Saturday, October 19, 2024
Saturday, October 19, 2024

ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದ ದೇವರಾಜ ಅರಸರು: ಪ್ರೊ. ಜಯಪ್ರಕಾಶ್ ಶೆಟ್ಟಿ

ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದ ದೇವರಾಜ ಅರಸರು: ಪ್ರೊ. ಜಯಪ್ರಕಾಶ್ ಶೆಟ್ಟಿ

Date:

ಮಲ್ಪೆ, ಆ. 23: ಒಕ್ಕಲುಮಸೂದೆ, ಮೀಸಲಾತಿ, ಜೀತಮುಕ್ತಿ, ಮಲಹೊರುವುದರ ನಿಷೇದ, ಋಣಮುಕ್ತಿಯೇ ಮೊದಲಾದ ಜೀವಪರ ಶಾಸನಗಳ ಮೂಲಕ ದಲಿತ, ದಮನಿತ ಹಾಗೂ ಹಿಂದುಳಿದ ವರ್ಗಗಳಿಗೆ ಬಿಡುಗಡೆ ಕೊಟ್ಟ, ವಿದ್ಯಾರ್ಥಿನಿಲಯ ಮತ್ತು ವಸತಿ ಶಾಲೆಗಳನ್ನು ತೆರೆದು ತಳಜಾತಿಗಳಿಗೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣದ ಹೊಸಬೆಳಕನ್ನು ಕಾಣಿಸಿದ, ತಬ್ಬಲಿ ಜಾತಿಗಳಿಗೆ ರಾಜಕೀಯ ಅಧಿಕಾರದ ಹೆಬ್ಬಾಗಿಲನ್ನು ತೆರೆದು ಕರ್ನಾಟಕದ ರಾಜಕಾರಣದಲ್ಲಿ ಹಿಂದೆಂದೂ ಕಾಣದ ಸಾಮಾಜಿಕ ಕ್ರಾಂತಿಯ ಹೆಗ್ಗುರುತನ್ನು ಸಾಧಿಸಿದ ದೇವರಾಜ ಅರಸರು ಹೇಳ ಹೆಸರಿಲ್ಲದ ತಳಜಾತಿಗಳ ಎದೆಯೊಳಗೆ ಸ್ವಾಭಿಮಾನವನ್ನು ಬಿತ್ತಿದವರು ಮಾತ್ರವಲ್ಲ, ಆಧುನಿಕ ಕರ್ಣಾಟಕಕ್ಕೆ ನಿಜವಾದ ಅರ್ಥದ ಮುಂಚಲನೆಯನ್ನು ಒದಗಿಸಿದ ಧೀಮಂತ ಜನನಾಯಕರು ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ ಹೇಳಿದರು.

ದೇವರಾಜ ಅರಸರ ೧೦೮ನೇ ಜನ್ಮ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ಅವರು, ದೇವರಾಜ ಅರಸರ ಸಾಮಾಜಿಕ ಕಾಳಜಿಯ ಕಾರ‍್ಯಕ್ರಮಗಳಿಂದ ಬೆಚ್ಚಿಬಿದ್ದ ಪಟ್ಟಭದ್ರ ಹಿತಾಸಕ್ತಿಗಳು ನಕಾರಾತ್ಮಕ ಪ್ರಚಾರದ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಯತ್ನ ಮಾಡಿದರಾದರೂ, ಎದೆಗುಂದದ ಅರಸರು ತಾವೇ ಹೇಳಿಕೊಂಡಂತೆ ‘ಬೇಡನೊಬ್ಬನ ಕೈಯಲ್ಲಿ ಹೊಸದೊಂದು ರಾಮಾಯಣ’ ಬರೆಸಿದ್ದಷ್ಟೇ ಅಲ್ಲ, ಎಲ್. ಜಿ ಹಾವನೂರರ ಮೂಲಕ ಬರೆಸಿದ ಆ ಹೊಸರಾಮಾಯಣದ ಫಲಶ್ರುತಿಯಾದ ಮೀಸಲಾತಿಯನ್ನೂ ಜಾರಿಗೆ ತಂದು ಆಧುನಿಕ ಕರ್ಣಾಟಕ ಹಾಗೂ ಭಾರತದ ರಾಜಕಾರಣವನ್ನು ಈಗಲೂ ಪ್ರಭಾವಿಸುತ್ತಿರುವ ವಾಸ್ತವವನ್ನು ನಮ್ಮೆದುರು ಉಳಿಸಿ ಹೋಗಿರುವುದರಲ್ಲೇ ಅವರ ರಾಜಕೀಯ ದೂರದೃಷ್ಟಿಯ ಸಾಕ್ಷಿ ಇದೆ ಎಂದರು. ಇದೇ ಸಂದರ್ಭದಲ್ಲಿ ಅರಸರು ಜಾರಿಗೆ ತಂದ ಒಕ್ಕಲುಮಸೂದೆಯ ಅನುಷ್ಠಾನದಲ್ಲಿ ಅರಸರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಅರಸರ ಸಂಪುಟದ ಸಚಿವರಾಗಿದ್ದ ಕರಾವಳಿಯ ಸಜ್ಜನ ರಾಜಕಾರಣಿ ಸುಬ್ಬಯ್ಯ ಶೆಟ್ಟರನ್ನೂ, ಪತ್ರಕರ್ತನಾಗಿದ್ದುಕೊಂಡು ಪತ್ರಿಕಾರಂಗದ ರಾಜಕಾರಣ ಹಾಗೂ ಅರಸರು ಇಬ್ಬರನ್ನೂ ಹತ್ತಿರದಿಂದ ಕಂಡು ‘ಬಹುರೂಪಿ ಅರಸರು’ ಎಂಬ ಕೃತಿಯನ್ನು ಬರೆದ ವಡ್ಡರ್ಸೆ ರಘುರಾಮ ಶೆಟ್ಟರನ್ನೂ ನೆನೆದರಲ್ಲದೆ, ಚರಿತ್ರೆಯ ಅರಿವಿಲ್ಲದವರು ಚರಿತ್ರೆಯನ್ನು ನಿರ್ಮಾಣ ಮಾಡಲಾರರು ಎಂಬ ಅಂಬೇಡ್ಕರ್ ಅವರ ಸಾಲನ್ನೂ ಉಲ್ಲೇಖಿಸಿದರು

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಅವರು, ಅರಸರು ಜಾರಿಮಾಡಿದ ಒಕ್ಕಲು ಮಸೂದೆಯಂತಹ ಕಾರ‍್ಯಕ್ರಮ ಯಾರಿಂದ ನೆಲವನ್ನು ಕಸಿಯಿತೆನ್ನಲಾಗುತ್ತದೆಯೋ ಆ ಸಮುದಾಯಗಳಿಗೆ ನಿಜವಾದ ಅರ್ಥದಲ್ಲಿ ಹೊಸ ಚಲನೆಯನ್ನು ಒದಗಿಸಿದ್ದರಿಂದಲೇ ತನ್ನಂಥವರು ಇಂತಹ ಮುಂಚಲನೆಯನ್ನು ಕಾಣಲು ಸಾಧ್ಯವಾಯಿತು ಎಂದರು. ದೇವರಾಜ ಅರಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಆರಂಭವಾದ ಕಾರ‍್ಯಕ್ರಮದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ಸ್ವಾಗತಿಸಿ, ಕನ್ನಡ ಉಪನ್ಯಾಸಕಿ ಅರ್ಚನಾ ವಂದಿಸಿದರು. ಶಾಲಿನಿ ಯು.ಬಿ. ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!