Home ಸುದ್ಧಿಗಳು ರಾಜ್ಯ ಭಾಷೆಯ ಮೇಲಿನ ಹಿಡಿತ, ಸ್ಪಂದನೆ ಹಾಗೂ ಪ್ರಸ್ತುತಿಯು ಉತ್ತಮ ಆರ್‌ಜೆಯ ಲಕ್ಷಣ: ರೇಡಿಯೊ ಮಿರ್ಚಿ ಆರ್‌ಜೆ...

ಭಾಷೆಯ ಮೇಲಿನ ಹಿಡಿತ, ಸ್ಪಂದನೆ ಹಾಗೂ ಪ್ರಸ್ತುತಿಯು ಉತ್ತಮ ಆರ್‌ಜೆಯ ಲಕ್ಷಣ: ರೇಡಿಯೊ ಮಿರ್ಚಿ ಆರ್‌ಜೆ ವಿವೇಕ್

484
0

ವಿದ್ಯಾಗಿರಿ, ಮಾ. 4: ಅತಿಯಾದ ಮಾತು ಆರ್‌ಜೆ (ರೇಡಿಯೊ ಉದ್ಘೋಷಕ) ಅರ್ಹತೆಯಲ್ಲ. ಮಾತಿನಲ್ಲಿ ವಿಷಯ, ಭಾಷೆಯ ಮೇಲಿನ ಹಿಡಿತ, ಸ್ಪಂದನೆ ಹಾಗೂ ಪ್ರಸ್ತುತಿಯು ಉತ್ತಮ ಆರ್‌ಜೆಯ ಲಕ್ಷಣ ಎಂದು ರೇಡಿಯೊ ಮಿರ್ಚಿ ಆರ್‌ಜೆ ವಿವೇಕ್ (ಆರ್‌ಜೆ ವಿಕ್ಕಿ) ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆಯು ಸೋಮವಾರ ಹಮ್ಮಿಕೊಂಡ ‘ರೇಡಿಯೊ ಅಂದು, ಇಂದು ಮತ್ತು ಮುಂದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀವು ಉತ್ತಮ ವ್ಯಕ್ತಿಗಳ ಜೊತೆ, ವಿವಿಧ ಸಮುದಾಯಗಳ ಜೊತೆ, ಸ್ಥಳೀಯದಲ್ಲಿ ಸ್ಥಳೀಯ ಸಂಸ್ಕೃತಿಗಳ ಜೊತೆ, ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಒಡನಾಟ ಹೊಂದಬೇಕು. ಜನರ ನಾಡಿಮಿಡಿತ ಅರಿಯಬೇಕು. ಸಂಯಮದಿಂದ ಸ್ಪಂದಿಸಬೇಕು ಎಂದ ಅವರು, ವಿಭಿನ್ನ ಅನುಭವಗಳನ್ನು ಹಂಚಿಕೊಂಡರು. ರೇಡಿಯೊದ ಅನನ್ಯತೆ, ಎದುರಿಸುತ್ತಿರುವ ಸವಾಲುಗಳು, ಆರ್ಥಿಕ ನಿರ್ವಹಣೆ, ಆರು ತಿಂಗಳಿಗೊಮ್ಮೆ ಬದಲಾಗಬೇಕಾದ ನಿರೂಪಣಾ ಶೈಲಿ ಸೇರಿದಂತೆ ಕ್ಷೇತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ರೇಡಿಯೊ ಜನಪ್ರಿಯತೆ ಅಳೆಯುವ ರ‍್ಯಾಮ್, ಕಾರ್ ಟ್ರ್ಯಾಕ್ ಮತ್ತಿತರ ಮಾನದಂಡ, ಜಾಹೀರಾತುದಾರರ ಸ್ಪಂದನೆ, ಡಿಜಿಟಲ್ ಮಾಧ್ಯಮದ ಬಳಕೆ ಕುರಿತು ತಿಳಿಸಿದರು. ರೇಡಿಯೊ ಆರಂಭಿಕ ದಿನಗಳು, ಕೋವಿಡ್ ಕಾಲಘಟ್ಟದ ಪ್ರಸ್ತುತ ದಿನಮಾನಗಳು ಹಾಗೂ ಭವಿಷ್ಯದ ಬಗ್ಗೆ ವಿಶ್ಲೇಷಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಜೊತೆ ರೇಡಿಯೊಗಳಿಗೂ ಸೇರುವಂತಾಗಬೇಕು ಎಂದು ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ ಹೇಳಿದರು.

ವಿಭಾಗದ ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ಹೊಡೆಯಾಲ, ಅಭಿವ್ಯಕ್ತಿ ವೇದಿಕೆ ಸಹ ಸಂಯೋಜಕ ವೈಶಾಖ್ ಮಿಜಾರ್ ಇದ್ದರು. ವಿದ್ಯಾರ್ಥಿನಿ ಪವಿತ್ರಾ ಕುಂದಾಪುರ ನಿರೂಪಿಸಿ, ಉಮರ್ ಫಾರುಕ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.