Sunday, September 8, 2024
Sunday, September 8, 2024

ಪ್ರಕೃತಿ ರಕ್ಷತಿ ರಕ್ಷಿತಃ

ಪ್ರಕೃತಿ ರಕ್ಷತಿ ರಕ್ಷಿತಃ

Date:

ಗ್ರಹದಲ್ಲಿ ದೇವರ ಅತ್ಯುತ್ತಮ, ಅಮೂಲ್ಯ ಮತ್ತು ಉದಾತ್ತ ಕೊಡುಗೆಯೆಂದರೆ ಪ್ರಕೃತಿ. ನೆಲ, ಜಲ, ವಾಯು, ಅಗ್ನಿ, ಆಕಾಶ ಈ ಪಂಚಭೂತಗಳನ್ನು ಒಳಗೊಂಡ ಈ ವ್ಯವಸ್ಥೆಯೇ ಪ್ರಕೃತಿ. ಇದು ಮಾನವಕುಲಕ್ಕೆ ಆಸರೆ, ಆಶೀರ್ವಾದ ಎರಡೂ ಆಗಿದೆ.

ಪ್ರಕೃತಿ ಮಡಿಲಲ್ಲಿ ಜೀವ ಮತ್ತು ನಿರ್ಜೀವ ವಸ್ತುಗಳೆರಡೂ ಇದ್ದು, ಮನೆಯಿಂದ ಹೊರಗೆ ಕಾಲಿಟ್ಟ ಕ್ಷಣದಿಂದ ನಮ್ಮ ಸುತ್ತಮುತ್ತ ಕಾಣುವ ಭೂದೃಶ್ಯಗಳು ಅದು ಪ್ರಕೃತಿಯ ಭಾಗ. ಇಂತಹ ಅದ್ಭುತ ಶಕ್ತಿಯಿಂದ ಸ್ಫೂರ್ತಿಗೊಂಡವರು ಕವಿಗಳು, ಬರಹಗಾರರು, ಕಲಾವಿದರು, ವಿಜ್ಞಾನಿಗಳಾದರು. ಹಾಗಾಗಿಯೇ ಈ ಪ್ರಕೃತಿಯನ್ನು ನಮ್ಮ ಪೂರ್ವಜರು “ತಾಯಿ” ಎಂದೂ ಪೂಜಿಸಿ, ಆರಾಧಿಸಿ ಮತ್ತು ಸಂರಕ್ಷಿಸಿಕೊಂಡು ಬಂದಿರುವುದು. ಇದಕ್ಕೆ ತಾನೆ ಹೇಳಿರುವುದು ಪ್ರಕೃತಿಯು ಮಾನವನ ಅತ್ಯುತ್ತಮ ಗೆಳೆಯ/ತಿ ಮತ್ತು ಔಷಧಿ ಎಂದು.

ಸಾಟಿಯಿಲ್ಲದ ಮೌಲ್ಯವನ್ನು ಹೊಂದಿರುವ ಪ್ರಕೃತಿಯು ಇಡೀ ಮನುಕುಲವನ್ನು ರಕ್ಷಿಸುವ ಜೊತೆಗೆ ನಾಶಮಾಡುವಷ್ಟು ಶಕ್ತಿಯುತವಾಗಿದೆ. ಕಳೆದ ನೂರು ವರ್ಷಗಳಿಂದ ಅಥವಾ ಅದಕ್ಕಿಂತ ಹೆಚ್ಚಿನ ಕಾಲದಿಂದ ಪ್ರಕೃತಿ ಮೌಲ್ಯವನ್ನು ಶಿಕ್ಷಣ ಪಡೆದ ನಾವು ಅಭಿವೃದ್ಧಿ ಅನ್ನುವ ಅವೈಜ್ಞಾನಿಕ ಬೆಳವಣಿಗೆಗೆ ಪ್ರಕೃತಿಯನ್ನು ವಿವಿಧ ರೀತಿಯಲ್ಲಿ ದುರುಪಯೋಗ ಹಾಗೂ ಬೆದರಿಕೆ ಹೆಸರಿನಲ್ಲಿ‌ ಎಷ್ಟು ನಾಶಮಾಡಬೇಕೋ ಅಷ್ಟು ಹಾಳು ಮಾಡುತ್ತಾ ಬಂದಿದ್ದರೂ ಸಹ ನಾವು ನಮ್ಮ ಅಸ್ತಿತ್ವವನ್ನು‌ ಇಂದಿಗೂ ಉಳಿಸಿಕೊಳ್ಳಲು ಮುಖ್ಯ ಕಾರಣ ನಮ್ಮ ಅಪಾರ ಜ್ಞಾನವುಳ್ಳ ಪೂರ್ವಜರ ನಂಬಿಕೆ. ಇವರು ಪರಿಸರಕ್ಕೆ ಹೊಂದಿಕೊಂಡು ಆಚರಿಸುತ್ತಿದ್ದ ಆಚರಣೆಗಳು ಇಂದಿನ ವೈಜ್ಞಾನಿಕ ಯುಗದಲ್ಲಿ ನಮಗೆ ಮೂಢನಂಬಿಕೆಯಾಗಿ ಕಂಡರೂ ಅದು ಪ್ರಕೃತಿಯೊಂದಿಗಿನ ಅವರ ಹೊಂದಾಣಿಕೆ.

ಆದರೆ ಇಂದು ಅತಿಯಾದ ನಗರೀಕರಣದಿಂದ ಹಳ್ಳಿಗಳು ನಾಶವಾಗಿ ನಗರಗಳು ನಿವೇಶನಗಳ ಗೂಡಾಗಿ ಕಸದ ರಾಶಿಯಿಂದಾಗಿ ಗಬ್ಬು ನಾರುತ್ತಿದೆ. ಫಲವತ್ತಾದ ಕೃಷಿ ಭೂಮಿ ಕೈಗಾರಿಕ ನೆಲೆಯಾಗಿ ಅವುಗಳ ವಿಷಪೂರಿತ ತ್ಯಾಜ್ಯಗಳು ನಿಶ್ಕಲ್ಮಶ ಜಲಮೂಲಗಳಿಗೆ ಸೇರಿ ಜಲಚರಗಳು ಸಾವನ್ನಪ್ಪುತ್ತಿವೆ. ಅರಣ್ಯ ನಾಶದಿಂದ ಅನಾವೃಷ್ಠಿ-ಅತೀವೃಷ್ಠಿಯಿಂದಾಗಿ ಗುಡ್ಡಗಳು ನೆಲಸಮವಾಗಿ ಜೀವ-ಜಂತುಗಳು ಸ್ವಚ್ಛ ಗಾಳಿಯಿಲ್ಲದೆ ಉಸಿರಾಡಲು ಪರದಾಡುವ ಸ್ಥಿತಿ ಬಂದಿದೆ. ವಾಹನಗಳ, ಕೈಗಾರಿಕೆಗಳ ದಟ್ಟವಾದ ಹೊಗೆಯಿಂದ ಓಝೋನ್‌ ಪದರ ಹಾನಿಯಾಗಿ ಉರಿಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದ್ದು, ಅನೇಕ ಹೊಸ ರೋಗಗಳ ಹುಟ್ಟಿಗೆ ಕಾರಣೀಭೂತವಾಗಿದೆ. ಭೂಗರ್ಭ ಬಿಸಿಯಾಗಿ ಹಿಮಪರ್ವತಗಳು ಕರಗಿ ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗಿ ಪ್ರಕೃತಿ ವಿಕೋಪಗಳಿಗೆ ಎಡೆಮಾಡಿಕೊಡುತ್ತಿದೆ. ಕೃಷಿಗೆ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಆಹಾರ ಪದಾರ್ಥಗಳು ವಿಷಕಾರಿಯಾಗಿ ಮಾರ್ಪಡುತ್ತಿವೆ. ಇದಕ್ಕಾಗಿಯೇ ಇಂದು ನಾವು “ವಿಶ್ವ ಪರಿಸರ ದಿನ”, ‘ವನಮಹೋತ್ಸವ’ವನ್ನು ಆಚರಿಸುವ ಮೂಲಕ “ಈ ಒಂದು ದಿನವಾದರೂ ಪ್ರಕೃತಿಯನ್ನು ಸಂರಕ್ಷಿಸುವ” ಎಂದು ಶಿಕ್ಷಣದ ಅರಿವು ಇರುವವರಿಗೆ ಪರಿಸರದ ಪಾಠ ಹೇಳಿಕೊಡುವ ದುರ್ದೈವದ ಸ್ಥಿತಿಯಲ್ಲಿರುವುದು.

ಮಾನವ ಹೀಗೆಯೇ ಜೀವಿಸಿದರೆ ಭವಿಷ್ಯದಲ್ಲಿ ಇನ್ನಷ್ಟು ಕರಾಳ ದಿನ ಎದುರಿಸುವುದು ಖಂಡಿತ. ಸುಂದರವಾದ ಪ್ರಕೃತಿಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಂದು ನಮಗೆ ಬೇಕಾಗಿರುವುದು “ಪ್ರಕೃತಿಯಿಂದಾಗಿ ನಾವೇ ಹೊರತು, ನಮ್ಮಿಂದ ಪ್ರಕೃತಿಯಲ್ಲ” ಎಂಬ ಜ್ಞಾನ ಮತ್ತು ಜಾಗೃತಿಯ ಅರಿವು.

-ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದೇಶಕ್ಕೆ ಶಿಕ್ಷಕರ ಸೇವೆ ಮಹತ್ವದ್ದು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಸೆ.7: ಶಿಕ್ಷಕರು ರಾಷ್ಟ್ರಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸುತ್ತಿದ್ದು, ಇಂದಿನ...

ಸುಳ್ಳು ದಾಖಲೆ ಸೃಷ್ಟಿ: ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಸೇವೆಯಿಂದ ಬಿಡುಗಡೆ

ನವದೆಹಲಿ, ಸೆ.7: 2023 ರ ಬ್ಯಾಚ್ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್...

18ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ

ಬೆಳ್ಮಣ್, ಸೆ.7: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಮದ್ಯ ಮಾರಾಟ ನಿಷೇಧ

ಉಡುಪಿ, ಸೆ.6: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ...
error: Content is protected !!