ಉಡುಪಿ, ಫೆ.19: ಛತ್ರಪತಿ ಶಿವಾಜಿಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ತತ್ವಗಳು ಎಲ್ಲರಿಗೂ ಮಾದರಿಯಾಗಬೇಕು ಹಾಗೂ ಅವರ ಜೀವನಚರಿತ್ರೆ, ಆಚಾರ ವಿಚಾರಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಶಾಸಕ ಯಶ್ಪಾಲ್ ಎ ಸುವರ್ಣ ಹೇಳಿದರು. ಅವರು ಬುಧವಾರ ಮಲ್ಪೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿವಾಜಿಯ ಜೀವನ ಚರಿತ್ರೆಯನ್ನು ಅವಲೋಕಿಸಿ ಇತಿಹಾಸಕ್ಕೆ ನೀಡಿದ ಅವರ ಕೊಡುಗೆಗಳನ್ನು, ವ್ಯಕ್ತಿತ್ವ ಗುಣಗಳನ್ನು ಅರಿತುಕೊಳ್ಳಬೇಕು. ದೇಶದಲ್ಲೇ ಉತ್ತಮ ಆಡಳಿತ ನೀಡಿದ ಹಿಂದೂ ಮಹಾಕ್ರಾಂತಿಕಾರಿ ಶಿವಾಜಿ ಜಯಂತಿಗೆ ಅರ್ಥಪೂರ್ಣ ಮಹತ್ವ ದೊರೆಯಬೇಕು ಎಂದ ಅವರು, ಶೀಘ್ರದಲ್ಲಿಯೇ ಜಿಲ್ಲೆಯಲ್ಲಿ ಶಿವಾಜಿಯವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ನಾಗರಾಜ್ ವಿ ನಾಯಕ್ ಮಾತನಾಡಿ, ಅಂದಿನ ಕಾಲಘಟ್ಟದಲ್ಲಿ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ ಧೀಮಂತ ನಾಯಕ ಹಾಗೂ ಶಿವಾಜಿಯ ಜಾಣ್ಮೆಯು ತನ್ನ ಆಡಳಿತಕ್ಕೆ ಪ್ರಮುಖವಾಗಿತ್ತು. ಜೀವನಕ್ಕೆ ಉತ್ತಮ ದಾರಿಗಳನ್ನು ಹುಡುಕುವ ಮುಂಚೆ ಸಂಕೋಚವನ್ನು ಬಿಡಬೇಕು ಹಾಗೂ ತಂದೆ, ತಾಯಿ ಮತ್ತು ಗುರುಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು. ಜಿಲ್ಲೆಯ ಲೇಖಕ ಮತ್ತು ಕಥೆಗಾರರಾದ ಮಂಜುನಾಥ ಹಿಲಿಯಾಣ ಉಪನ್ಯಾಸ ನೀಡಿ ಮಾತನಾಡಿ, ಶಿವಾಜಿಯ ಶ್ರದ್ಧೆ ಮತ್ತು ಧೈರ್ಯ ಎಲ್ಲರಿಗೂ ಪ್ರೇರಣೆಯಾಗಬೇಕು ಹಾಗೂ ಅವರ ಆದರ್ಶಗಳನ್ನು, ಜೀವನದ ಮೌಲ್ಯಗಳನ್ನು ಇಂದಿನ ಪೀಳಿಗೆಯ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಇತಿಹಾಸಕ್ಕೆ ಶಿವಾಜಿ ನೀಡಿದ ಕೊಡುಗೆಗಳನ್ನು ಮನನ ಮಾಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಸಮುದಾಯದ ವತಿಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ್ ರಾವ್ ಬಡಾನಿಡಿಯೂರು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಮೃದ್ಧಿ ಆರ್ ಇವರನ್ನು ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿದ್ದೋದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕ್, ಕಾಲೇಜಿನ ಪ್ರಾಂಶುಪಾಲೆ ಜಯಶ್ರೀ, ಮರಾಠ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ತೇಜಸ್ ಬಂಗೇರ ನಿರೂಪಿಸಿ, ಕಾಲೇಜಿನ ಹಿರಿಯ ಶಿಕ್ಷಕ ಸತೀಶ್ ಭಟ್ ವಂದಿಸಿದರು.