Monday, February 24, 2025
Monday, February 24, 2025

ಜನಸಾಮಾನ್ಯರೊಂದಿಗೆ ಬ್ಯಾಂಕಿನ ವ್ಯವಹಾರಗಳ ಕುರಿತು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ: ಜಿ.ಪಂ ಸಿ.ಇ.ಓ ಪ್ರತೀಕ್ ಬಾಯಲ್

ಜನಸಾಮಾನ್ಯರೊಂದಿಗೆ ಬ್ಯಾಂಕಿನ ವ್ಯವಹಾರಗಳ ಕುರಿತು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಿ: ಜಿ.ಪಂ ಸಿ.ಇ.ಓ ಪ್ರತೀಕ್ ಬಾಯಲ್

Date:

ಉಡುಪಿ, ಸೆ.25: ಬ್ಯಾಂಕ್‌ಗಳ ಮ್ಯಾನೆಜರ್‌ಗಳು ಹಾಗೂ ಸಿಬ್ಬಂದಿಗಳು ಜನಸಾಮಾನ್ಯರೊಂದಿಗೆ ಬ್ಯಾಂಕಿನ ವ್ಯವಹಾರಗಳ ಕುರಿತು ಸ್ಥಳೀಯ ಪ್ರಾದೇಶಿಕ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದರಿಂದ ಬ್ಯಾಂಕಿನ ವ್ಯವಹಾರಗಳು ಮತ್ತಷ್ಟು ಅಭಿವೃದ್ಧಿಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ತಿಳಿಸಿದರು. ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಕೃತ ಬ್ಯಾಂಕುಗಳ ಹೆಸರು ಹಾಗೂ ಸ್ಥಳಗಳನ್ನು ಬ್ಯಾಂಕುಗಳ ಬೋರ್ಡುಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಅಳವಡಿಸಬೇಕು. ಗ್ರಾಹಕರೊಂದಿಗೆ ಸಂವಹನ ಮಾಡಲು ಅನುಕೂಲವಾಗುವಂತೆ ಸ್ಥಳೀಯ ವ್ಯಕ್ತಿಗಳನ್ನು ನೇಮಿಸುವಂತೆ ತಿಳಿಸಿದರು. ಸಾರ್ವಜನಿಕರ ಜೀವನಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಕುರಿತು ಬ್ಯಾಂಕ್ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜನಸಾಮಾನ್ಯರಿಗೆ ವ್ಯವಹಾರ ಚಟುವಟಿಕೆಗಳ ಕುರಿತು ಅರಿವು ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯ ಜನರನ್ನು ಯೋಜನೆಯ ಫಲಾನುಭವಿಗಳನ್ನಾಗಿಸಲು ಕ್ರಮ ವಹಿಸಬೇಕು ಎಂದರು.

ಜಿಲ್ಲೆಯ ಬ್ಯಾಂಕ್‌ಗಳಲ್ಲಿ ಕಳೆದ ಸಾಲಿನಲ್ಲಿ 52,676 ಕೋಟಿ ರೂ. ವ್ಯವಹಾರ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ 58,352 ಕೋಟಿ ರೂ ವ್ಯವಹಾರ ನಡೆದು, 5676 ಕೋಟಿ ರೂ. ಹೆಚ್ಚಾಗಿ ಶೇ.10.78 ರಷ್ಟು ಬೆಳೆವಣಿಗೆಯಾಗಿದೆ. ಆರ್ಥಿಕತೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಲು ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲೆಯಲ್ಲಿ ಆದ್ಯತಾ ವಲಯಗಳಿಗೆ 2703.09 ಕೋಟಿ ರೂ., ಸಾಲ ವಿತರಣೆ ಮಾಡಿ ಶೇ. 30.74 ಹಾಗೂ ಆದ್ಯತೇತರ ವಲಯಗಳಿಗೆ 1677.82 ಕೋಟಿ ರೂ. ಸಾಲ ವಿತರಣೆ ಮಾಡಿ, ಶೇ. 43.65 ರಷ್ಟು ಸಾಧನೆ ಮಾಡಲಾಗಿದೆ ಎಂದರು. ಕೆನರಾ ಬ್ಯಾಂಕ್‌ನ ರೀಜನಲ್ ಮ್ಯಾನೆಜರ್ ಶೀಬ ಸಹಜನ್ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ.46.94 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.46.92 ರಷ್ಟು ಕಡಿಮೆಯಾಗಿ 0.02 ರಷ್ಟು ಹಿನ್ನಡೆಯಾಗಿದೆ. ಸಿ.ಡಿ ಅನುಪಾತದಲ್ಲಿ ಜಿಲ್ಲೆಯು ಶೇ. 50 ಕ್ಕಿಂತ ಕಡಿಮೆ ಇರುವುದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದ್ದು, ಇದನ್ನು ಹೆಚ್ಚಿಸಲು ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂರ‍್ಸ್ಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ಆರ್.ಬಿ.ಐ ನ ಎಕ್ಸಿಕ್ಯುಟಿವ್ ಇಳಾ ಸಾಹು, ನಬಾರ್ಡ್ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ರಾಜೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!