ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ 1984ರಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಹರಿಕೃಷ್ಣ ರಾವ್ ಎ. ಸಗ್ರಿ ಅವರು 31-5-2021 ರಂದು ನಿವೃತ್ತರಾಗಿರುತ್ತಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯಿಂದ ಶಾಸ್ತ್ರದ ಜೊತೆಗೆ ಕನ್ನಡ, ಇಂಗ್ಲಿಷ್, ಮತ್ತು ಇತರ ವಿಷಯಗಳು ಹೊಸ ಕಲಿಕಾ ಪದ್ದತಿಯಲ್ಲಿ ಸೇರಿತು. ಆವಾಗ ಗ್ರಂಥಾಲಯದ ನಿರ್ವಹಣೆಯೊಂದಿಗೆ ಕನ್ನಡ, ಇಂಗ್ಲಿಷ್, ಪರಿಸರ ಅಧ್ಯಯನ ಮತ್ತು ಇತಿಹಾಸದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿರುವರು. ಅಲ್ಲದೇ ಪ್ರಾರಂಭದ ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿಯಾಗಿ ಸಂಸ್ಕೃತ ಕಾಲೇಜಿನಲ್ಲಿ ಮುನ್ನಡಿಸಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪ್ರಶಸ್ತಿ ಪಡೆದಿರುವರು.
ಅವಧೂತ ನಿತ್ಯಾನಂದರ ಭಕ್ತರಾಗಿರುವ ಹರಿಕೃಷ್ಣ ರಾವ್ ಸಗ್ರಿ ಅವರು, ಉಡುಪಿಯ ನಿತ್ಯಾನಂದ ಮಂದಿರ ಮಠದ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಅಲ್ಲಿ ನಡೆಯುವ ಸತ್ಸಂಗದಲ್ಲಿ ಪ್ರವಚನಗಳಲ್ಲಿ ಭಾಗಿಗಳಾಗುತ್ತಿದ್ದರು. ಸಾಹಿತಿಯಾಗಿರುವ ಅವರು, ಕನ್ನಡ ನಿಯತಕಾಲಿಕ ಪತ್ರಿಕೆಗಳಲ್ಲಿ ಅಂಕಣ ಬರಹಗಳನ್ನು ಬರೆಯುತ್ತಿದ್ದರು. ಹಲವಾರು ಪುಸ್ತಕಗಳು ಇವರ ಲೇಖನಿಯಿಂದ ಮೂಡಿಬಂದಿವೆ. ಆಂಗ್ಲ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ಮುಂದಿನ ದಿನಗಳಲ್ಲಿ ಆರೋಗ್ಯ, ಸಂತೋಷ ಮತ್ತು ಗುರು ಕೃಪೆ ದೊರೆಯಲೆಂದು ಪ್ರಾರ್ಥನೆಗಳು. ಮುಂದೆ ಇವರಿಂದ ಆಧ್ಯಾತ್ಮದ ಚಿಂತನೆಗಳು ಪಸರಿಸಲಿ. ಹೊಸ ಕೃತಿಗಳು ರಚನೆಗೊಳ್ಳಲಿ ಎಂದು ಆಶಿಸುತ್ತೇನೆ.
-ತಾರಾನಾಥ್ ಮೇಸ್ತ ಶಿರೂರು