Home ಸುದ್ಧಿಗಳು ಪ್ರಾದೇಶಿಕ ಹಿರಿತನದ ಅನುಭವ ನಮ್ಮೆಲ್ಲರಿಗೂ ದಾರಿ ದೀಪವಾಗಬೇಕು

ಹಿರಿತನದ ಅನುಭವ ನಮ್ಮೆಲ್ಲರಿಗೂ ದಾರಿ ದೀಪವಾಗಬೇಕು

124
0

ಮಂಗಳೂರು, ಜೂ.9: ಬಿಕರ್ನಕಟ್ಟೆಯಲ್ಲಿ ವಾಸವಾಗಿರುವ ಶತಾಯುಷಿ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀ ರಾಮಣ್ಣ ಶೆಟ್ಟಿಯವರು ನೂರನೇ ವಸಂತಕ್ಕೆ ಕಾಲಿಟ್ಟ ಸಂಭ್ರಮ ನಡೆಯಿತು. ಈ ‘ಶತ ಸಂಭ್ರಮ’ದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಬಾಲ್ಯದಲ್ಲಿ ದೂರದ ಊರುಗಳಲ್ಲಿರುವ ನಮ್ಮ ಬಂಧು ಮಿತ್ರರ ಒಂದು ಪತ್ರಕ್ಕಾಗಿ ಅಂಚೆಯಣ್ಣನ ಬರುವಿಕೆಗೆ ಕಾತರದಿಂದ ಕಾಯುತ್ತಿದ್ದೆವು. ಎಲ್ಲರ ಬದುಕಿನಲ್ಲೂ ಇಂತಹ ಅಂಚೆಯಣ್ಣಂದಿರ ಸುಮಧುರ ನೆನಪುಗಳು ಇದ್ದೇ ಇರುತ್ತವೆ. ಶ್ರೀಯುತರು ಇನ್ನೂ ಅನೇಕ ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳುವಂತಾಗಲಿ, ಆ ಮೂಲಕ ಆ ಹಿರಿತನದ ಅನುಭವ ನಮ್ಮೆಲ್ಲರಿಗೂ ದಾರಿ ದೀಪವಾಗಬೇಕು ಎಂದು ಹಾರೈಸಿದರು.

ರಾಮಣ್ಣ ಶೆಟ್ಟಿಯವರು 1924ರ ಜೂನ್ 6 ರಂದು ಜನಿಸಿ ನಗರದಲ್ಲೇ ಸಂಪೂರ್ಣ ಶಿಕ್ಷಣವನ್ನು ಮುಗಿಸಿ 23ನೇ ವಯಸ್ಸಿನಲ್ಲಿ ಕದ್ರಿ ಅಂಚೆ ಕಛೇರಿಯಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಪಯ್ಯನೂರಿನಿಂದ ಶಿರೂರು ಗಡಿಯವರೆಗೆ ಕರ್ತವ್ಯ ನಿರ್ವಹಿಸಿ ಅಂತಿಮವಾಗಿ ಕುಲಶೇಖರದ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತಿ ಹೊಂದಿದ ಇವರು ಕಲಾ ಪ್ರೇಮಿಯೂ ಆಗಿದ್ದು ಭಜನೆ, ಹಾರ್ಮೋನಿಯಂಗಳಲ್ಲಿ ಬಹು ಆಸಕ್ತಿ ಹೊಂದಿ ಹಲವು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಧರ್ಮಪತ್ನಿ ದಿ. ಪ್ರೊ.ವೇದಾವತಿ ಹಾಗೂ ಮೂರು ಮಕ್ಕಳೊಂದಿಗೆ ಬದುಕು ಸಾಗಿಸಿ ಇದೀಗ ಓರ್ವ ಮೊಮ್ಮಗ ಸಹಿತ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ರಮೇಶ್ ಕಂಡೆಟ್ಟು, ಕಾವ್ಯ ನಟರಾಜ್, ಅಜಯ್, ನವೀನ್ ಶೆಣೈ, ಯೋಗೀಶ್ ಶೆಣೈ, ನಾಗರಾಜ್, ಸ್ಥಳೀಯ ಮಂದಿರದ ಟ್ರಸ್ಟಿಗಳಾದ ಭರತ್ ಕುಮಾರ್, ವಿ ಜಯರಾಮ್, ಜಿತೇಂದ್ರ ರೈ, ಬಿಕರ್ನಕಟ್ಟೆ ಶಾಲೆಯ ಸಹನಾ ಟೀಚರ್ ಮತ್ತು ಶಿಕ್ಷಕ ವೃಂದ, ನಿವೃತ್ತ ಎ.ಎಸ್.ಐ ಕೃಷ್ಣಕುಮಾರ್, ಜಗದೀಶ್, ಮಕ್ಕಳಾದ ಡಾ.ವಿಜಯ ಸೇರಿದಂತೆ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.