Saturday, September 21, 2024
Saturday, September 21, 2024

ಬ್ರಹ್ಮ ಮುಹೂರ್ತ

ಬ್ರಹ್ಮ ಮುಹೂರ್ತ

Date:

ನಾತನ ಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯಬೇಕಾದರೂ ಒಳ್ಳೆಯ ದಿನ ಮತ್ತು ಶುಭ ಮುಹೂರ್ತ ನೋಡಿ ಮಾಡುವುದು ವಾಡಿಕೆ. ಈ ಸಮಯದಲ್ಲಿ ಕೆಲಸಗಳನ್ನು ಮಾಡುವುದರಿಂದ ಬಹಳ ಉತ್ತಮ ಹಾಗೂ ಎಲ್ಲವೂ ಶುಭವಾಗುತ್ತದೆ ಎಂದು ನಂಬಿಕೆಯಿದೆ. ಅದಕ್ಕಾಗಿಯೇ ಇರುವುದು ಈ ಬ್ರಹ್ಮ ಮುಹೂರ್ತ.

ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಎಂದು ಕರೆಯುವ ಈ ಸಮಯಕ್ಕೆ ಆಯುರ್ವೇದ ಶಾಸ್ತ್ರದಲ್ಲೂ ಬಹಳ ಪ್ರಾಶಸ್ತ್ಯವಾದ ಸ್ಥಾನವಿದೆ. ಮಾನವನು ತನ್ನ ಜೀವಿತಾವಧಿಯಲ್ಲಿ ಆರೋಗ್ಯಕರ ಮತ್ತು ದೀರ್ಘಕಾಲದ ಜೀವನವನ್ನು ಹೇಗೆ ಪಡೆಯಬಹುದು ಎಂಬುದನ್ನು ತಿಳಿಸುವ ಪ್ರಾಚೀನ ವಿಜ್ಞಾನ ಆಯುರ್ವೇದ. ಪೂರ್ವಜರು ತಮ್ಮ ಕಾಲದಲ್ಲಿ ಬೇಗ ಎದ್ದು ಉತ್ತಮ ದಿನಚರಿಯನ್ನು ಪಾಲಿಸುತ್ತಿದ್ದರು. ಆದ್ದರಿಂದ ಅವರು ಸರಿಸುಮಾರು 80 ರಿಂದ 100 ವರ್ಷ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಬದುಕಿರುವುದಕ್ಕೆ ಸಾಕ್ಷ್ಯಗಳಿವೆ. ಆದರೆ ಪ್ರಸ್ತುತ ಜೀವನದಲ್ಲಿ ವೈಜ್ಞಾನಿಕ ತಂತ್ರಜ್ಞಾನ ಮುಂದುವರಿದು ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಪಡೆದಿದ್ದರೂ ಸಹ ಜನರು 60 ವರ್ಷವೂ ಬದುಕುತ್ತಿಲ್ಲ. ಒಂದು ದೃಷ್ಟಿಯಿಂದ ನೋಡುವುದಾದರೆ ಇದಕ್ಕೆ ಆಧುನಿಕ ಜೀವನ ಶೈಲಿಯೇ ಕಾರಣ ಎಂದರೆ ತಪ್ಪಾಗಲಾರದು.

ನಮ್ಮ ಪೂರ್ವಜರು ಸುದೀರ್ಘ ಜೀವನವನ್ನು ಹೇಗೆ ಪಡೆಯುತ್ತಿದ್ದರು ಎಂದು ತಿಳಿಯಲು ಅವರ ದಿನಚರಿಯನ್ನು ಗಮನಿಸಿದಾಗ ಬ್ರಹ್ಮ ಮುಹೂರ್ತ ಎಂಬುದು‌ ಸ್ಪಷ್ಟವಾಗುತ್ತದೆ. ಈ ಮುಹೂರ್ತ ರಾತ್ರಿಯ ಅಂತಿಮ ಸಮಯ ಮತ್ತು ಸೂರ್ಯೋದಯದ ಒಂದೂವರೆ ಗಂಟೆ ಮೊದಲ ಸಮಯವಾಗಿದೆ ಅಂದರೆ ನಿಖರವಾಗಿ ಸೂರ್ಯೋದಯಕ್ಕೂ ಮೊದಲ 1 ಗಂಟೆ 36 ನಿಮಿಷದ ಸಮಯವಾಗಿದೆ ಮತ್ತು ಇದನ್ನು “ಸೃಷ್ಟಿಕರ್ತ (ಬ್ರಹ್ಮ)ನ ಸಮಯ” ಎಂದೂ ಸಹ ಹೇಳಲಾಗುತ್ತದೆ. ಇದಾದ ಬಳಿಕ ಸೂರ್ಯದೇವನು ಬಂಗಾರದ ಬಣ್ಣದಿಂದ ಕಂಗೊಳಿಸುತ್ತಾನೆ.

ಹಿಂದಿನ ಕಾಲದಲ್ಲಿ ಸಮಯವನ್ನು ವಿವಿಧ ರೀತಿಯಲ್ಲಿ ವಿಂಗಡಿಸಿದ್ದು ಅದರಲ್ಲಿ ಮುಹೂರ್ತ‌ ಮತ್ತು ಗಡಿಯ ಎಂಬುದು ಪ್ರಮುಖವಾಗಿರುತ್ತದೆ. ಒಂದು ಗಡಿಯ ಎಂದರೆ 24 ನಿಮಿಷ ಎಂದರ್ಥ. ಇಡೀ ರಾತ್ರಿಯು 15 ಮುಹೂರ್ತಗಳನ್ನು ಒಳಗೊಂಡಿದ್ದು ಅದರಲ್ಲಿ ಬ್ರಹ್ಮ ಮುಹೂರ್ತವು ರಾತ್ರಿಯ 14 ನೆಯ ಮುಹೂರ್ತವಾಗಿದೆ. ಒಂದು ಮುಹೂರ್ತ ಎಂದರೆ 2 ಗಡಿಯ ಅಂದರೆ ಸುಮಾರು 48 ನಿಮಿಷ. ಪ್ರತಿ ಮುಹೂರ್ತವು 48 ನಿಮಿಷಗಳವರೆಗೆ ಇರುತ್ತದೆ. ದಿನವೂ ಸೂರ್ಯೋದಯದ ಸಮಯ ಬದಲಾಗುವುದರಿಂದ ಬ್ರಹ್ಮ ಮುಹೂರ್ತದ ಸಮಯವೂ ಬದಲಾಗುತ್ತದೆ.

ವಾಲ್ಮೀಕಿ ರಾಮಾಯಣದಲ್ಲಿ ರಾವಣದಿಂದ ಅಪಹರಣಕ್ಕೆ ಒಳಗಾದ ಸೀತೆಯನ್ನು ಹುಡುಕಿ ಹೊರಟ ಆಂಜನೇಯನು ಬ್ರಹ್ಮ ಮುಹೂರ್ತದಂದೇ ಅಶೋಕವನವನ್ನು ತಲುಪಿದಾಗ ಅಲ್ಲಿ ವೇದ-ಮಂತ್ರಗಳ ಉಚ್ಚಾರವನ್ನು ಕೇಳಿದ ಮತ್ತು ಯಜ್ಞಗಳನ್ನು ನೋಡಿದ್ದ ಎಂಬ ಉಲ್ಲೇಖವಿದೆ.

ನಮ್ಮ ದೇಹವು ವಾತ (ಗಾಳಿ ಮತ್ತು ಆಕಾಶ), ಪಿತ್ತ (ಬೆಂಕಿ ಮತ್ತು ನೀರು), ಕಫ (ನೀರು ಮತ್ತು ಭೂಮಿ) ದಿಂದ ಆಧಾರಿತವಾಗಿದೆ ಎಂದು ಆಯುರ್ವೇದ ಶಾಸ್ತ್ರವು ಹೇಳುತ್ತದೆ. ಸೂರ್ಯೋದಯ ದಿಂದ 10 ಗಂಟೆಯವರೆಗೆ ಕಫದ ಸಮಯ. 10 ರಿಂದ ಅಪರಾಹ್ನ 2 ರವರೆಗೆ ಪಿತ್ತ ಸಮಯ ಮತ್ತು ಅಪರಾಹ್ನ 2 ರಿಂದ ಸೂರ್ಯಸ್ತದವರೆಗಿನ ಸಮಯವನ್ನು ವಾತ ಸಮಯ ಎಂದು ಕರೆಯಲಾಗುತ್ತದೆ.

ಬ್ರಹ್ಮ ಮುಹೂರ್ತ ಸಮಯದಲ್ಲಿ ಮಾನವನ ವಾತ ದೋಷವು ಅತೀ ಹೆಚ್ಚಾಗಿರುತ್ತದೆ. ಆಕಾಶ ಮತ್ತು ಗಾಳಿ ಹೆಚ್ಚು ವಿಸ್ತಾರವಾಗಿರುವುದರಿಂದ ಬ್ರಹ್ಮ ಮುಹೂರ್ತದ ಸಮಯದಲ್ಲಿ ಮಾನವನ ಬುದ್ಧಿ ಶಕ್ತಿಯು ಆಕಾಶದಷ್ಟೇ ವಿಶಾಲವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಧ್ಯಾನ, ಓದು ಹಾಗೂ ಇತರ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಮೆದುಳಿಗೆ ಅದನ್ನು ಗ್ರಹಿಸುವ ಶಕ್ತಿ ಹೆಚ್ಚಾಗಿರುತ್ತದೆ. ಆಯುರ್ವೇದದಲ್ಲಿ ಆಚಾರ್ಯ ವಾಗಭಟರು “ಬ್ರಹ್ಮ ಮುಹೂರ್ತೆ ಉತ್ತಿಷ್ಟೆ ಸ್ವಸ್ತ ರಕ್ಷಾರ್ಥಂಯುಷ್ಯಮ್” ಎಂದು ಹೇಳಿದ್ದಾರೆ. ಅಂದರೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದರಿಂದ ಅರೋಗ್ಯಕರ ಜೀವನ ಲಭಿಸುತ್ತದೆ ಎಂದು.

ಈ ಮುಹೂರ್ತದ ಸಂದರ್ಭದಲ್ಲಿ ಪರಿಸರವು ಶುದ್ಧವಾಗಿರುವುದರಿಂದ ಶುದ್ಧ ಆಮ್ಲಜನಕದ ಶೇಖಡವಾರು ಪ್ರಮಾಣವು ಹೆಚ್ಚಾಗಿರುತ್ತದೆ. ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಮಯದಲ್ಲಿ ವಾತಾವರಣವು ಶಾಂತಿಯಿಂದ ಕೂಡಿರುವುದರಿಂದ ದೇವರುಗಳು ಹಾಗೂ ಪೂರ್ವಜರು ನಮ್ಮ ಮನೆಗಳಿಗೆ ಬರುತ್ತಾರೆ ಎಂಬ ನಂಬಿಕೆ ಇರುವುದರಿಂದ ದೇವಸ್ಥಾನದ ಮುಖ್ಯದ್ವಾರಗಳನ್ನು, ದೇವರಿಗೆ ಶೃಂಗಾರ ಮತ್ತು ಪೂಜೆ-ಪ್ರಾರ್ಥನೆಯನ್ನು ಈ ಮುಹೂರ್ತದಲ್ಲಿ ಮಾಡಲಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ನಾವು ಯಾವ ವಿಚಾರವನ್ನು ಬ್ರಹ್ಮಾಂಡಕ್ಕೆ ಕೊಡುತ್ತೇವೆಯೋ ಅದೇ ತರಹ ಪ್ರತ್ಯುತ್ತರ ಬ್ರಹ್ಮಾಂಡವು ಕೊಡುತ್ತದೆ. ಒಂದು ವೇಳೆ ಈ ಸಮಯದಲ್ಲಿ ದೇವರ ಪ್ರಾರ್ಥನೆ, ಜಪ, ಧ್ಯಾನವನ್ನು ಮಾಡುವುದರಿಂದ ಜೀವನದಲ್ಲಿ ಯಶಸ್ವಿಯಾಗುತ್ತೇವೆ ಎಂಬ ನಂಬಿಕೆಯಿದೆ. ಮದುವೆ, ಗೃಹಪ್ರವೇಶ ಸೇರಿದಂತೆ ಮುಂತಾದ ಶುಭ ಸಮಾರಂಭಗಳಿಗೆ ಬ್ರಹ್ಮ ಮುಹೂರ್ತವು ಸೂಕ್ತ ಸಮಯ ಎಂದು ಹೇಳಲಾಗುತ್ತದೆ.

ವಿಜ್ಞಾನದ ಪ್ರಕಾರ ನೋಡುವುದಾದರೆ, ಮಾನವನ ದೇಹ ಮತ್ತು ಮನಸ್ಸು ಶಕ್ತಿಯಿಂದ ಆವೃತವಾಗಿರುತ್ತದೆ. ಇದನ್ನು “ಕಾಸ್ಮಿಕ್ ಎನರ್ಜಿ’ ಎಂದು ಕರೆಯುತ್ತಾರೆ. ಈ ಶಕ್ತಿಯನ್ನು ಸಮತೋಲನದಲ್ಲಿ ಇಡಲು ಬ್ರಹ್ಮ ಮುಹೂರ್ತದಲ್ಲಿ ಬೇಗನೇ ಎದ್ದು ತಣ್ಣೀರು ಸ್ನಾನ ಮಾಡಿ ಧ್ಯಾನ, ಜಪ, ಪ್ರಾಣಾಯಾಮ, ಯೋಗಾಸನ, ಸ್ತೋತ್ರ ಪಠಣೆ ಮತ್ತು ಎಲ್ಲಾ ತರಹದ ವಿದ್ಯಾಭ್ಯಾಸವನ್ನು ಮಾಡುವುದು ಒಳ್ಳೆಯದು. ಇದು ನೇರವಾಗಿ ನಮ್ಮ ಮನಸ್ಸನ್ನು ತಲುಪಿ ದೀರ್ಘಕಾಲದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಮುಕ್ತಿಯನ್ನು ನೀಡುವ ಸಕಾರಾತ್ಮಕ ಶಕ್ತಿಯನ್ನು ಪಡೆದಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಈ ರೀತಿಯಾಗಿ ನಮ್ಮ ಭವಿಷ್ಯವನ್ನು ನಿರಳವನ್ನಾಗಿಸಿ, ದೈನಂದಿನ ಜೀವನದ ಜಂಜಡಗಳ ಹೊರೆ ಇಂತಹ ಯಾವುದೇ ಏರಿಳಿತಗಳು ಮಾನಸಿಕ ಮತ್ತು ದೈಹಿಕವಾಗಿ ಒತ್ತಡವನ್ನು ತಂದೊಡ್ಡದಂತೆ, ಶುದ್ಧ ರೂಪದಲ್ಲಿ ನಾವೇ ಸ್ವತಃ ಉತ್ತಮ ಫಲವನ್ನು ಕಂಡುಕೊಳ್ಳಲು ಬ್ರಹ್ಮ ಮುಹೂರ್ತ ಸಹಾಯಕ.

ಸುಶ್ಮಿತಾ ಎಸ್ ಆಚಾರ್ಯ, ಬೆಳಪು

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!