ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ ಮಾಡಿ, ಹಣವನ್ನು ಗಳಿಸಿ ಆನ್ಲೈನ್ ಆಟವನ್ನು ಆಡಿರಿ. ಈ ರೀತಿಯ ಜಾಹೀರಾತುಗಳು ದಿನನಿತ್ಯ ನಮ್ಮ ಮೊಬೈಲ್ ನಲ್ಲಿ ಎಸ್ಎಂಎಸ್ ಗಳಲ್ಲಿ ನೋಡುತ್ತಿರುತ್ತೇವೆ. ಇದರಿಂದ ನಾವು ಪ್ರಭಾವಿತರಾಗದೆ ಇರುವುದಿಲ್ಲ. ನಮಗೂ ಲಕ್ಷಗಟ್ಟಲೆ ಸಂಪಾದಿಸಿದರೆ ಮಾತ್ರ ಸುಖವೆನ್ನುವ ಮನೋಭಾವ ಬೆಳೆದುಬಿಡುತ್ತದೆ. ಇದೆಲ್ಲವೂ ಪಾಶ್ಚಾತ್ಯ ದೇಶಗಳಿಂದ ಪ್ರಭಾವಿತರಾಗಿ ಇದೇ ನಮ್ಮ ಜೀವನದ ಗುರಿ ಎಂದು ಭಾವಿಸಿದ್ದೇವೆ.
ಆಧುನಿಕ ಪ್ರಪಂಚಕ್ಕೆ ಹೊಂದಿಕೊಳ್ಳಬೇಕೆಂಬ ಬಯಕೆ ಸಹಜ. ಈ ಆಧುನಿಕ ವಿಚಾರಗಳಿಂದ ನಮ್ಮ ಮೂಲ ಭಾರತೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ವಿಶ್ವದೆಲ್ಲೆಡೆ ನಮ್ಮ ಹೆಸರು ಬರುವ ಭರದಲ್ಲಿ ಭಾರತೀಯ ಚಿಂತನೆಗಳು ಕಣ್ಮರೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ನೀತಿ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ನಮ್ಮ ಭಾರತೀಯ ಜ್ಞಾನ ನೀತಿ ಮೌಲ್ಯಾಧಾರಿತ ಜೀವನ ಪದ್ಧತಿ ಮರೆಯಾಗುತ್ತಿದೆ. ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶವೇ ಇಲ್ಲದಂತಾಗಿದೆ. ಚಿಕ್ಕಂದಿನಿಂದ ಧನಾರ್ಜನೆ ನಮ್ಮ ಪ್ರಧಾನ ಗುರಿ ಎಂಬಂತೆ ಬಿಂಬಿಸಲಾಗುತ್ತಿದೆ. ಬದುಕಲು ಬೇಕಾಗುವ ಕೌಶಲ್ಯಗಳನ್ನು ಮರೆಯುತ್ತಿದ್ದೇವೆ.
ದೈಹಿಕವಾಗಿ ಬೆಳೆಯಲು ವ್ಯಾಯಾಮ, ಯೋಗಾಸನ, ನಡಿಗೆ ಜೊತೆಗೆ ಮನೆ ಕೆಲಸ ಮಾಡಲು ಮಕ್ಕಳನ್ನು ಕಳಿಸಬೇಕು. ಈಗಿನ ಕಾಲದಲ್ಲಿ ಮನೆಯಲ್ಲಿ ಎಲ್ಲದಕ್ಕೂ ಮನೆ ಕೆಲಸದವರು ಇಟ್ಟುಕೊಂಡಿರುವುದರಿಂದ ಮಕ್ಕಳು ಮನೆ ಕೆಲಸ ಕಲಿಯಲು ಅವಕಾಶವೇ ಇಲ್ಲ. ಮನೆ ಅಂಗಳದಲ್ಲಿ ಚಿಕ್ಕ ತೋಟ, ತರಕಾರಿ, ಹಣ್ಣಿನ ಗಿಡ, ಹೂವಿನ ಗಿಡ ಅದರ ಆರೈಕೆ ಮಾಡಲು ಮಕ್ಕಳನ್ನು ಪ್ರೇರೇಪಿಸಿ. ಜೀವನದಲ್ಲಿ ಆನಂದವಾಗಿರಲು ಕಲಿಸಿರಿ. ಬಟ್ಟೆ ಹರಿದರೆ ಹೊಲಿಯಲು, ಮನೆಯ ಕಸ ಗುಡಿಸಿ ವರಿಸಲು, ಬಟ್ಟೆ ಪಾತ್ರೆ ತೊಳೆಯಲು ಬಾತ್ರೂಮ್ ಟಾಯ್ಲೆಟ್ ಕ್ಲೀನ್ ಮಾಡಲು ಕಲಿಸಿ. ಗ್ಯಾಸ್ ಸಿಲೆಂಡರ್ ಚೇಂಜ್ ಮಾಡಲು, ಬಲ್ಬ್ ಹಾಕಲು, ಟ್ಯಾಪ್ ರಿಪೇರಿ ಕಲಿಸಿ. ಅಡುಗೆ ಮಾಡಲು, ಚಿಕ್ಕ ಪುಟ್ಟ ಗಾಯ ಆದರೆ ಏನು ಮಾಡಬೇಕು ಇದನ್ನೆಲ್ಲಾ ಕಲಿಸಿ. ಮಾನಸಿಕವಾಗಿ ಬೆಳೆಯಲು ಧ್ಯಾನ, ಪ್ರಾಣಾಯಾಮ, ಪುಸ್ತಕ ಓದುವ ಹವ್ಯಾಸ ಬೆಳೆಸಿ. ತಮ್ಮ ಆಲೋಚನೆಗಳನ್ನು ಬರೆಯಲು ಪ್ರೇರೆಪಿಸಿ. ವಿವಿಧ ನ್ಯೂಸ್ ಪೇಪರ್ ಗಳು, ಮ್ಯಾಗಜೀನ್ , ಒಳ್ಳೊಳ್ಳೆ ವಿವಿಧ ಕ್ಷೇತ್ರದ ಬಗ್ಗೆ ಅಂಕಣಗಳನ್ನು ಓದಲು ಹೇಳಿ. ನೀವು ಮನೆಯಲ್ಲಿ ಓದುತ್ತಿದ್ದರೆ ಅವರು ಕೂಡ ಓದುತ್ತಾರೆ. ಮಕ್ಕಳಲ್ಲಿ ಕುತೂಹಲ ಬೆಳೆಸಿ. ಸುಡೊಕೊ ಇನ್ನಿತರ ಮೈಂಡ್ ಗೇಮ್ಸ್ ಆಡಲು ಹೇಳಿ.
ಸಾಮಾಜಿಕವಾಗಿ ಬೆಳೆಯಲು ಸ್ಕೂಲ್ ಕಾಲೇಜಿನಲ್ಲಿ ಕಾಲೇಜಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೇರೇಪಿಸಿ. ವಾಲಂಟಿಯರ್ ಆಗಿ ಕೆಲಸ ಮಾಡಲು ಹೇಳಿ. ಆಯ್ಕೆ ಅವರದಾಗಿರಲಿ. ಬ್ಯಾಂಕಿನ ಕೆಲಸವನ್ನು ಕಲಿಸಿರಿ. ಜೀವನವೆಂಬುದು ವಿಫಲತೆಯ ಬಂಢಾರ. ಅದನ್ನು ಎದುರಿಸಲು ಕಲಿಸಿರಿ. ಒಂದು ಸಲ ಯಶಸ್ಸು ಗಳಿಸಬೇಕಾದರೆ ಅನೇಕ ಬಾರಿ ವಿಫಲತೆ ಎದುರಿಸಬೇಕಾಗುತ್ತದೆ. ನಮ್ಮ ಆದರ್ಶ ನಮ್ಮ ಮೌಲ್ಯಗಳಿಗೆ ತಕ್ಕಂತೆ ನಮ್ಮ ಜೀವನವಿರಬೇಕು. ಜಾಹೀರಾತುಗಳು ನಮ್ಮ ಮನಸ್ಸನ್ನು ಹಣದ ದಾಸರಾಗಿ ಮಾಡುತ್ತವೆ. ನಮಗೆ ನಿಜವಾಗಿ ಬೇಕಾದದ್ದನ್ನು ನೆಮ್ಮದಿಯ ಮೌಲ್ಯಯುತ ಜೀವನ ಅಷ್ಟೇ. ಅದಕ್ಕೆ ತಯಾರಿ ಮಾಡೋಣ ಸಾಕು.
-ಡಾ. ಹರ್ಷಾ ಕಾಮತ್