಯಾದ ಕೇಂದ್ರ ಬಜೆಟ್ ಕುರಿತು ಅವರು ಮಾತನಾಡಿದರು. ಮಧ್ಯಮ ವರ್ಗದವರಿಗೆ ನೆರವಾಗುವ ನಿಟ್ಟಿನಲ್ಲಿ 12 ಲಕ್ಷದವರೆಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಮಿತಿಯನ್ನು ಈಗ ಇರುವ 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಕಿಸಾನ್ ಕ್ರೆಡಿಟ್ಗಳಿಂದ 7 ಕೋಟಿಗೂ ಅಧಿಕ ರೈತರಿಗೆ ಸುಲಭವಾಗಿ ಸಾಲ ಸೌಲಭ್ಯಗಳು ದೊರೆಯಲಿವೆ ಇದು ನಾಡಿನ ರೈತರಿಗಾಗುವ ಅನುಕೂಲವಲ್ಲವೇ?
ಬೆಳೆಗಳ ಉತ್ಪಾದಕತೆ ವೃದ್ಧಿಸುವ ಸಲುವಾಗಿ ಪ್ರಧಾನಮಂತ್ರಿ ಧನ-ಧಾನ್ಯ ಯೋಜನೆ ಆರಂಭಿಸುವ ನಿರ್ಧಾರ ಕೈಗೊಂಡಿದ್ದು ಈ ಯೋಜನೆ 1.7 ಕೋಟಿ ರೈತರಿಗೆ ಪ್ರಯೋಜನ ನೀಡಲಿದೆ ಇದು ನಮ್ಮ ಅನ್ನದಾತರಿಗಾಗುವ ಅನುಕೂಲವಲ್ಲವೇ? ‘ಉದ್ಯಮಕ್ಕೆ ಶಕ್ತಿ ತುಂಬಲು ಹೊಸ ಸ್ಟಾರ್ಟ್ಅಪ್ಗಳಿಗೆ ವಿಶೇಷ ನಿಧಿ’ ಸ್ಥಾಪನೆಗೆ ಮುಂದಾಗಿದ್ದು ಪ್ರಸ್ತುತ ಕೇಂದ್ರ ಸರ್ಕಾರ ನೀಡುತ್ತಿರುವ ರೂ.10,000 ಕೋಟಿ ಜೊತೆಗೆ ಹೊಸದಾಗಿ ರೂ.10,000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 5 ಲಕ್ಷ ಮಹಿಳೆಯರಿಗೆ ಹೊಸ ಉದ್ಯಮ ಸ್ಥಾಪನೆಗೆ ಯೋಜನೆ ಆರಂಭಿಸಿರುವುದು ನಾಡಿನ ಪರಿಶಿಷ್ಟ ಮಹಿಳೆಯರ ಸ್ವಾವಲಂಬಿ ಬದುಕು ಕಟ್ಟಿಕೊಡುವ ಯೋಜನೆಯಲ್ಲವೇ?
ಇನ್ನಾದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇಂದ್ರದ ಜನಪರ ನಿಲುವುಗಳನ್ನು ಟೀಕಿಸುವ ಬದಲು ಸಮೃದ್ಧ ಕರ್ನಾಟಕ ಕಟ್ಟಲೂ ಬರಪೂರ ಯೋಜನೆಗಳನ್ನು ನೀಡುತ್ತಿರುವ ಮೋದಿ ಸರ್ಕಾರದೊಂದಿಗೆ ವಿಶ್ವಾಸಪೂರ್ಣ ಸಹಕಾರದ ಹೆಜ್ಜೆ ಹಾಕಲಿ ಎಂದು ವಿಜಯೇಂದ್ರ ಹೇಳಿದ್ದಾರೆ.