Monday, September 23, 2024
Monday, September 23, 2024

ಹಳ್ಳಿಹೊಳೆಯ ಕಲಾ ಮಾಂತ್ರಿಕ

ಹಳ್ಳಿಹೊಳೆಯ ಕಲಾ ಮಾಂತ್ರಿಕ

Date:

ಈ ಶೀರ್ಷಿಕೆ ನೋಡಿ ನಿಮಗೆ ಇದಕ್ಕೆ ಪುರಾವೆ ಬೇಕಾದರೆ ಕಮಲಶಿಲೆ-ಕೊಲ್ಲೂರು ರಸ್ತೆಂ ಬದಿಯಲ್ಲಿ ಕಲ್ಲಿನ ಮೇಲೆ ಹಾಯಾಗಿ ವಿಶ್ರಾಂತಿಯನ್ನು ಪಡೆಯುತ್ತಿರುವ ಮಂಡೂಕವನ್ನು ವೀಕ್ಷಿಸಿ. ಶೀರ್ಷಿಕೆಯಲ್ಲಿ ಉಲ್ಲೇಖಿಸಿದ ಕಲಾ ಮಾಂತ್ರಿಕ ಚೇತನ್ ಕುಮಾರ್ ಹಳ್ಳಿಹೊಳೆ, ಪ್ರವಾಸಿಗರನ್ನು ಸೆಳೆಯುತ್ತಿರುವ ಈ ಮುರಕಲ್ಲಿಗೆ ಮರುಜೀವ ನೀಡಿದ ಸೃಜನಶೀಲ ಕಲಾವಿದ. ಸೃಜನಶೀಲತೆ ಮತ್ತು ಆಸಕ್ತಿಯ ಮಿಶ್ರಣ ಆಗಿದರೆ ಅದ್ಭುತವೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಚೇತನ್ ಕುಮಾರ್ ಹಳ್ಳಿಹೊಳೆ ಸರಿಯಾದ ಉದಾಹರಣೆ ಎಂದರೆ ಅತಿಶಯೋಕ್ತಿ ಆಗಲಾರದು. ಇವರು ರಚಿಸಿರುವ ಮಂಡೂಕವು ಇದೀಗ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ನಮ್ಮ ಉಡುಪಿ ಬುಲೆಟಿನ್ ಜೊತೆಗೆ ಮಾತನಾಡಿದ ಕಲಾವಿದ ಚೇತನ್ ಕುಮಾರ್ ಹಳ್ಳಿಹೊಳೆ, ನನಗೆ ಚಿತ್ರಕಲೆಯಲ್ಲಿ ಚಿಕ್ಕಂದಿನಿಂದಲೂ ತುಂಬ ಆಸಕ್ತಿ ಇದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಪುಸ್ತಕದಲ್ಲಿರುವ ಚಿತ್ರಗಳನ್ನು ನೋಡಿ ಇನ್ನೊಂದು ಚಿತ್ರ ಕೈಯಿಂದ ರಚಿತವಾಗಿ ಖುಷಿಯಾಗಿ ಆಸಕ್ತಿಯೂ ಹೆಚ್ಚಾಗುತ್ತಿತ್ತು ಎಂದಿದ್ದಾರೆ.

ಚೇತನ್ ಕುಮಾರ್ ನಾಲ್ಕು ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಅದ್ಭುತವಾದ ಕಲಾಕೃತಿಗಳನ್ನು ರಚಿಸಿ ಜನಮನ್ನಣೆಗಳಿಸಿದ್ದಾರೆ. ಚಿತ್ತಾರ ಹಳ್ಳಿಹೊಳೆ ಎಂಬ ಕಲಾ ತಂಡವನ್ನು ಕಟ್ಟಿಕೊಂಡಿರುವ ಇವರು ಇದರ ಮೂಲಕವೇ ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲಾ ಆರಾಧನೆಯಲ್ಲಿ ತೊಡಗಿಕೊಂಡಿದ್ದಾರೆ.

ಈ ತಂಡದಲ್ಲಿ 5-6 ಮಂದಿ ಇದ್ದು ಹೆಚ್ಚಿನ ಕೆಲಸಗಳಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆಯ ಕಲಾವಿದರು ಕೂಡ ತಂಡದಲ್ಲಿ ಸೇರ್ಪಡೆಯಾಗಿ ಬಂದಿರುವ ಆರ್ಡರ್ ಗಳನ್ನು ಕ್ಲಪ್ತ ಸಮಯದಲ್ಲಿ ಮುಗಿಸುತ್ತಾರೆ. ಮಂಡೂಕ ರಚಿಸುವ ಹಿಂದಿನ ಉದ್ದೇಶದ ಕುರಿತು ಮಾತನಾಡಿದ ಚೇತನ್, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿದ್ದ ಊರಿನಲ್ಲಿ ಚಿಕ್ಕ ಪ್ರಾಣಿಯಿಂದ ಹಿಡಿದು ಎಲ್ಲಾ ಪ್ರಾಣಿಗಳೂ ಆರಾಮವಾಗಿ ಜೀವಿಸಬಹುದು ಎಂಬ ಸಂದೇಶವನ್ನು ಮುರಕಲ್ಲಿನ ಮೇಲೆ ಮಂಡುಕವು ಹಾಯಾಗಿ ಮಲಗಿದ್ದ ರೀತಿಯಲ್ಲಿ ಬಿಂಬಿಸಲಾಗಿದೆ. ಪ್ರವಾಸಿಗರಲ್ಲಿ ಪರಿಸರ ಕಾಳಜಿಯ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶವು ಇದರಲ್ಲಿ ಅಡಗಿದೆ ಎಂದು ಚೇತನ್ ಹೇಳುತ್ತಾರೆ. ನಮ್ಮ ಅಭಿವೃದ್ಧಿಗೆ ಕಾರಣವಾಗಿರುವ ನಮ್ಮೂರಿಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಮಂಡೂಕವನ್ನು ಹಲವಾರು ದಿನಗಳ ಪರಿಶ್ರಮದಿಂದ ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದೇವೆ. ಮಂಡೂಕ ರಚಿಸಲು ಚೇತನ್ ಕುಮಾರ್ ರವರಿಗೆ ಸಾಥ್ ನೀಡಿದ್ದು ಅಭಿಷೇಕ್ ಎಂಬ ಚಿಗುರು ಮೀಸೆಯ ಕಲಾವಿದ.

ಹಳೆಯ ವಸ್ತುಗಳಿಗೆ ಹೊಸ ಮೆರುಗು ಕೊಡುವಲ್ಲಿ ಇವರು ನಿಸ್ಸೀಮರು. ಹಳೆಯ ವಸ್ತು ಯಾವ ಮಾಧ್ಯಮದಲ್ಲಿ, ಆಕಾರದಲ್ಲಿದೆ ಎಂಬುದನ್ನು ತಿಳಿದು ಅದಕ್ಕೆ ಸಂಬಂಧಪಟ್ಟ ಸ್ಕೆಚ್ ಹಾಕುವ ಮೂಲಕ ಆ ವಸ್ತುಗಳಿಗೆ ರೂಪವನ್ನು ನೀಡುತ್ತೇನೆ ಎಂದಿದ್ದಾರೆ. ಇಷ್ಟು ಮಾತ್ರವಲ್ಲದೇ ಶಾಲೆಯ ಆವರಣ ಗೋಡೆಗಳಲ್ಲಿ ವರ್ಲಿ ಆರ್ಟ್, ಕಾರ್ಟೂನ್ ಆರ್ಟ್, ರಿಯಲಿಸ್ಟಿಕ್ ಪೈಂಟಿಂಗ್ ಸೇರಿದಂತೆ ಹಲವಾರು ಚಿತ್ರಗಳನ್ನು ಇವರ ತಂಡ ರಚಿಸಿದೆ. ಇಂತಹ ಕಲಾಕೃತಿಗಳನ್ನು ರಚಿಸಲು ಇವರ ತಂಡವನ್ನೇ ಹುಡುಕಿಕೊಂಡು ಅನೇಕ ಶಾಲಾ ಕಾಲೇಜುಗಳು ಮತ್ತು ಸಂಘ ಸಂಸ್ಥೆಗಳು ಬರುತ್ತಿರುವುದು ಇವರ ಕಲಾಬದ್ಧತೆ ಮತ್ತು ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ರಸ್ತೆಯಲ್ಲಿ 3ಡಿ ಪೈಂಟಿಂಗ್ ಮೂಲಕ ಜನಜಾಗೃತಿ ಮೂಡಿಸಿರುವ ಚೇತನ್ ಕುಮಾರ್ ಹಳ್ಳಿಹೊಳೆಯವರ ತಂಡವು ಕಲಾ ಆರಾಧನೆಯಲ್ಲಿಯೂ ಸಾಮಾಜಿಕ ಕಳಕಳಿಯನ್ನು ಕೂಡ ಅನಾವರಣಗೊಳಿಸಿದೆ.

ಡಿಜಿಟಲ್ ಯುಗದಲ್ಲಿ ಕಲಾವಿದರಿಗೆ ಒಳ್ಳೆಯ ಬೇಡಿಕೆಯಿದೆ. ಕಲೆಯಲ್ಲಿ ಕಲಾವಿದರ ಶ್ರಮ, ಆಲೋಚನೆ, ತಾಳ್ಮೆ, ಕಲಾಕೌಶಲ್ಯ ಎಲ್ಲಕ್ಕಿಂತ ವಿಭಿನ್ನವಾಗಿದೆ ಎಂದು ಚೇತನ್ ಅಭಿಪ್ರಾಯಪಡುತ್ತಾರೆ. ಕಳೆದ ವರ್ಷದ ಲಾಕ್ ಡೌನ್ ಮತ್ತು ಪ್ರಸಕ್ತ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಚೇತನ್ ಕುಮಾರ್ ಸಮಯದ ಸದ್ಬಳಕೆಯನ್ನು ಮಾಡಿ ಅತ್ಯಾಕರ್ಷಕ ಕಲಾಕೃತಿಗಳನ್ನು ತನ್ನಲ್ಲಿರುವ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಮಿಶ್ರಣಗೊಳಿಸಿ ನಿರ್ಮಿಸಿದ್ದಾರೆ.

ಸಾಬೂನು ಕಲಾಕೃತಿ ರಚಿಸುವಲ್ಲಿ ಚೇತನ್ ಎತ್ತಿದ ಕೈ. ತಾಯಿಯ ಗರ್ಭದಲ್ಲಿರುವ ಶಿಶು, ಸರ್ ಎಂ.ವಿ, ಮರಿಗಳಿಗೆ ಆಹಾರ ನೀಡುವ ಹಕ್ಕಿ ಸೇರಿದಂತೆ ಅತ್ಯಾಕರ್ಷಕ ಕೆತ್ತನೆಗಳನ್ನು ಚೇತನ್ ಸಾಬೂನಿನೊಳಗೆಯೇ ರಚಿಸಿದ್ದಾರೆ.

ಕಲಾಪ್ರಿಯರಿಗೆ ಚೇತನ್ ಕುಮಾರ್ ರವರ ಸಂದೇಶ:

ಕಲಾ ಜೀವನದಲ್ಲಿ ನಮಗಿಂತ ಎತ್ತರದಲ್ಲಿರುವವರ ಜೊತೆ ಕಲಿತರೆ ನಾವು ಅವರ ಅರ್ಧದಷ್ಟಾದರೂ ಗುರಿಯನ್ನು ತಲುಪಬಹುದು. ಕಲಾ ಜ್ಞಾನವನ್ನು ಪಡೆಯಲು ಎಷ್ಟು ಸಮಯವನ್ನು ಕಳೆಯುತ್ತೇವೆಯೋ ಅಷ್ಟೇ ಸುಂದರವಾದ ಕಲಾಕೃತಿಯನ್ನು ರಚಿಸಲು ಸಾಧ್ಯವಾಗುತ್ತದೆ. ಕೆಲವು ಕಲಾಕೃತಿ ರಚಿಸಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತೇವೆ. ನಮಗೆ ತಾಳ್ಮೆ ಬಹುಮುಖ್ಯ. ಯಾವುದೇ ಕಲಾಕೃತಿ ಮಾಡಿದರೂ ಅದರಲ್ಲಿ ಏನಾದರೂ ಹೊಸತನವನ್ನು ಕಲಿಯಬೇಕು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಪ್ರದರ್ಶನಕ್ಕೆ ಕಲಾಕೃತಿ ಆಹ್ವಾನ

ಬೆಂಗಳೂರು, ಸೆ.21: ನಾಡಹಬ್ಬ ಮೈಸೂರು ದಸರಾ ಮಹೋತ್ಸವ - 2024ರಲ್ಲಿ ಲಲಿತಕಲೆ...

ಮ್ಯಾಕ್ಸಿಕ್ಯಾಬ್ ನ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ಸಡಿಲಿಕೆಗೆ ಮನವಿ

ಬೆಂಗಳೂರು, ಸೆ.22: ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್...

ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ: ಭಾಸ್ಕರ್ ಸ್ವಾಮಿ

ಕೋಟ, ಸೆ.22: ಕೃಷಿ ಕಾಯಕಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಪಂಚವರ್ಣದ...

ಕಸಾಪ ಉಡುಪಿ ತಾಲೂಕು ಘಟಕದಿಂದ ಪುಸ್ತಕಗಳ ಕೊಡುಗೆ

ಉಡುಪಿ, ಸೆ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು...
error: Content is protected !!