Home ಸುದ್ಧಿಗಳು ಪ್ರಾದೇಶಿಕ ಮೋದಿ ಸರ್ಕಾರದ ಬದ್ಧತೆಗೆ ವಿಶ್ವ ಮನ್ನಣೆ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್

ಮೋದಿ ಸರ್ಕಾರದ ಬದ್ಧತೆಗೆ ವಿಶ್ವ ಮನ್ನಣೆ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್

269
0

ಮಣಿಪಾಲ, ಮಾ. 19: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬದ್ಧತೆಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಲಭಿಸಿದೆ ಎಂದು ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾದ ಎಸ್. ಜೈಶಂಕರ್ ಹೇಳಿದರು. ಅವರು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಭಾನುವಾರ ಮಣಿಪಾಲದ ಹೊಟೇಲ್ ಕಂಟ್ರಿ ಇನ್ ಅಂಡ್ ಸೂಟ್ಸ್ ನಲ್ಲಿ ನಡೆದ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನ ಸಭೆ ಮತ್ತು ಅನಿವಾಸಿ ಭಾರತೀಯರು ಹಾಗೂ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಅಮೂಲ್ಯವಾದ ಸ್ಥಾನ ಸಿಕ್ಕಿದ ಕಾರಣ ಜನರ ಉತ್ಸಾಹ ಹೆಚ್ಚಾಗುತ್ತಿದೆ ಎಂದರು.

ಭಾರತದ ಆರ್ಥಿಕತೆಯು ಬಲಗೊಳ್ಳುತ್ತಿರುವುದನ್ನು ಒತ್ತಿ ಹೇಳಿದ ಸಚಿವರು, ಜಿ20 ಕಾರ್ಯಕ್ರಮದ ಅಂಗವಾಗಿ ಹಲವಾರು ಸರಣಿ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗುತ್ತಿದ್ದು ತನ್ಮೂಲಕ ಭಾರತದ ಶಕ್ತಿಯನ್ನು ಪರಿಚಯಿಸುವ ವೇದಿಕೆ ಲಭಿಸಿದೆ ಎಂದರು. 125 ರಾಷ್ಟ್ರಗಳೊಂದಿಗೆ ಸಭೆಯು ಶ್ರೀಘ್ರದಲ್ಲಿ ಜಿ20 ಸಮ್ಮೇಳನದ ಅಂಗವಾಗಿ ನಡೆಯುತ್ತಿದೆ ಎಂದ ಸಚಿವರು, ಕಳೆದ 8 ವರ್ಷಗಳಲ್ಲಿ ಭಾರತದ ಹೊರಗಿರುವ ಭಾರತೀಯರಿಗೆ ಜಾಗತಿಕವಾಗಿ ಗೌರವವು ಹೆಚ್ಚಾಗುತ್ತಿದೆ. ವಿಶ್ವಸಂಸ್ಥೆಯಲ್ಲಿಯೂ ಭಾರತಕ್ಕೆ ವಿಶೇಷ ಮನ್ನಣೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ.

ಸಾಮಾಜಿಕ ಜಾಲತಾಣ ಮುಖ್ಯವಾಗಿ ಟ್ವಿಟರ್ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜೊತೆಗೆ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಸಾಮಾನ್ಯ ವ್ಯಕ್ತಿಯೂ ಸಂಪರ್ಕ ಸಾಧಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದು ಮತ್ತು ಮುಖ್ಯ ಮಾಹಿತಿ ಪಡೆದುಕೊಳ್ಳಬಹುದು. ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈ ಸಂಪ್ರದಾಯ ಆರಂಭಿಸಿದ್ದರು, ನಾವೀಗ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಸಚಿವ ಜೈಶಂಕರ್ ತಿಳಿಸಿದರು.

ಭಾಷಣಕ್ಕಿಂತ ಹೆಚ್ಚಿನ ಸಮಯ ಸಂವಾದಕ್ಕೆ ಮೀಸಲಿಟ್ಟ ಸಚಿವರು: ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಸುಮಾರು 25 ನಿಮಿಷಗಳ ಕಾಲ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸುಮಾರು 35 ನಿಮಿಷಗಳ ಕಾಲ ಸುದೀರ್ಘ ಸಂವಾದ ನಡೆಸಿದರು.

ಶಾಸಕರುಗಳಾದ ಕೆ. ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ನಗರಸಭಾ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ರಾಜ್ಯ ಚುನಾವಣಾ ಪ್ರಣಾಳಿಕೆ ಸಲಹಾ ಸಂಗ್ರಹ ಅಭಿಯಾನದ ರಾಜ್ಯ ಸಂಚಾಲಕರಾದ ರವೀಂದ್ರ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿನೋದ್ ನಾಯಕ್ ಸ್ವಾಗತಿಸಿ, ನ್ಯಾಯವಾದಿ ಶ್ರೀನಿಧಿ ಹೆಗ್ಡೆ ವಂದಿಸಿದರು. ಪ್ರೊ. ಕೆ. ಶ್ರೀನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.