ಉಡುಪಿ, ಫೆ.2: ಶ್ರೀ ಪುತ್ತಿಗೆ ಮಠದ ಆಡಳಿತದಲ್ಲಿರುವ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನಕ್ಕೆ ಭಕ್ತರ ಸಹಕಾರದಿಂದ 20 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ರಥದ ಸಮರ್ಪಣಾ ಕಾರ್ಯಕ್ರಮದ ಶೋಭಾಯಾತ್ರೆಗೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೀತಾಮಂದಿರದ ಬಳಿ ರಥಕ್ಕೆ ಚಾಲನೆ ನೀಡಿದರು. ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಮೂಲಕ ಕಡಿಯಾಳಿ ಮಾರ್ಗವಾಗಿ ವಿವಿಧ ವೇಷಭೂಷಣ ಬಿರುದಾಳಿಯೊಂದಿಗೆ ರಥದ ಮೆರವಣಿಗೆ ನೆರವೇರಿತು. ಬಳಿಕ ಪಣಿಯಾಡಿಯ ಅನಂತಾಸನ ದೇವರ ಪ್ರಾಂಗಣದಲ್ಲಿ ಜನಸ್ತೋಮದ ಮಧ್ಯೆ. ಅನನಂತಾಸನ ದೇವರಿಗೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಮರ್ಪಿಸಿದರು.
ಸಭಾ ಕಾರ್ಯಕ್ರಮದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ, ರಥದ ಸಮರ್ಪಣೆಯಿಂದ ಭಕ್ತ ಜನರ ಮನೋರಥ ನೆರವೇರುತ್ತೆ, ದೇಹವೇ ಭಗವಂತ ನೀಡಿದ ರಥ, ಈ ರಥದ ಸಮರ್ಪಣೆಯಿಂದ ನಮ್ಮ ದೇಹವೆಂಬ ರಥವೂ ಸದೃಢ ವಾಗಲಿದೆ. ದೇಶವೂ ಸುಭಿಕ್ಷೆಯಾಗಲಿದೆ ಎಂದು ಹಾರೈಸಿದರು. ದಾರುಮಯ ಸುಂದರ ರಥವನ್ನು ನಿರ್ಮಿಸಿದ ಶಿಲ್ಪಿ ಪರಮೇಶ್ವರ ಆಚಾರ್ಯ ಇವರನ್ನು ಶ್ರೀಪಾದರು ಶಾಲು ಹೊದಿಸಿ ಪ್ರಸಾದವನ್ನು ನೀಡಿ ಹರಸಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಪ್ರಸಾದ್ ರಾಜ್ ಕಾಂಚನ್, ಖ್ಯಾತ ಜೋತಿಷಿ ವಿದ್ವಾನ್ ಗೋಪಾಲ ಜೋಯಿಸ್, ನಗರಸಭಾ ಸದಸ್ಯ ಗಿರೀಶ್ ಅಂಚನ್, ಇಂದ್ರಾಳಿ ಜಯಕರ ಶೆಟ್ಟಿ, ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಅಧ್ಯಕ್ಷರಾದ ವಿಜಯರಾಘವ ರಾವ್, ಹಾಗೂ ಖ್ಯಾತ ವಕೀಲರಾದ ರಾಮಚಂದ್ರ ಅಡಿಗ ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ವತಿಯಿಂದ ದಿವಾನರಾದ ನಾಗರಾಚಾರ್ಯ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಸುನಿಲಾಚಾರ್ಯ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿಯ ರಾಘವೇಂದ್ರ ಭಟ್ ವಂದಿಸಿದರು.