ಈಗಾಗಲೇ ಕೊರೊನಾ ಒಂದು ಮತ್ತು 2ನೇ ಅಲೆಯ ಪರಿಣಾಮವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಲಾಕ್ ಡೌನ್ ನಿಂದಾಗಿ ಜನತೆ ಎಷ್ಟು ಕಷ್ಟ ಪಟ್ಟಿದ್ದಾರೆ, ಬಡವ ಶ್ರೀಮಂತ ಜಾತಿ ಬೇಧವಿಲ್ಲದೆ ಜನತೆ ಕೊರೊನಾದ ವಿಶೇಷ ಅನುಭವ ಪಡೆದಿದ್ದಾರೆ. ಇಷ್ಟೆಲ್ಲವಾದರೂ ನಾವು ಇನ್ನೂ ಪಾಠ ಕಲಿಯದಿರುವುದು ಬೇಸರದ ಸಂಗತಿ. ಕೊರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದೆ ಎನ್ನುವಾಗಲೇ ಕೊರೊನಾ ನೀತಿ ನಿಯಮಗಳನ್ನು ಜನರು ಗಾಳಿಗೆ ತೂರಲು ಪ್ರಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಡ್ಡಾಯವಾದರೂ ಬಹಳಷ್ಟು ಜನರು ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.
ಸರ್ಕಾರದ ನಿಯಮದಂತೆ ಕೋವಿಡ್-19 ಸಂದರ್ಭದಲ್ಲಿ ಯಾವುದೇ ರಾಜಕೀಯ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಅದೇ ರೀತಿ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಆದರೆ ಈ ಮೇಲಿನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಪ್ರತಿಭಟನೆಗಳು ದಿನಕ್ಕೆ 3 ರಿಂದ 4 ನಿರಂತರ ನಡೆಯುತ್ತಿವೆ. ಈ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಕೊರೋನಾ ನಿಯಮಗಳು ಪಾಲನೆಯಾಗುತ್ತಿಲ್ಲ. ಈ ರೀತಿ ನಡೆದರೆ 3ನೇ ಅಲೆಗೆ ನಾವು ರತ್ನ ಕಂಬಳಿ ಹಾಕಿ ಸ್ವಾಗತ ಮಾಡಬೇಕಾದಿತು.! ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಜನ ಸೇರುತ್ತಿರುವುದು ಕಂಡು ಬರುತ್ತಿದೆ.
ನಮ್ಮ ಜನಪ್ರತಿನಿಧಿಗಳು 3 ತಿಂಗಳು ಯಾವುದೇ ಕಾರ್ಯಕ್ರಮ ನಡೆಸಬಾರದು ಹೀಗಾದರೆ ಮಾತ್ರ ಕೊರೋನಾ ನಿಯಂತ್ರಿಸಬಹುದು. ಏಕೆಂದರೆ ಜನಪ್ರತಿನಿಧಿಗಳು ಕೊರೋನಾ ನಿಯಮಗಳನ್ನು ಪಾಲನೆ ಮಾಡದಿದ್ದರೆ ಜನತೆ ಕೂಡ ಈ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ಜನತೆ ಸ್ವಯಂ ಕರ್ಫ್ಯೂ ವಿಧಿಸಬೇಕು. ಎಲ್ಲದಕ್ಕೂ ಸರ್ಕಾರವನ್ನು ದೂರುವ ಬದಲು ಜನರು ತಮ್ಮ ಆರೋಗ್ಯದ ರಕ್ಷಣೆಯ ಜವಾಬ್ದಾರಿಯನ್ನು ತಾವೇ ವಹಿಸಬೇಕು. ಕೊರೊನಾ ನಿಯಮಗಳನ್ನು ತನ್ನ ವೈಯತ್ತಿಕ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಪಾಲನೆ ಮಾಡುವ ಪ್ರಮಾಣ ಮಾಡಬೇಕಾಗಿದೆ. ಇಲ್ಲವಾದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಬಂದು ನಾವೆಲ್ಲರೂ ಸಂಕಷ್ಟಕ್ಕೆ ಒಳಗಾಗಬಹುದು.
ಈಗಾಗಲೇ ಜಗತ್ತಿನ ಕೆಲವು ದೇಶಗಳಲ್ಲಿ ಲಾಕ್ ಡೌನ್ ಬಿಸಿ ಏರಿದೆ. ನಾವೆಲ್ಲರೂ ಏಕ ಮನಸ್ಸಿನಿಂದ ರಾಜಕೀಯ ಮರೆತು ಕೊರೊನಾ ಓಡಿಸುವ ಸಂಕಲ್ಪ ಮಾಡೋಣ. ಬನ್ನಿ ಬದಲಾಗೋಣ.
-ರಾಘವೇಂದ್ರ ಪ್ರಭು, ಕರ್ವಾಲು