Friday, September 20, 2024
Friday, September 20, 2024

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಗೆ ಬ್ರಿಟನ್‌ನ ಆಶ್ಡೆನ್ ಪ್ರಶಸ್ತಿ

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಗೆ ಬ್ರಿಟನ್‌ನ ಆಶ್ಡೆನ್ ಪ್ರಶಸ್ತಿ

Date:

ಮಣಿಪಾಲ: ಸುಸ್ಥಿರ ಶಕ್ತಿಯ ಕೌಶಲ ವೃದ್ಧಿಯ ಸಾಧನೆಗಾಗಿ ದೊರೆಯುವ ಜಾಗತಿಕ ಮಟ್ಟದ ಆಶ್ಡೆನ್ ಪ್ರಶಸ್ತಿಗೆ ಈ ಬಾರಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಆಯ್ಕೆಯಾಗಿದೆ. ನವೆಂಬರ್ ೪ರಂದು ರಾತ್ರಿ ಲಂಡನ್ ನ ಗ್ಲಾಸ್ಗೋದಲ್ಲಿ ನಡೆದ ಸಿ.ಓ.ಪಿ 26 ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಪ್ರಶಸ್ತಿಯ ಮೊತ್ತವು 20 ಸಾವಿರ ಪೌಂಡ್ ಗಳನ್ನು ಒಳಗೊಂಡಿದೆ. ಜೊತೆಗೆ ಜಗತ್ತಿನ ವಿವಿಧೆಡೆ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳ ಜೊತೆಗೆ ಮಾಹಿತಿ ವಿನಿಮಯ ಮಾಡುವ ಅವಕಾಶ, ಸಹಭಾಗಿತ್ವದ ಅವಕಾಶಗಳು ಬಿವಿಟಿಗೆ ಲಭ್ಯವಾಗಲಿವೆ. ಗ್ಲಾಸ್ಗೋದಲ್ಲಿ ನಡೆದ ಸಮಾರಂಭದಲ್ಲಿ ಬಿವಿಟಿಯ ಮಾಸ್ಟರ್ ಟ್ರೆನರ್ ಆಗಿರುವ ಸುಧೀರ್ ಕುಲಕರ್ಣಿ ಅವರು ಸುದೀಪ್ತ ಘೋಷ್ ಅವರ ಜೊತೆಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.

ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆ ಮಾಡುವ ಪರಿಹಾರಗಳಿಗೆ ಸಂಬಂಧಿಸಿ ಕಳೆದ ೨೦ ವರ್ಷಗಳಿಂದ ಕೆಲಸ ಮಾಡುತ್ತಿರುವ ಆಶ್ಡೆನ್ ಸಂಸ್ಥೆಯು, ಇದೇ ಮಾದರಿಯ ಕೆಲಸಗಳನ್ನು ಮಾಡುತ್ತಿರುವ ಜಗತ್ತಿನ ವಿವಿಧೆಡೆಯ ಸಂಸ್ಥೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡುತ್ತಿದೆ.

ಈ ಬಾರಿಯ ಪ್ರಶಸ್ತಿಗಾಗಿ ವಿವಿಧ ದೇಶಗಳ 800ಕ್ಕೂ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಭಾರತದ ಎರಡು ಸಂಸ್ಥೆಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಗಾಗಿ ಕರ್ನಾಟಕದ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಆಯ್ಕೆಯಾಗಿದೆ.

ಜಗತ್ತಿನಾದ್ಯಂತ ಪರಿಸರ ಸ್ನೇಹಿ ಉಪಕ್ರಮಗಳಿಗೆ ಸಂಬಂಧಿಸಿದಂತೆ ಅನೇಕ ಉತ್ತಮ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಆದ್ದರಿಂದ ಪ್ರಶಸ್ತಿಗೆ ಉತ್ತಮವಾದ ಅನೇಕ ಪರಿಹಾರಗಳನ್ನು ಕೇಂದ್ರೀಕರಿಸಿದ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಶ್ಡೆನ್ ಸಂಸ್ಥೆಯು ಪರಿಸರ ಸ್ನೇಹಿ ಉಪಕ್ರಮವನ್ನು ಸಮಗ್ರವಾದ ದೃಷ್ಟಿಕೋನದಲ್ಲಿ ನೋಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿವಿಟಿಯ ಕಾರ್ಯಕ್ಷೇತ್ರವು ಹವಾಮಾನ ಬದಲಾವಣೆಯ ತೀವ್ರತೆಯನ್ನು ತಗ್ಗಿಸುವುದಷ್ಟೇ ಅಲ್ಲದೆ ಅದು ಕೈಗೆತ್ತಿಕೊಂಡ ಉಪಕ್ರಮಗಳು ಉದ್ಯೋಗ ಸೃಷ್ಟಿ ಮಾಡುತ್ತವೆ. ಪರಿಸರ ಸ್ನೇಹಿ ಕೌಶಲಗಳನ್ನು ಕರಗತ ಮಾಡಿಕೊಳ್ಳುವ ನಿಟ್ಟಿನಲ್ಲಿ ಜನರಿಗೆ ತರಬೇತಿಗಳನ್ನು ನೀಡಿ ಅವರಿಗೆ ಶಿಕ್ಷಣವನ್ನೂ ಒದಗಿಸುತ್ತವೆ. ಈ ನಿಟ್ಟಿನಲ್ಲಿ ಬಿವಿಟಿಯ ಕಾರ್ಯವೈಖರಿಗೆ ವಿಶೇಷ ಮನ್ನಣೆ ಲಭಿಸಿದೆ.

ಪಾರದರ್ಶಕವಾಗಿ ಹಲವು ಸುತ್ತುಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಶ್ಡೆನ್ ಸಂಸ್ಥೆಯ ಅಧಿಕಾರಿಗಳ ತಂಡ ಸ್ವತಃ ಭೇಟಿ ನೀಡಿ, ಬಿವಿಟಿಯ ಕಾರ್ಯವೈಖರಿಯನ್ನು ವೀಕ್ಷಿಸಿ ಮೌಲ್ಯಮಾಪನ ಮಾಡಿದೆ. ‘ಕಳೆದ ಎರಡು ದಶಕಗಳಲ್ಲಿ, ಸಂಸ್ಥೆಯ ವಿವಿಧ ಪಾಲುದಾರರ ಪೈಕಿ 1000ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಬಿವಿಟಿ ಸೌರಶಕ್ತಿ ಕೌಶಲಗಳ ಕುರಿತು ತರಬೇತಿ ನೀಡಿದ್ದು, ಯುವಕರಿಗೆ ಉದ್ಯೋಗ ಒದಗಿಸುವ ಮತ್ತು ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿದೆ.

ನೇರವಾಗಿ ಪಾಲುದಾರರಿಗೆ ತರಬೇತಿ ನೀಡಿದ್ದಲ್ಲದೆ, ಬಳಕೆದಾರರಿಗೆ ಕೂಡ ತರಬೇತಿ ನೀಡುವ ಈ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವ ಉದ್ದೇಶ ಬಿವಿಟಿಗೆ ಇದೆ. ಪ್ರಶಸ್ತಿಯಿಂದ ಬಿವಿಟಿಯ ಕೆಲಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತಂತಾಗಿದೆ’ ಎಂದು ಬಿವಿಟಿಯ ವ್ಯವಸ್ಥಾಪಕ ಟ್ರಸ್ಟಿ, ಟಿ. ಅಶೋಕ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ವಿಕಾಸ ಟ್ರಸ್ಟ್: ಭಾರತೀಯ ವಿಕಾಸ್ ಟ್ರಸ್ಟ್ ಒಂದು ಸ್ವಯಂ ಸೇವಾ ಸಂಸ್ಥೆ. ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕ ಸ್ವ ಉದ್ಯೋಗಕ್ಕೆ ನೆರವಾಗುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಸಂಸ್ಥೆಯು ತಕ್ಷಣದ ಲಾಭಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕೆಲಸ ಮಾಡುತ್ತಿದೆ.

ಸೌರಶಕ್ತಿ ಅಳವಡಿಕೆಯಿಂದ ವ್ಯಕ್ತಿಯೊಬ್ಬರ ಜೀವನದಲ್ಲಿ ಉಂಟಾಗುವ ಬದಲಾವಣೆಗಳೇನು ಎಂಬುದನ್ನು ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಮನದಟ್ಟು ಮಾಡಿಕೊಟ್ಟರೆ, ಅವರು ಅರ್ಹರಿಗೆ ಹಣಕಾಸು ನೆರವು ಒದಗಿಸಲು ಮುಂದಾಗಬಹುದು. ಈ ಪರಿವರ್ತನೆಯ ಲಾಭವು ನೇರವಾಗಿ ಗೋಚರಿಸದೇ ಇರಬಹುದು.

ಆದರೆ ವ್ಯಕ್ತಿಯ ಜೀವನದಲ್ಲಿ ಆಗುವ ಮಾರ್ಪಾಟುಗಳು ಆತನ ಒಟ್ಟು ಆದಾಯವನ್ನು ಹೆಚ್ಚಿಸಬಲ್ಲವು. ಪರೋಕ್ಷವಾಗಿ ಒಂದು ಊರಿನ ಅಭಿವೃದ್ಧಿಗೆ ಕಾರಣವಾಗಬಹುದು. ಬಿವಿಟಿಯು ಈ ನಿಟ್ಟಿನಲ್ಲಿ ಲಭ್ಯವಿರುವ ಅವಕಾಶಗಳನ್ನು ಹುಡುಕಿ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುತ್ತದೆ.

ಈ ಪರಿಕಲ್ಪನೆಯನ್ನು ಮೂಲದಲ್ಲಿ ರೂಪಿಸಿದವರು ಆಧುನಿಕ ಮಣಿಪಾಲದ ನಿರ್ಮಾತೃಗಳಲ್ಲಿ ಒಬ್ಬರಾದ ದಿವಂಗತ ಟಿ.ಎ. ಪೈಯವರು. ಅವರೇ ಬಿವಿಟಿಯ ಸ್ಥಾಪಕರು ಕೂಡ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಕೆಲಸಗಳನ್ನು ಕೈಗೆತ್ತಿಕೊಂಡಿತು. ಅವರ ಬಳಿಕ ಸಂಸ್ಥೆಯ ನೇತೃತ್ವ ವಹಿಸಿಕೊಂಡವರು ಅವರ ಪತ್ನಿ ವಸಂತಿ ಪೈ.

ಅವರು ದೆಹಲಿಯಲ್ಲಿ ತಮಗಿದ್ದ ಸಂಪರ್ಕಗಳನ್ನು ಬಳಸಿಕೊಂಡು ಮಹಿಳೆಯರನ್ನು ಕೇಂದ್ರೀಕರಿಸಿ, ಸಂಸ್ಥೆಯ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಲು ನೆರವಾದರು. ನಂತರ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಕೃಷಿ ತಜ್ಞ ಅಧಿಕಾರಿ ಕೆ.ಎಂ. ಉಡುಪ ಅವರು ಸಂಸ್ಥೆಯ ಸೂತ್ರಧಾರತ್ವ ವಹಿಸಿದರು.

ಅವರು ಹರೀಶ್ ಹಂಡೆಯವರ ಪ್ರೇರಣೆಯಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದತ್ತ ಗಮನ ಹರಿಸಿದರು. ಸುಸ್ಥಿರ ಇಂಧನ ಆಧಾರಿತ ಗ್ರಾಮೀಣ ಅಭಿವೃದ್ಧಿಗೆ ತಕ್ಕುದಾದ ಕೌಶಲಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಂಡರು.

ಸಂಸ್ಥೆಯು ಈಗ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವ ಅಶೋಕ್ ಪೈ ಅವರ ನೇತೃತ್ವದಲ್ಲಿ ಪ್ರಮುಖವಾಗಿ 4 ಮಹತ್ವದ ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ. ಅವುಗಳೆಂದರೆ –  ಮಹಿಳಾ ಸಬಲೀಕರಣ, ನವೀಕರಿಸಬಹುದಾದ ಇಂಧನ-ಹಣಕಾಸು ಸಂಸ್ಥೆಗಳು, ಯಶಸ್ವೀ ಗ್ರಾಮೀಣ ಆಡಳಿತ ನಿರ್ವಹಣೆ ಮತ್ತು ಸುಸ್ಥಿರ ಕೃಷಿ ಕ್ಷೇತ್ರ.

ಈಗ ಈ ನಾಲ್ಕೂ ಕ್ಷೇತ್ರಗಳಲ್ಲಿ ವಿವಿಧ ಅರ್ಹ ವ್ಯಕ್ತಿಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಜೀವನೋಪಾಯಗಳಿಗೆ ನೀಡಿದ ತರಬೇತಿಯಿಂದಾಗಿ ಬದುಕು ಕಟ್ಟಿಕೊಂಡು ಇಂದು ಅನೇಕ ಮಂದಿ ಸ್ವಾವಲಂಬಿ ಹಾಗೂ ಮಾದರಿ ಸಾಧಕ –  ಸಾಧಕಿಯರಾಗಿದ್ದಾರೆ.

1996 ರಲ್ಲಿ ಬಿವಿಟಿ ವಿಶ್ವಾಸಾರ್ಹ ಹಾಗೂ ಕೈಗೆಟುಕಬಹುದಾದ ಇಂಧನ ಪರಿಹಾರಗಳ ಅಗತ್ಯವನ್ನು ಮನಗಂಡಿದ್ದು, ಬಡತನ ನಿವಾರಿಸಲು ಇದೊಂದು ಪ್ರಮುಖ ಮಾಧ್ಯಮ ಎಂಬುದನ್ನೂ ಗುರುತಿಸಿದೆ. ಸೌರ ಶಕ್ತಿಯ ಕೌಶಲಾಭಿವೃದ್ಧಿಯ ಕುರಿತಾಗಿ 2001ರಿಂದ ಯುವಜನತೆಗೆ ಸುಮಾರು 1000 ಕ್ಕೂ ಮಿಕ್ಕಿ ತರಬೇತಿಗಳನ್ನು ನೀಡಿದೆ. ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಜನ ಅಂತಿಮ ಬಳಕೆದಾರರು ನೇರವಾಗಿ ಭಾಗವಹಿಸಿದ್ದಾರೆ.

ಜೊತೆಗೆ, 680 ಕ್ಕೂ ಹೆಚ್ಚು ವಿವಿಧ ರೀತಿಯ ಹಣಕಾಸು ಸಂಸ್ಥೆಗಳಿಂದ 14,000 ಹಣಕಾಸುದಾರರನ್ನು ಕೇಂದ್ರವಾಗಿಟ್ಟುಕೊಂಡು 500 ಕ್ಕೂ ಹೆಚ್ಚು ಬ್ಯಾಂಕ್ ಅಧಿಕಾರಿಗಳಿಗೆ ತರಬೇತಿಗಳನ್ನು ನೀಡಿದೆ. ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಇಂಧನ ಆಧಾರಿತ ಗ್ರಾಮೀಣ ಅಭಿವೃದ್ಧಿಗೆ ತಕ್ಕುದಾದ ಕೌಶಲಗಳನ್ನು ಬೆಳೆಸುವಲ್ಲಿ ಬಿವಿಟಿ ಮಹತ್ತರ ಪಾತ್ರ ವಹಿಸಿದೆ. ಆ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಇದೊಂದು ಗಮನಾರ್ಹ ಅವಕಾಶವನ್ನು ಸೃಷ್ಟಿಸಿದೆ.

ಆಶ್ಡೆನ್ ಸಂಸ್ಥೆ: ಆಶ್ಡೆನ್, ಲಂಡನ್ ಮೂಲದ ದಾನಿ ಸಂಸ್ಥೆಯಾಗಿದ್ದು, ಇದು ಸುಸ್ಥಿರ ಶಕ್ತಿ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸಮಾಡುತ್ತಿದೆ. ಸುಸ್ಥಿರ ಶಕ್ತಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅದರ ಪ್ರಚಾರದ ಸಲುವಾಗಿ ಮಾಡುವ ಯೋಜನಾತ್ಮಕ ಪ್ರೋತ್ಸಾಹ. ಪ್ರಶಸ್ತಿ ವಿಜೇತರಿಗೆ ಇನ್ನಷ್ಟು ವಿಸ್ತಾರವಾಗಿ ಕೆಲಸ ಮಾಡಲು ಮಾರ್ಗದರ್ಶನ ಮಾಡುವುದು, ಪ್ರಾಯೋಗಿಕ ಬೆಂಬಲ ನೀಡುವುದು ಈ ಸಂಸ್ಥೆಯ ಪ್ರಮುಖ ಕಾರ್ಯಚಟುವಟಿಕೆಗಳು.

ಹವಾಮಾನ ಬದಲಾವಣೆಗೆ ಸೂಕ್ತ ಪರಿಹಾರಗಳನ್ನು ಕಂಡುಹಿಡಿದು ಈ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡಿ ಸೈ ಅನ್ನಿಸಿಕೊಂಡ ಜಗತ್ತಿನ ಉದ್ಯಮ, ವ್ಯವಹಾರಗಳು, ಲಾಭರಹಿತ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳನ್ನು ಗುರುತಿಸುತ್ತದೆ. ಹವಾಮಾನ ಬದಲಾವಣೆ ಮತ್ತು ಶಕ್ತಿಯ ಕ್ಷೇತ್ರದಲ್ಲಿ ಹೊಸ ಶೋಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!