ಉಡುಪಿ, ಫೆ.5: ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ಯೋಗ, ಪ್ರಾಣಾಯಾಮಗಳು ಸಹಕಾರಿ. ದೈಹಿಕ ಆರೋಗ್ಯದ ಉದ್ದೇಶದಿಂದ ಮಾತ್ರ ಯೋಗಭ್ಯಾಸವನ್ನು ಮಾಡಬಾರದು. ಯೋಗಭ್ಯಾಸದಿಂದ ಆಗುವ ಸರ್ವ ಪ್ರಯೋಜನವನ್ನು ಪಡೆಯಲು ಬಾಲ್ಯದಿಂದಲೇ ಯೋಗ ಅಭ್ಯಾಸವನ್ನು ದೈನಂದಿನ ಜೀವನ ಕ್ರಮವೆಂಬಂತೆ ರೂಢಿಸಿಕೊಳ್ಳಬೇಕು ಎಂದು ಕ್ರೀಡಾ ಭಾರತಿ ಉಡುಪಿಯ ವಿಭಾಗೀಯ ಸಂಯೋಜಕರಾದ ಪ್ರಸನ್ನ ಶಣೈ ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಥಸಪ್ತಮಿ ಪ್ರಯುಕ್ತ ಯೋಗ ತರಬೇತಿಯನ್ನು ನೀಡಿ ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಯೋಗಾಭ್ಯಾಸದೊಂದಿಗೆ ಸೂಕ್ತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಕೂಡ ಮುಖ್ಯ ಎಂದು ಹೇಳಿದರು. ಕ್ರೀಡಾ ಭಾರತೀಯ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಬೈಲೂರು, ಮಹಿಳಾ ಪ್ರಮುಖ್ ವಿದ್ಯಾ ಸನಿಲ್, ಉಡುಪಿ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ರವೀಂದ್ರ, ಯೋಗ ಶಿಕ್ಷಕರಾದ ಅಮಿತ್ ಶೆಟ್ಟಿ, ಎಸ್ ಡಿ ಎಂ ಸಿ ಗೌರವಾಧ್ಯಕ್ಷೆ ತಾರಾದೇವಿ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಇಂದಿರಾ ಬಿ ಸ್ವಾಗತಿಸಿ, ಶಿಕ್ಷಕ ವಸಂತ ಜೋಗಿ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಭಟ್ ವಂದಿಸಿದರು.