ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮದ ಒಂದು ಭಾಗವಾಗಿ ಹಲವಾರು ವರ್ಷಗಳಿಂದ 5 ರಿಂದ 10 ನೇ ತರಗತಿಯವರೆಗೆ ಪ್ರತೀ ತರಗತಿಗೆ 5 ವಿದ್ಯಾರ್ಥಿಗಳಂತೆ ಉಚಿತ ಶಿಕ್ಷಣವನ್ನು ಕಾರ್ಕಳ ತಾಲೂಕಿನ ಬಡ ಅರ್ಹ ಮಕ್ಕಳಿಗೆ ನೀಡಲಾಗುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಿಂದ ಈ ಉಚಿತ ಶಿಕ್ಷಣವನ್ನು ಕಾಲೇಜು ವಿಭಾಗದಲ್ಲಿ ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಲಾಗಿದೆ. ಪ್ರಸ್ತುತ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡಿಸ್, ಎಕೌಂಟೆನ್ಸಿ ಮತ್ತು ಸ್ಟಾಟಿಸ್ಟಿಕ್ಸ್ ಅಥವಾ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡಿಸ್, ಎಕೌಂಟೆನ್ಸಿ ಮತ್ತು ಕಂಪ್ಯೂಟರ್ ಸೈನ್ಸ್ ಸಂಯೋಜನೆಯೊಂದಿಗೆ ಸಿ.ಎ.ಫೌಂಡೇಶನ್, ಸಿ.ಎಸ್.ಇ.ಇ.ಟಿ ತರಗತಿಗಳು ನಡೆಯುತ್ತಿದೆ. ಇದರೊಂದಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿಶಿಕ್ಷಣ ತರಬೇತಿಯನ್ನು ನೀಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಕಾನೂನು ವಿದ್ಯಾಲಯಗಳ ಪ್ರವೇಶಕ್ಕಾಗಿ ನಡೆಯುವ ಕ್ಲಾಟ್ ಪರೀಕ್ಷಾ ತರಬೇತಿಯು ಪ್ರಾರಂಭಗೊಳ್ಳಲಿದೆ.
ಉಚಿತ ಶಿಕ್ಷಣ: 2025-26ನೇ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ, ಹತ್ತನೇ ತರಗತಿಯಲ್ಲಿ ಶೇ ೯೫ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ. 90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ ೮೫ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗಾಗಿ : 7259500911, 8147454906
ಪಠ್ಯ ಹಾಗೂ ಪಠ್ಯೇತರ ಸಾಧನೆ: ಸಂಸ್ಥೆಯಲ್ಲಿ ಅತ್ಯುತ್ತಮ ರೀತಿಯ ಸಿ.ಎ.ಫೌಂಡೇಶನ್ ತರಗತಿಯು ನಡೆಯುತ್ತಿದ್ದು ಈಗಾಗಲೇ 35 ವಿದ್ಯಾರ್ಥಿಗಳು ಸಿ.ಪಿ.ಟಿ ಹಾಗೂ 15 ವಿದ್ಯಾರ್ಥಿಗಳು ಸಿ.ಎ.ಫೌಂಡೇಶನ್ನಲ್ಲಿ ಉತ್ತೀರ್ಣರಾಗಿರುತ್ತಾರೆ. ಸಿ.ಎ ಅಂತಿಮ ಪರೀಕ್ಷೆಯಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರಸ್ತುತ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರ ಜೂನ್ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಸಾತ್ವಿಕ್ ಪ್ರಭು 400ರಲ್ಲಿ 342 ಅಂಕ ಪಡೆದು, 2017ರ ಜೂನ್ ಸಿ.ಪಿ.ಟಿ ಪರೀಕ್ಷೆಯಲ್ಲಿ ಕೇದಾರ್ನಾಥ್ ವಿ. ಕಾಮತ್ 200ಕ್ಕೆ 188 ಅಂಕ ಗಳಿಸಿರುತ್ತಾರೆ.
ಸಂಸ್ಥೆಯ ವಾಣಿಜ್ಯ ವಿಭಾಗದ ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿ ಹಲವಾರು ರ್ಯಾಂಕ್ಗಳನ್ನು ಪಡೆದಿದ್ದು, 2016ರಲ್ಲಿ ರಕ್ಷಾ ಶೆಣೈ 594 ಅಂಕ ಗಳಿಸಿ ರಾಜ್ಯಕ್ಕೆ 2 ಸ್ಥಾನಿಯಾಗಿ ಹೊರಹೊಮ್ಮಿರುತ್ತಾರೆ. 2019ರ ಫಲಿತಾಂಶದಲ್ಲಿ ರಿತಿಕಾ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನಿಯಾಗಿಯೂ, ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿಯೂ, 2021ರಲ್ಲಿ ಛಾಯಾ ಸಿ. ಪೈ ರಾಜ್ಯಕ್ಕೆ 3ನೇ ಸ್ಥಾನಿಯಾಗಿ, ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ, 2023ರಲ್ಲಿ ಶರಣ್ಯಾ ಎಸ್ ಹೆಗ್ಡೆ ಮತ್ತು ಮಾನ್ಯ ಜೈನ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನಿಯಾಗಿಯೂ, 2023ರಲ್ಲಿ ಚೈತ್ರಾ ಕಾಮತ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನವನ್ನು ಗಳಿಸುವುದರ ಜೊತೆಗೆ ಒಟ್ಟು 5 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿರುತ್ತಾರೆ. ಈ ಬಾರಿ 2025ರ ಜನವರಿಯಲ್ಲಿ ನಡೆದ ಸಿ.ಎಸ್.ಇ.ಇ.ಟಿ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುತ್ತಾರೆ.
ಪಠ್ಯೇತರ ಚಟುವಟಿಕೆಯಲ್ಲಿ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಕಾರ್ಯಚರಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಿ ಈಗಾಗಲೇ ರಿತಿಕಾ ಕಾಮತ್, ವೃದ್ಧಿ ಶೆಟ್ಟಿ ಮತ್ತು ಸಮಿಯಾ ಹೆಗ್ಡೆ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್, ತ್ರೋಬಾಲ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಫೂಟ್ಬಾಲ್ ಮತ್ತು ಅಥ್ಲೇಟಿಕ್ಸ್ ತರಬೇತಿ ಪಡೆದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸಲು ವ್ಯಾಪಾರ ಮೇಳಗಳನ್ನು ಹಾಗೂ ಕೈಗಾರಿಕಾ ಭೇಟಿಯನ್ನು ಆಯೋಜಿಸಲಾಗುತ್ತಿದೆ.