Sunday, September 22, 2024
Sunday, September 22, 2024

ಅಂಬೇಡ್ಕರ್ ಅವರಿಂದ ಎಲ್ಲಾ ಕಾಲಕ್ಕೂ, ಎಲ್ಲರಿಗೂ ಸೌಲಭ್ಯ ನೀಡುವ ಸಂವಿಧಾನ ರಚನೆ: ಉಸ್ತುವಾರಿ ಸಚಿವ ಅಂಗಾರ

ಅಂಬೇಡ್ಕರ್ ಅವರಿಂದ ಎಲ್ಲಾ ಕಾಲಕ್ಕೂ, ಎಲ್ಲರಿಗೂ ಸೌಲಭ್ಯ ನೀಡುವ ಸಂವಿಧಾನ ರಚನೆ: ಉಸ್ತುವಾರಿ ಸಚಿವ ಅಂಗಾರ

Date:

ಉಡುಪಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಅವರು ತಾನು ಅನುಭವಿಸಿದ ಬಡತನ, ಅಸಮಾನತೆಯ ನೋವುಗಳನ್ನು ಅರಿತು, ಸಂವಿಧಾನ ರಚನಾ ಸಮಯದಲ್ಲಿ ದೇಶದಲ್ಲಿ ಎಲ್ಲಾ ಕಾಲಕ್ಕೂ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ಸೌಲಭ್ಯಗಳು ದೊರೆಯುವ ರೀತಿಯಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಪ.ಜಾತಿ ಮತ್ತು ವರ್ಗಗಳ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ.ಬಿ.ಆರ್. ಅಂಬೇಡ್ಕರ್ ಅವರ 131 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಅನೇಕ ರಾಷ್ಟ್ರಗಳು ಸಂವಿಧಾನ ರಚನೆ ಮಾಡಿಕೊಂಡಿದ್ದರೂ ಸಹ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಭಾರತದ್ದು ಆಗಿದೆ. ಸಂವಿಧಾನ ರಚನೆ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಯಾವುದೇ ವ್ಯಕ್ತಿ ಅಥವಾ ವೈಯಕ್ತಿಕ ಹಿತಾಸಕ್ತಿಯಿಲ್ಲದೇ ದೇಶದ ಹಾಗೂ ಪ್ರತಿ ಪ್ರಜೆಯ ಹಿತವನ್ನು ಅಲೋಚಿಸಿ ರಚನೆ ಮಾಡಿದ್ದಾರೆ. ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಮಾತ್ರ ಅನುಭವಿಸಿದೇ ಅದರಲ್ಲಿನ ನಿಯಮಗಳನ್ನು ಪರಿಪಾಲನೆ ಮಾಡುವುದು ಅಗತ್ಯ ಎಂದರು.

ಅಂಬೇಡ್ಕರ್ ವಿಚಾರ ಧಾರೆಗಳನ್ನು ಮಾತನಾಡುವುದಕ್ಕೆ ಮಾತ್ರ ಸೀಮಿತವಾಗದೇ ಅವುಗಳ ಪರಿಪಾಲನೆ ಆಗಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಸಮಾಜದಲ್ಲಿನ ವ್ಯಕ್ತಿಗಳು ಜಾತಿ ಮತ ಪಂಥಗಳಿಗಾಗಿ ಹೋರಾಡದೇ, ಉತ್ತಮ ನೀತಿವಂತರಾಗಿ ಸಾಧನೆ ಮಾಡಬೇಕು. ರಾಜಕೀಯ ಸೇರಿದಂತೆ ಯಾವುದೆ ಅಧಿಕಾರವನ್ನು ಪಡೆಯಲು ತಮ್ಮತನವನ್ನು ಕಳೆದುಕೊಳ್ಳಬಾರದು. ನಮ್ಮತನ ಕಳೆದುಕೊಂಡು ಪಡೆಯುವ ಅಧಿಕಾರದಿಂದ ನೆಮ್ಮದಿ ಸಿಗುವುದಿಲ್ಲ. ಉತ್ತಮ ವ್ಯಕ್ತಿತ್ವದಿಂದ ಸಾಧನೆಗಳನ್ನು ಮಾಡಬೇಕು, ಅಂಬೇಡ್ಕರ್ ಅವರು ತಮ್ಮ ವಿದ್ಯೆ, ಪ್ರತಿಭೆ ಮತ್ತು ಜ್ಞಾನಾರ್ಜನೆಯ ಮೂಲಕ ಸಾಧನೆಗಳನ್ನು ಮಾಡಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಪಂಚಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಅಭಿವೃದ್ದಿ ಪಡಿಸಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಸಹ ಅಂಬೇಡ್ಕರ್ ಅವರು ರಾಜ್ಯದ ಭೇಟಿ ನೀಡಿದ ವಿವಿಧ ಸ್ಥಳಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಅವರ ನೆನಪುಗಳನ್ನು ಮುಂದಿನ ಪೀಳಿಗೆ ಸ್ಮರಿಸುವಂತೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಅಂಬೇಡ್ಕರ್ ಅವರು ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು. ಅವರ ಜೀವನ ಚೆರಿತ್ರೆ ಮತ್ತು ವಿಚಾರಧಾರೆಗಳನ್ನು ಯುವ ಜನತೆ ಓದಬೇಕು. ಅವರು ಪಡೆದಷ್ಟು ಪದವಿಗಳನ್ನು ಇದುವರೆಗೆ ಯಾರೂ ಪಡೆಯಲು ಸಾಧ್ಯವಾಗಿಲ್ಲ. ಪುಸ್ತಕ ಪ್ರೇಮಿಯಾಗಿದ್ದ ಅವರು ಅಪಾರ ಪ್ರತಿಭೆ ಮತ್ತು ಜ್ಞಾನ ಪಡೆದಿದ್ದರು. ಪರಿಶ್ರಮ ಮತ್ತು ಓದಿನಿಂದ ಮಹಾನ್ ಸಾಧನೆ ಮಾಡಬಹುದು ಎನ್ನುವುದಕ್ಕೆ ಅವರೇ ಸಾಕ್ಷಿ. ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದರು ಎಂದರು.

ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿದ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಮಾತನಾಡಿ, ಭಾರತದ ಸಂಸೃತಿಯನ್ನು ಅಂರ್ತಗತ ಮಾಡಿಕೊಂಡಿದ್ದ ಅಂಬೇಡ್ಕರ್ ಅವರು, ಅದನ್ನು ಸಂವಿಧಾನ ರಚನೆ ಸಂದರ್ಭದಲ್ಲಿ ಬಳಸಿಕೊಂಡಿದ್ದರು.

ಅವರ ರಚನೆಯ ಸಂವಿಧಾನ ಇದುವರೆಗೂ ಭಾರತದಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಿದೆ. ಅಪಾರ ಜ್ಞಾನ, ಪಾಂಡಿತ್ಯ ಗಳಿಸಿದ್ದರೂ ಅಸ್ಪೃಶ್ಯತೆಯ ನೋವು ಅನುಭವಿಸಿದ್ದರು. ಇಡೀ ದೇಶದ ಸಮಸ್ಯೆ ಅರಿತಿದ್ದ ಅವರು ದಲಿತ ಮತ್ತು ಬಡಜನರ ಶ್ರೇಯೋಭಿವೃಧ್ದಿಗಾಗಿ ಜಾರಿಗೆ ತಂದ ಮೀಸಲಾತಿಯಿಂದ ಅಸಮಾನತೆಯಿಂದ ಬಳಲುತ್ತಿದ್ದ ಲಕ್ಷಾಂತರ ಮಂದಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ., ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ವೀಣಾ, ನಗರಸಭೆ ಆಯುಕ್ತ ಡಾ. ಉದಯ ಶೆಟ್ಟಿ ಹಾಗೂ ಸಮುದಾಯದ ಮುಖಂಡರುಗಳು ಹಾಜರಿದ್ದರು.

ದ್ವಿತೀಯ ಪಿಯುಸಿ ಯಲ್ಲಿ ಶೇ.100 ಅಂಕ ಗಳಿಸಿದ ಕೀರ್ತಿ ಹಾಗೂ ಎಸ್.ಎಸ್.ಎಲ್.ಸಿಯಲ್ಲಿ 98.72% ಅಂಕ ಪಡೆದ ಅನುಪಮಾ ಅವರನ್ನು ಸನ್ಮಾನಿಸಲಾಯಿತು. ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ, ಅಂತರ್ಜಾತಿ ವಿವಾಹವಾದವರಿಗೆ ಪ್ರೋತ್ಸಾಹಧನ, ಆಟೋರಿಕ್ಷಾ ಮಂಜೂರಾತಿ ಮತ್ತು ಅಂಬೇಡ್ಕರ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರ ಸ್ವಾಗತಿಸಿದರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಮೇಶ್ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!