ಉಡುಪಿ, ಫೆ.9: ಕೇಂದ್ರ ರೈಲ್ವೆ ಇಲಾಖೆಯ ಸಚಿವರುಗಳಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ರವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿಯಾಗಿ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಕೋಚ್ ಗಳು ಶಿಥಿಲಾವಸ್ಥೆಯಲ್ಲಿದ್ದ ವಿಚಾರ ಗಮನಕ್ಕೆ ತಂದಿದ್ದು ಹೊಸ ಕೋಚ್ ಅಳವಡಿಸುವಂತೆ ಮನವಿ ಮಾಡಿದರು. ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರುಗಳು, ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಸಂಪೂರ್ಣ ಕೋಚ್ಗಳನ್ನು ಬದಲಾಯಿಸಿ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್ಹೆಚ್ಬಿ ಕೋಚ್ ಅಳವಡಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಇದೀಗ ನೂತನ ಕೋಚ್ಗಳು ಸಿದ್ಧವಾಗಿದ್ದು ಫೆಬ್ರವರಿ 17 ರಂದು ಮೊದಲ ಪ್ರಯಾಣವನ್ನು ಬೆಳೆಸಲಿದೆ.
ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಶುಭ ಘಳಿಗೆಯಲ್ಲಿ ಅಂದಿನ ಕೇಂದ್ರ ಸಚಿವರಾದ ಸ್ಮರಣೀಯ ಜಾರ್ಜ್ ಫರ್ನಾಂಡೀಸ್ ರವರ ವಿಶೇಷ ಪರಿಶ್ರಮದಿಂದ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರ ಕಾಳಜಿಯ ಮೇರೆಗೆ ಮೇ 01-1998ರ ಸಂದರ್ಭದಲ್ಲಿ ಈ ರೈಲು ಉದ್ಘಾಟನೆ ಗೊಂಡಿತು. ಅಲ್ಲಿಂದ ಇಂದಿನವರೆಗೂ ಸುಧೀರ್ಘ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿ ಜನರನ್ನು ಭಾವನಾತ್ಮಕವಾಗಿ ಈ ರೈಲು ಬೆಸೆದಿದೆ. ಈಗ ಆಧುನಿಕ ಭಾರತದ ದ್ಯೋತಕವಾಗಿ ಈ ರೈಲು ಹೊಸ ತಂತ್ರಜ್ಞಾನದ ಮೂಲಕ ಕಂಗೊಳಿಸಲಿದ್ದು ಪ್ರಯಾಣಿಕರಿಗೆ ವಿಶೇಷ ಸೇವೆಯನ್ನು ನೀಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಆಧುನಿಕ ತಂತ್ರಜ್ಞಾನದ ಕೋಚ್ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಜನರು ಸುರಕ್ಷಿತವಾಗಿರುತ್ತಾರೆ. ಯಾವುದೇ ಅಪಘಾತ ಸಂಭವಿಸಿದರೂ ಕೋಚ್ಗಳು ಪಲ್ಟಿ ಆಗದೆ ಜಿಗ್ ಜಾಗ್ ರೀತಿಯಲ್ಲಿ ವರ್ಗೀಕರಿಸಿ ನಿಂತುಬಿಡುತ್ತದೆ. ಈ ಹೊಸ ಕೋಚ್ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಾಲಯ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ. ಫೆಬ್ರವರಿ 17ರಂದು ಈ ಹೊಸ ಕೋಚ್ಗಳುಳ್ಳ ರೈಲಿನ ಪ್ರಥಮ ಪ್ರಯಾಣ ನಡೆಸಲಿದೆ.
ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿನ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳುವ ಮಂಗಳೂರು ಎಕ್ಸ್ಪ್ರೆಸ್ ರೈಲು ಮಾರ್ಚ್ 1 ರಿಂದ ನೂತನ ಎಲ್ಹೆಚ್ಬಿ ಕೋಚ್ಗಳನ್ನೊಳಗೊಂಡು ಪ್ರಯಾಣ ಬೆಳೆಸಲಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ವೇಗ ಕೊಟ್ಟು ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಹಾಗೂ ವಿಶೇಷವಾಗಿ ನನ್ನೆಲ್ಲಾ ರೈಲ್ವೆ ಮನವಿಗಳಿಗೆ ಬೆಂಬಲ ನೀಡಿ ಸಹಕರಿಸುವ ಸಚಿವರಾದ ವಿ.ಸೋಮಣ್ಣರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದರ ಜೊತೆಗೆ ಕಾಲಕಾಲಕ್ಕೆ ರೈಲ್ವೆ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಅಮೂಲ್ಯ ಸಲಹೆಗಳನ್ನು ನೀಡುತ್ತಿರುವ ರೈಲ್ವೆ ಬಳಕೆದಾರರ ಸಮಿತಿಯ ಪ್ರಮುಖರಿಗೂ ವಿಶೇಷ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.