Thursday, September 19, 2024
Thursday, September 19, 2024

ಇಂದಿನ ಐಕಾನ್- ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್

ಇಂದಿನ ಐಕಾನ್- ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್

Date:

ರಾಹುಲ್ ದ್ರಾವಿಡ್ ಅವರಿಗೆ ಇಂದಿಗೆ 48 ವರ್ಷ ತುಂಬುತ್ತಿದೆ. ಭಾರತ ಕಂಡ ಅತ್ಯಂತ ಸ್ಟೈಲಿಶ್ ಮತ್ತು ಕ್ಲಾಸಿಕ್ ಕ್ರಿಕೆಟ್ ಆಟಗಾರ ದ್ರಾವಿಡ್. ತನ್ನ 16 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಭಾರತವನ್ನು ನೂರಾರು ಬಾರಿ ಗೆಲ್ಲಿಸಿದ ಆಟಗಾರ ಆತ. ಒಬ್ಬ ಯಶಸ್ವೀ ಕೋಚ್. ಆತನಿಗೆ ಉಪಮೆ ಇಲ್ಲ.

ಬೆಂಗಳೂರಿನ ಬಹು ಪ್ರಸಿದ್ದವಾದ ಸೈಂಟ್ ಜೋಸೆಫ್ ಕಾಲೇಜಿನಿಂದ ಎಂ.ಬಿ.ಎ ಪದವಿ ಪಡೆದವರು ದ್ರಾವಿಡ್. ತನ್ನ 12ನೆಯ ಕಿರು ವಯಸ್ಸಿಗೆ ಕ್ರಿಕೆಟನ್ನು ತುಂಬಾ ಗಂಭೀರವಾಗಿ ಆಡಲು ಅವರು ಆರಂಭಿಸಿದವರು.

ಭಾರತದ ಅಂಡರ್ 15, ಅಂಡರ್ 17, ಅಂಡರ್ 19 ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. 1996ರಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಕರೆಯನ್ನು ಪಡೆದ ಅವರು ಸುದೀರ್ಘ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಬಿಟ್ಟರು.

164 ಟೆಸ್ಟ್ ಪಂದ್ಯದಲ್ಲಿ 52.13ರ ಸರಾಸರಿ ಪಡೆದ ಅವರು ಪೇರಿಸಿದ ರನ್ನುಗಳ ಪರ್ವತವೆ 13,288! ಈ ಮಹಾನ್ ದಾಖಲೆಯ ಪಟ್ಟಿಯಲ್ಲಿ ಈಗಲೂ ಅವರು ಜಗತ್ತಿನಲ್ಲಿ ನಂಬರ್ 4 ಮತ್ತು ಭಾರತದಲ್ಲಿ ಕೇವಲ ನಂಬರ್ 2 ಆಟಗಾರ! ಅದರೊಂದಿಗೆ 36 ಶತಕ ಮತ್ತು 63 ಅರ್ಧ ಶತಕಗಳ ಗೊಂಚಲು ಅವರ ಹೆಸರಲ್ಲಿ ಇವೆ.

ಟೆಸ್ಟ್ ಆಡುತ್ತಿರುವ ಎಲ್ಲಾ 10 ರಾಷ್ಟ್ರಗಳ ವಿರುದ್ಧ ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎನ್ನುವ ಕೀರ್ತಿಯೂ ಅವರಿಗೆ ಸಲ್ಲುತ್ತದೆ. 210 ಕ್ಯಾಚ್ ಹಿಡಿದ ಅಪೂರ್ವ ವಿಶ್ವ ದಾಖಲೆ ಅವರದೇ ಹೆಸರಲ್ಲಿ ಇದೆ. ಅವರ ಕೆಲವು ದಾಖಲೆಗಳನ್ನು ಸದ್ಯಕ್ಕಂತೂ ಯಾರೂ ಮುರಿಯುವ ಲಕ್ಷಣಗಳು ಕಾಣುವುದಿಲ್ಲ.

286 ಟೆಸ್ಟ್ ಇನಿಂಗ್ಸಲ್ಲಿ ಒಮ್ಮೆ ಕೂಡ ಸೊನ್ನೆ ರನ್ನಿಗೆ ಔಟ್ ಆಗದೆ ಆಡಿದ್ದು ಮಹಾದಾಖಲೆ! ಅದ್ಭುತ 88 ಶತಕಗಳ ಜೊತೆಯಾಟ ಭಾರತದಲ್ಲಿ ಬೇರೆ ಯಾರೂ ಮಾಡಿದ್ದು ಇಲ್ಲ! ಜಾಗತಿಕ ಟೆಸ್ಟ್ ಕ್ರಿಕೆಟಲ್ಲಿ ನಂಬರ್ 3 ಸ್ಥಾನದಲ್ಲಿ 219 ಇನಿಂಗ್ಸಲ್ಲಿ 10,524 ರನ್ ಗಳಿಸಿದ್ದು ಅವರದ್ದೇ ವಿಶ್ವ ದಾಖಲೆ!

31,258 ಬಾಲ್ ಎದುರಿಸಿದ್ದು, 44,152 ನಿಮಿಷಗಳ ಕಾಲ ಕ್ರೀಸನ್ನು ಆಕ್ರಮಿಸಿ ನಿಂತದ್ದು. ಇವೆಲ್ಲವೂ ಅವರನ್ನು ‘ಭಾರತೀಯ ಕ್ರಿಕೆಟಿನ ಮಹಾಗೋಡೆ’ ಎಂಬ ಕೀರ್ತಿಗೆ ಏರಿಸಿತು. ಅವರ ಅಪಾರವಾದ ತಾಳ್ಮೆ ಮತ್ತು ಕ್ಷಮತೆಗಳು ಅವರನ್ನು MR. DEPENDABLE ಆಗಿ ಮಾಡಿತು.

ರಾಹುಲ್ ಗೆಲ್ಲಿಸಿದ್ದಷ್ಟು ಪಂದ್ಯಗಳನ್ನು ಇದುವರೆಗೆ ಬೇರೆ ಯಾವ ಭಾರತೀಯ ಆಟಗಾರನೂ ಗೆಲ್ಲಿಸಿಲ್ಲ ಎಂದು ಕ್ರಿಕೆಟ್ ದಾಖಲೆಗಳು ಹೇಳುತ್ತವೆ! ಆ ಮಟ್ಟಿಗೆ ಅವರು ಟೀಮ್ ಪ್ಲೇಯರ್! ಅವರು ಸ್ವಂತದ ದಾಖಲೆಗಾಗಿ ಆಡಿದ್ದೆ ಇಲ್ಲ.

ಹಾಗಂತ ಅವರು ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತ ಅಂತ ಭಾವಿಸುವುದು ತಪ್ಪು. ಅವರ ಏಕದಿನ ದಾಖಲೆಗಳು ಕೂಡ ಅದ್ಭುತ ಆಗಿವೆ. 344 ಏಕ ದಿನದ ಪಂದ್ಯಗಳಲ್ಲಿ 39.16 ಸರಾಸರಿಯಲ್ಲಿ 10,889 ರನ್ನುಗಳು ಅವರ ಖಾತೆಯಲ್ಲಿ ಇವೆ.

ಏಕದಿನ ಪಂದ್ಯಗಳಲ್ಲಿ ಎರಡು ಬಾರಿ 300+ ರನ್ ಜೊತೆಯಾಟ ಕಟ್ಟಿದ ಜಗತ್ತಿನ ಏಕೈಕ ಆಟಗಾರ ದ್ರಾವಿಡ್! 120 ಏಕ ದಿನದ ಪಂದ್ಯಗಳಲ್ಲಿ ಕೂಡ ಸೊನ್ನೆ ರನ್ನನ್ನು ಗಳಿಸದೆ ಆಡಿದ್ದು ಕೂಡ ದಾಖಲೆ. ನ್ಯೂಜಿಲ್ಯಾಂಡ್ ವಿರುದ್ಧ 2003ರ ಪಂದ್ಯದಲ್ಲಿ

ಅವರು ಕೇವಲ 22 ಚೆಂಡುಗಳಲ್ಲಿ 50 ರನ್ನು ಸಿಡಿಸಿದ್ದು ಬಹುಕಾಲ ರಾಷ್ಟ್ರ ದಾಖಲೆಯ ಭಾಗವಾಗಿತ್ತು. ತನ್ನ ತಂಡ ಬಯಸಿದಾಗ ನಾಯಕತ್ವ, ವಿಕೆಟ್ ಕೀಪರ್ ಮೊದಲಾದ ಹೆಚ್ಚುವರಿ ಹೊಣೆಗಳನ್ನು ಕೂಡ ಅವರು ಹೊತ್ತುಕೊಂಡು ನಿಭಾಯಿಸಿದ ಹಲವು ಉದಾಹರಣೆಗಳು ದೊರೆಯುತ್ತವೆ.

ಈ ಮಹಾ ದಾಖಲೆಗಳ ಹೊರತಾಗಿಯೂ ಅವರು ಜೆಂಟಲಮನ್ ಆಟಗಾರ ಎಂದೇ ಎಲ್ಲಾ ಕಡೆ ಗುರುತಿಸಿ ಕೊಂಡವರು. ಮೈದಾನದಲ್ಲಿ ಒಮ್ಮೆಯೂ ಸಿಡುಕಿದ, ತಾಳ್ಮೆ ತಪ್ಪಿದ, ರೇಗಾಡಿದ, ಅಂಪಾಯರ್ ಮೇಲೆ ಒತ್ತಡ ಹೇರಿದ ಉದಾಹರಣೆ ಸಿಗುವುದಿಲ್ಲ.

ಒಮ್ಮೆ ಚೆಂಡು ರೂಪ ಕೆಡಿಸಿದ ಆರೋಪವು ಅವರ ಮೇಲೆ ಬಂದರೂ ಮುಂದೆ ಅವರು ನಿರಪರಾಧಿ ಎಂದು ಸಾಬೀತಾಯಿತು. ಈ ಆರೋಪದ ವಿಚಾರಣೆಯ ಸಂದರ್ಭದಲ್ಲಿ ಕೂಡ ಅವರು ತನ್ನ ಸ್ಥಿತ ಪ್ರಜ್ಞತೆಯನ್ನು ಮೆರೆದವರು. ಈ ಅಗ್ನಿಪರೀಕ್ಷೆಯ ಕ್ಷಣದಲ್ಲಿಯೂ ಇಡೀ ಭಾರತ ಅವರ ಜೊತೆ ನಿಂತಿತ್ತು.

ಇಂತಹ ಮಹಾನ್ ಆಟಗಾರನಿಗೆ ನಿಜವಾಗಿಯೂ ದೊರೆಯಬೇಕಾದ ಹಲವು ಕೀರ್ತಿ ಮತ್ತು ಗೌರವಗಳು ದೊರೆಯದೆ ಹೋದವು ಎಂಬ ದುಃಖವು ನನಗಿದೆ. ಸಚಿನ್ ಎಂಬ ಕ್ರಿಕೆಟ್ ದೇವರಿಗೆ ದೊರೆತ ಪ್ರಚಾರಗಳು ಮತ್ತು ಪ್ರಶಸ್ತಿಗಳು ದ್ರಾವಿಡ್ ಅವರಿಗೆ ದೊರೆಯಲೆ ಇಲ್ಲ.

ಅವರು ಕೋಚಿಂಗ್ ನೀಡಿದ ಇಂಡಿಯಾ ಎ ಮತ್ತು ಅಂಡರ್ 19 ಕ್ರಿಕೆಟ್ ತಂಡಗಳು ವಿಶ್ವಕಪ್ಪನ್ನು ಗೆದ್ದು ಮೆರೆದರೂ ಬಿಸಿಸಿಐ ಅವರನ್ನು ಗೌರವಿಸಲು ಮನಸ್ಸು ಮಾಡಲಿಲ್ಲ. ಈಗ ಅವರು ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿರುವುದು ಕೂಡ ಅವರ ಸ್ವಂತ ಪ್ರತಿಭೆಯ ಬಲದಿಂದ.

ಅವರು ಮುಂದೆ ನಿಂತು ಬೆಳೆಸಿದ ಸಂಜು ಸ್ಯಾಮ್ಸನ್, ಮಯಾಂಕ್ ಅಗರವಾಲ್ ಮೊದಲಾದ ಉತ್ತಮ ಆಟಗಾರರು ಇಂದಿಗೂ ಆಯ್ಕೆ ಮಂಡಳಿಯ ಕೃಪೆಗೆ ಪೂರ್ಣ ಪ್ರಮಾಣದಲ್ಲಿ ಪಾತ್ರರಾಗಿಲ್ಲ.

Wisdon cricketer of the year, ICC Test cricketer of the year ಹೀಗೆ ಹಲವು ಪ್ರಶಸ್ತಿಗಳನ್ನು ರಾಹುಲ್ ದ್ರಾವಿಡ್ ಪಡೆದಿದ್ದಾರೆ. ಅದರ ಜೊತೆಗೆ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಸಂದಿವೆ. ದೇಶದ ಯುವ ಆಟಗಾರರಿಗೆ ಅವರು ನಿಜವಾದ ಸ್ಫೂರ್ತಿ ಅನ್ನುವುದು ನೂರಕ್ಕೇ ನೂರು ನಿಜ.

ಇಂದಿನ ದಿನ ತನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ರಾಹುಲ್ ದ್ರಾವಿಡ್ ಎಂಬ ಲೆಜೆಂಡ್ ಆಟಗಾರನಿಗೆ ಪ್ರೀತಿಯ ಶುಭಾಶಯಗಳು.

-ರಾಜೇಂದ್ರ ಭಟ್ ಕೆ., ರಾಷ್ಟ್ರಮಟ್ಟದ ವಿಕಸನ ತರಬೇತುದಾರ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...

ತಾತ್ಕಾಲಿಕ ಸುಡುಮದ್ದು ಮಾರಾಟ ಪರವಾನಿಗೆ ಪಡೆಯಲು ಅರ್ಜಿ ಆಹ್ವಾನ

ಉಡುಪಿ, ಸೆ.19: ದೀಪಾವಳಿ ಹಬ್ಬದ ಸಂದರ್ಭದಲ್ಲಿ (ಅಕ್ಟೋಬರ್ 30 ರಿಂದ ನವೆಂಬರ್...

ಪವರ್ ಲಿಫ್ಟಿಂಗ್: ವೈಷ್ಣವಿ ಖಾರ್ವಿಗೆ ಬೆಳ್ಳಿ ಪದಕ

ಉಡುಪಿ, ಸೆ.19: ರಾ ಫಿಟ್ನೆಸ್ ಸಾಲಿಗ್ರಾಮ ಇವರ ವತಿಯಿಂದ ಸಾಲಿಗ್ರಾಮದ ಮೊಗವೀರ...
error: Content is protected !!